ಪುಟಗಳು

31 December 2011

ವರ್ಷ ಕಳೆದರೇನು.... ನಾವು ನಾವೇ....!!!


ಇತಿಹಾಸದ ಪುಟಕ್ಕೆ ಮತ್ತೊದು ವರ್ಷ ಸೇರಿದೆ....ಇಂಥಹ ಅದೆಷ್ಟೋ ವರ್ಷಗಳು ಸರಿದಿವೆ ಆದರೂ ಮನುಷ್ಯನ ಆಸೆಗೆ ಮಿತಿಯೇ ಇಲ್ಲ, ಇದು ಅದೆಷ್ಟು ಸತ್ಯವಾದ ಮಾತು...ಹಣ, ಅಂತಸ್ತು, ಹೆಸರು ಇತ್ಯಾದಿ ಇತ್ಯಾದಿ ಅವನ ಬಯಕೆ... ಇದೆಲ್ಲ ಬಿಡಿ ಇದರಂತಹ ಅದೆಷ್ಟೋ ವರ್ಷ ಕಳೆದರು ಇನ್ನು ಬಾಳಿ ಬದುಕಬೇಕೆಂಬ ಆಸೆ...ಬದುಕಿರುವಷ್ಟು ದಿನ ಸುಖದಿಂದಲೇ ಬದುಕಬೇಕೆಂಬ ಕನಸು...ನಮಗೆಲ್ಲ ಗೊತ್ತಿರುತ್ತದೆ ಬದುಕಿನಲ್ಲಿ ಬರೀ ಸುಖವನ್ನೇ ಅನುಭವಿಸಲು ಸಾದ್ಯವಿಲ್ಲ ಎಂದು...ಆದರು ನಿಲುಕದಕ್ಕೆ ಕೈ ಚಾಚುತ್ತಿರುತ್ತೇವೆ...ನಮಗೆ ಏನು ಸಿಕ್ಕರೆ ಸುಖವಾಗಿರುತ್ತೇವೆ ಎಂಬುದರ ಅರಿವು ನಮಗಿರುತ್ತದೆ.... ಅಷ್ಟಕ್ಕೂ ನಾವು ಬಯಸುವುದೇನು?? ಇಡೀ ಜೀವನ ನೆಮ್ಮದಿಯಾಗಿ  ಇರಬೇಕಂದೆ?? ಬಹಳಷ್ಟು ಜನರ ಮಟ್ಟಿಗೆ ಇದು ಹೌದು ಎನ್ನುವುದಾದರೆ ಆ ನೆಮ್ಮದಿ ಎಂಬ ಪದದಲ್ಲಿ ಏನೆಲ್ಲಾ ಅಡಗಿದೆ....ನೆಮ್ಮದಿಯಾಗಿ ಇರಲು ಬಯಸುವುದು ಇಷ್ಟೇ....ಒಂದು ಸ್ವಂತ ಮನೆ...ಒಂದು ಕಾರು..ಮುದ್ದಾದ ಸಂಸಾರ...ನಮ್ಮ ಸರ್ವಜ್ಞನ ವಚನ ಇದೆಯಲ್ಲ...ಬೆಚ್ಚನೆ ಗೂಡು..ವೆಚ್ಚಕ್ಕೆ ಹೊನ್ನು..ಇಚ್ಛೆ ಅರಿವ ಸತಿ.. ಇಷ್ಟಿದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚು ಎಂದು ಆದರೆ ನಾವು ಸ್ವರ್ಗಕ್ಕೆ ಕಿಚ್ಚು ಹಚ್ಚುವ ಬದಲು ಇರುವ ಜೀವನವನ್ನ ನರಕ ಮಾಡಿಕೊಂಡು ಸ್ವರ್ಗಕ್ಕೆ ಹೋಗಲು ಪರಿತಪಿಸುತ್ತಿರುತ್ತೇವೆ.
ಇದು ಒಬ್ಬ  ವ್ಯಕ್ತಿಯ ಕಥೆಯಾದರೆ ಇನ್ನು ವ್ಯವಸ್ಥೆಗೆ ಬರೋಣ..ನಮ್ಮ ವ್ಯವಸ್ಥೆಯೋ ಭ್ರಷ್ಟಾಚಾರದಲ್ಲಿ ಮುಳುಗಿ ಮಿಂದು ಅದರಲ್ಲಿಯೂ ಬೆರೆತು ಹೋಗಿದೆ...ವ್ಯವಸ್ಥೆ ಎಂದರೆ ಭ್ರಷ್ಟಾಚಾರ... ಭ್ರಷ್ಟಾಚಾರ  ಎಂದರೆ ವ್ಯವಸ್ಥೆ ಎಂಬಂತಾಗಿದೆ...೨೦೧೦ ಹಗರಣಗಳ ಸರಮಾಲೆಯನ್ನೇ ನಾವು ನೋಡಿದ್ದೇವೆ ೨೦೧೧ ಅದಕಿಂತ ಏನು ಭಿನ್ನವಾಗಿಲ್ಲ... ಹಗರಣಗಳು...ರಾಜಕೀಯ ಸಮರ...ಕುರ್ಚಿಗಾಗಿ ಗುದ್ದಾಟ... ಎಲ್ಲಿ ಹೆಚ್ಚು ಲಾಭ ಮಾಡಿಕೊಳ್ಳಬಹುದೋ ಅಲ್ಲಿ ತಮ್ಮ ಬೆಲೆ ಬೇಯಿಸಿಕೊಳ್ಳುವ ಹೊಲಸು ನಾಯಕರು, ಪಕ್ಷದಿಂದ ಪಕ್ಷಕ್ಕೆ ಹಾರುವ...ಪಕ್ಷದಲ್ಲಿ ನಮಗೆ ಬೆಲೆ ಇಲ್ಲ ಎಂದು ರಾಜಿನಾಮೆ ಕೊಡುವ ನಾಯಕರು,...ಅಲ್ಲಿ ರಾಜಿನಾಮೆ ನೀಡಿ ಚುನಾವಣೆ ಎದುರಿಸಲು ನಾನು ಸಿದ್ದ ಎಂದು ಹೆಮ್ಮೆಯಿಂದ ದೇಶ ರಕ್ಷಣೆಗೆ ಹೊರಡಲು ಸಿದ್ದವಿರುವ ಸೈನಿಕರಂತೆ ಹೆಮ್ಮೆಯಿಂದ  ಹೇಳಿಕೊಳ್ಳುವ ಹೊಲಸು ರಾಜಕೀಯ ವ್ಯಕ್ತಿಗಳು...ಚುನಾವಣೆಗೆಂದು ಲಕ್ಷಂತ ರುಪಾಯಿ ಖರ್ಚು ಮಾಡಿ ಅದನ್ನು ಸಾಮಾನ್ಯ ಜನರ ತಲೆಯ ಮೇಲೆ ಹೇರುವುದು... ಜನ ಸಾಮಾನ್ಯ  ಅಲ್ಲಿ ಇಲ್ಲಿ ಉಳಿಸಿ ತೆರಿಗೆ ಕಟ್ಟಿದ ಹಣ ಎಲ್ಲಿಲ್ಲಿ ಹೇಗೇಗೆ ವೆಚ್ಚವಾಗುತ್ತದೆ ನೋಡಿ...
ಇನ್ನು ಸಾಮಾನ್ಯನ ಕೂಗು ಕೇಳದ ಸರ್ಕಾರ....೩ ತಿಂಗಳಿಗೊಮ್ಮೆ ೪ ತಿಂಗಳಿಗೊಮ್ಮೆ ಪೆಟ್ರೋಲ್, ಹಾಲು ದಿನ ಬಳಕೆ ವಸ್ತುಗಳ ಬೆಲೆ ಏರಿಕೆ....ಹೇಗಿದ್ದರೂ ಕೊಂಡುಕೊಳ್ಳುತ್ತರೆಂಬ ಭಂಡ ಧೈರ್ಯ ನಮ್ಮ ಸರ್ಕಾರಕ್ಕೆ...ಅಭಿವೃದ್ದಿ ಅಬ್ಧಿವ್ರುದ್ದಿ ಎಂದು ಬೊಬ್ಬೆ ಹೊಡೆಯುವ ಸರ್ಕಾರ...ನಮ್ಮ ಸರ್ಕಾರ ಇಷ್ಟು ಮಾಡಿದೆ...ಅಷ್ಟು ಮಾಡಿದೆ ಎಂದು ಹೇಳಿಕೊಳ್ಳುವ ಮುಂಚೆ ಮಾಡಿರುವಷ್ಟರಲ್ಲಿ ಎಷ್ಟು ಪಾಲು ನಿಜವಾಗಿ ಸೇರಬೇಕಾಗಿರುವ ಕಡೆ ಸೇರಿದೆ ಎಂದು ನೋಡಿದರೆ ಉತ್ತಮ....ವ್ಯವಸ್ಥೆಯ ಬಗ್ಗೆ ಭ್ರಮ ನಿರಸನ ಗೊಂಡಿರುವ ಮತದಾರ ಪ್ರಭು...ಪ್ರಭು ಅಲ್ಲ ನಿಜವಾದ ಅರ್ಥದಲ್ಲಿ ಭಿಕ್ಷುಕ....ಅಯ್ಯೋ ಬಿಡಿ ಇಲ್ಲ ಸರ್ಕಾರಗಳು ಅಷ್ಟೇ ಓಟಕುವುದಷ್ಟೇ ನಮ್ಮ ಕೈನಲ್ಲಿರುವುದು ಎಂದು ಕೈಚೆಲ್ಲಿ ಕುಳಿತುಬಿಟ್ಟಿದ್ದಾನೆ.  ನಾವು ಬದಲಾವಣೆ ಅಗಲಿ ಎಂದು ಬಯಸುತ್ತೇವೆ ಹೊರತು ಆ ಬದಲಾವಣೆ ನನ್ನಿಂದಲೇ ಆಗಲಿ ಎಂದು ಏಕೆ ಯೋಚಿಸದೆ, ಅದಕ್ಕೆ ಪ್ರಯತ್ನವೂ ಪಡದೆ....ಪ್ರಯತ್ನ ಪಟ್ಟವರನ್ನು ಅವರ ಪಾಡಿಗೆ ಬಿಡದೆ ಟೀಕಿಸುತ್ತಾ ಇರುತ್ತೇವೆ.
ಬದಲಾವಣೆ ಜಗದ ನಿಯಮ ಅನ್ನೋ ಮಾತಿದೆ, ಜಗತ್ತು ಬದಲಾಗುತ್ತಿದೆಯೋ ಇಲ್ಲ ಮನುಷ್ಯ ಬದಲಾಗುತ್ತಿದ್ದಾನೋ ಎರಡು ಗೊಂದಲ...ಜಗತ್ತು...ಕಾಲ ಬದಲಾದರು ಯಾವಾಗಲು ನಮ್ಮ ಬೇಡಿಕೆಗಳು ಯಾಕೆ ಬದಲಾಗುವುದಿಲ್ಲ...ಯಾವಾಗಲು ಸುಖವಾಗಿರಬೇಕು...ಹಣ ಸಂಪಾದಿಸಬೇಕು...ಇವೆಲ್ಲವನ್ನೂ ಬಿಟ್ಟು ಒಂದು ಸುಂದರ  ಅರ್ಥಪೂರ್ಣ ಬದುಕು ನಡೆಸಲು ಮುಂದಾಗುವುದಕ್ಕೆ ಇನ್ನು ಇಂಥಹ ಅದೆಷ್ಟು ವರ್ಷಗಳು ಸರಿಯಬೇಕೋ.....???
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.....೨೦೧೨ ನಿಮ್ಮಲ್ಲರಿಗೂ ಸುಖ, ಶಾಂತಿ ನೆಮ್ಮದಿ ತರಲೆಂದು ಹಾರೈಸುತ್ತೇನೆ....ಇದೇನಪ್ಪ ಇಷ್ಟು ಹೊತ್ತು ಮನುಷ್ಯ ಸುಖ, ನೆಮ್ಮದಿ ಮಾತ್ರ ಬಯಸುತ್ತಾನೆ... ಎಂತಹ ಸ್ವಾರ್ಥ ಜೀವಿ ಮನುಷ್ಯ ಎಂದು ಹೇಳಿ ಮತ್ತೆ ಸುಖ, ಶಾಂತಿ ನೆಮ್ಮದಿ ಸಿಗಲಿ ಎಂದು ಹಾರೈಸುತ್ತಿದ್ದೇನೆ ಎಂದು ಕೇಳಬೇಡಿ....ಹಾರೈಸುವುದೊಂದೇ  ನಮ್ಮ ಕೈಲಿರುವುದು ಅಲ್ಲವೇ???

15 December 2011

ಕ್ರಾಂತಿಯ ಆರಂಭ ಎಲ್ಲಿಂದ ?? ಯಾರಿಂದ ??



ಮಾನವನ ಸ್ವಭಾವವೇ ಹಾಗೆ ಅನಿಸುತ್ತದೆ ಇರುವ ವ್ಯವಸ್ಥೆ ಸರಿ ಇಲ್ಲ ಎಂದು ಗೊಣಗುತ್ತಾ ಇರುವ ವ್ಯವಸ್ಥೆಯನ್ನು ಬದಲಾಯಿಸಬೇಕು ಎಂದು ಗುಂಪಿನಲ್ಲಿ ನಿಂತು ಸ್ನೇಹಿತರ ಜೊತೆ ಹರಟುತ್ತಿರುತ್ತೇವೆ. ಅಲ್ಲಿ ನಾವು ಮಾತನಾಡುವ ಪರಿ ಹೇಗಿರುತ್ತದೆಯೆಂದರೆ ಅಲ್ಲಿಂದಲೇ ಒಬ್ಬ ಕ್ರಾಂತಿಕಾರಿ ವ್ಯಕ್ತಿಯ ಉಗಮವಾಗಿ ವ್ಯವಸ್ಥೆಯ ವಿರುದ್ಧ ಹೋರಾಡಿ ಬದಲಾವಣೆ ತಂದುಬಿಡುತ್ತೇವೆನೋ ಎಂಬ ಭಾವನೆ ಮೊಳೆಯುತ್ತದೆ, ನಂತರ ಈ ಎಲ್ಲಾ ಯೋಚನೆಗಳು ನಡೆದ ಮರು ಘಳಿಗೆ ಇಲ್ಲವನ್ನು ಮರೆತು ನಮ್ಮ ಮನೆ-ನಮ್ಮದೇ ಅದ ವೈಯುಕ್ತಿಕ ಸಮಸ್ಯೆಗಳ ಸುಳಿಯಲ್ಲಿ ಮುಳುಗಿ ಹೋಗುತ್ತೇವೆ. ಇನ್ನು ರಸ್ತೆ ಬದಿಯಲ್ಲಿ ನಿಂತು ಉದ್ದುದ್ದ ಭಾಷಣ ಮಾಡುವಾಗ ಇರುವ ಆಸಕ್ತಿ ಮತ್ತು ನಾಯಕತ್ವದ ಭಾವನೆ ಅದರ ಮುಂದಾಳತ್ವ ವಹಿಸಿ ಅದನ್ನು ಕಾರ್ಯರೂಪಕ್ಕೆ ತರುವಾಗ ಮಾತ್ರ ಹಿಂದೆ ಸರಿದು ಬಿಡುತ್ತದೆ. 

ಒಬ್ಬ ಸಾಮಾನ್ಯ ಮನುಷ್ಯ ಕ್ರಾಂತಿ ಎಂಬ ಪದ ಕೇಳುತ್ತಲೇ ಅವನಿಗೆ ಬರುವ ಯೋಚನೆ ಯಾವುದೊ ಒಂದು ಬಾಹ್ಯ ಶಕ್ತಿಯ ಕಾರಣ ಅಥವಾ ಆಗಮನದಿಂದಾಗಿ ಪ್ರಸ್ತುತ ಪರಿಸ್ಥಿತಿಯನ್ನು ಬದಲಾಯಿಸಿವುದು ಎಂದು ಅನೇಕರು ಭಾವಿಸಿರುತ್ತಾರೆ. ಯಾವುದೊ ಒಬ್ಬ ವ್ಯಕ್ತಿ ಅಥವ ಯಾವುದೊ ಒಂದು ಸಂಘಟನೆ ಕ್ರಾಂತಿಯ ಮುಂದಾಳತ್ವ ವಹಿಸಿ ಪರಿವರ್ತನೆ ಆಗುತ್ತದೆ ಎಂಬುದು ಎಲ್ಲರ ಸಾಮಾನ್ಯ ನಂಬಿಕೆ. ಇತಿಹಾಸದ ಪುಟಗಳನ್ನ ತಿರುವಿ ಹಾಕಿದಾಗ ಅದೆಷ್ಟೋ ಕ್ರಾಂತಿಗಳು ಸಂಭವಿಸಿರುವುದು ಕಣ್ಣಮುಂದೆ ಬಂದು ನಿಲ್ಲುತ್ತವೆ; ಒಂದು ವ್ಯವಸ್ಥೆ ಅಥವಾ ವ್ಯಕ್ತಿಯ ದಬ್ಬಾಳಿಕೆಯಿಂದ ಬೇಸತ್ತ ಜನರು ದಂಗೆಯೆದ್ದ ಅನೇಕ ಉದಾಹರಣೆಗಳು ಕಾಣಸಿಗುತ್ತವೆ. 1792 1802ರ ಕಾಲಘಟ್ಟದಲ್ಲಿ ನೆಡದ ಫ್ರೆಂಚ್ ಕ್ರಾಂತಿ, ರಾಜನ ದಬ್ಬಾಳಿಕೆಗೆ ಬೆಂದ ಜನರು ದಂಗೆಯೆದ್ದದ್ದು; ಅಂತೆಯೇ 1917 ರಲ್ಲಿ ಸಂಭವಿಸಿದ ರಷ್ಯ ಕ್ರಾಂತಿಯು ಸಹ ತನ್ನದೇ ಆದ ಸ್ವರೂಪ ಹೊಂದಿತ್ತು, ಕ್ರಾಂತಿ ಎಂದಾಗ ಕೇವಲ ಯುದ್ದಗಳೆಂದಲ್ಲ, ಒಂದು ಕಡೆ ಯುದ್ದಗಳ ಮೂಲಕ ಕ್ರಾಂತಿಯು ತನ್ನ ಸ್ವರೂಪವನ್ನು ತೋರಿಸಿದರೆ ಇನ್ನೊಂದೆಡೆ ಕೈಗಾರಿಕ ಕ್ರಾಂತಿ, ಹಸಿರು ಕ್ರಾಂತಿಯಂತಹ ಅದೆಷ್ಟೋ ಕ್ರಾಂತಿಗಳು ಮನುಷ್ಯನ ಜೀವನದ ಶೈಲಿಗೆ ಸದ್ದಿಲ್ಲದೆ ಲಗ್ಗೆ ಹಾಕಿರುವುದು ಕಾಣುತ್ತೇವೆ. 

ಯುದ್ದಗಳ ಮೂಲಕ ಇರುವ ವ್ಯವಸ್ಥೆಯ ಪರಿವರ್ತನೆ ಆಗಿರುವುದು ಕ್ರಾಂತಿಯ ಒಂದು ಮುಖವಾದರೆ, ವಿವಿಧ ರೀತಿಯ ಆವಿಷ್ಕಾರ–ಅನ್ವೇಷಣೆಗಳ ಮೂಲಕ ಸಮಾಜ ಪರಿವರ್ತನೆಯ ಕಡೆಗೆ ಸಾಗುವಂತೆ ಮಾಡುವುದು ನಮಗೆ ಕಂಡಿರುವ ಕ್ರಾಂತಿಯ ಇನ್ನೊಂದು ಮುಖ. ಕ್ರಾಂತಿ ಸಂಭವಿಸಿತೆಂದರೆ ಅದರ ಪರಿಣಾಮ ಧನಾತ್ಮಕವಾಗಿಯೇ ಇರುತ್ತದೆಂದು ಹೇಳಲಾಗದು, ಕೆಲವು ಸಂದರ್ಭಗಳಲ್ಲಿ ಆ ಕ್ಷಣಕ್ಕೆ ಅದ ಪರಿವರ್ತನೆ ಧನಾತ್ಮಕವಾಗಿಯೇ ಕಂಡರೂ ಭವಿಷ್ಯದಲ್ಲಿ ಅದರ ಪರಿಣಾಮಗಳು ಅತ್ಯಂತ ಭೀಕರವಾಗಿರಬಹುದು. ಇದಕ್ಕೆ ಅನೇಕ ನಿದರ್ಶನಗಳು ಕಾಣಸಿಗುತ್ತವೆ. ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನದಲ್ಲಿ ನಡೆದ ಕೈಗಾರಿಕ ಕ್ರಾಂತಿಯ ಪರಿಣಾಮವಾಗಿ ಕೃಷಿ, ಉತ್ಪಾದನೆ, ಗಣಿಗಾರಿಕೆ, ಸಾರಿಗೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ  ಮಹತ್ವದ ಪರಿವರ್ತನೆ ತಂದಿತು. ಇದರ  ಪರಿಣಾಮವಾಗಿ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಬದಲಾವಣೆ ಉಂಟಾಗಿ ಮಾನವ ಇತಿಹಾಸದಲ್ಲಿ ಅತ್ಯಂತ ಮಹತ್ವದ ತಿರುವು ಇಂದು ಗುರುತಿಸುವಂತಾಗಿದೆ. ಇನ್ನು ಹಸಿರು ಕ್ರಾಂತಿಯಿಂದಾಗಿ ಆದ ಪರಿಣಾಮ ತತ್ಕ್ಷಣಕ್ಕೆ ಅತೀ ಮಹತ್ವದೆನಿಸಿದರು, ಅತಿಯಾದ ರಾಸಾಯನಿಕಗಳು, ವಿವಿ ರೀತಿಯ ಔಷಧಿಗಳ ಬಳಕೆಯಿಂದಾಗಿ ಭೂಮಿಯ ಮೇಲಾದ ಪರಿಣಾಮವನ್ನು ನಾವು ಮರೆಯುವಂತಿಲ್ಲ; ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಾ ಬಂದಿರುವುದು ಜೊತೆಗೆ ಅತೀ ಹೆಚ್ಚು ಇಳುವರಿ ಪಡೆಯಲು ನಾವು ಬಳಸುವ ರಾಸಾಯನಿಕಗಳ ಸಂಖ್ಯೆ ಕಡಿಮೆಯೇನಿಲ್ಲ.

ಜಪಾನ್ ನಲ್ಲಿ ಅದ ಅನಿಲ ಸೋರಿಕೆಯ ಪರಿಣಾಮ ನಮ್ಮೆಲ್ಲರ ಕಣ್ಣ ಮುಂದೆ ಹಾಗೆಯೆ ಇದೆ... ಇತ್ತೀಚಿಗೆ ನಡೆದ ಘಟನೆಯನ್ನು ಮರೆಯಲು ಹೇಗೆ ಸಾಧ್ಯ? ಪರಮಾಣು ಶಕ್ತಿಯಿಂದ ಜಗತ್ತನ್ನೇ ತನ್ನ ಹತೋಟಿಗೆ ತರುತ್ತೇನೆ ಎಂದು ಯೋಚಿಸಿದ ಮಾನವ ಪರಮಾಣು ಶಕ್ತಿಯಿಂದ ಕ್ರಾಂತಿ ಮಾಡಲು ಹೊರಟ, ಅದರಿಂದ ಆದ ದುಷ್ಪರಿಣಾಮ ನಮ್ಮೆಲ್ಲರಿಗೂ ತಿಳಿದಿದೆ. ಹೀಗೆ ಮಾನವ ವಿವಿದ ರೀತಿಯ ಅನ್ವೇಷಣೆಗಳ ಮೂಲಕ, ಹೊಸ ಹೊಸ ತಂತ್ರಜ್ಞಾನಗಳ ಬಳಕೆಯಿಂದಾಗಿ ಹೊಸ ಆವಿಷ್ಕಾರಗಳ ಮೂಲಕ ಅಭಿವೃದ್ದಿಯ ಕಡೆ ಸಾಗುತ್ತಿದ್ದೇವೆ ಎಂದು ತಿಳಿದು ಭವಿಷ್ಯದಲ್ಲಿ ಅದರಿಂದ ಆಗುವ ಪರಿಣಾಮಗಳ ಬಗ್ಗೆ ಯೋಚಿಸದೆ ಇಂದಿನ ಫಲಿತಾಂಶದ ಬಗ್ಗೆ ಮಾತ್ರ ಯೋಚಿಸುವುದರ ಪರಿಣಾಮ ಏನಾಗುತ್ತದೆ ಎಂಬುದಕ್ಕೆ ಇದು ಒಂದು ಜ್ವಲಂತ ನಿರ್ಶನ.

ಹಿಂದೆಲ್ಲಾ ಕ್ರಾಂತಿ ಎಂದರೆ ತಟ್ಟನೆ ನೆನಪಾಗುವುದು ಸಾಮಾಜಿಕ ಬದಲಾವಣೆ ಅಥವಾ ವ್ಯವಸ್ಥೆಯನ್ನೇ ಬದಲಾಯಿಸುವುದಕ್ಕಾಗಿ; ಇಂಥಹ ಒಂದು ಮಹತ್ತರ ಉದ್ದೇಶಕ್ಕೆ ಕ್ರಾಂತಿಯಂತಹ ಕಾರ್ಯಾಚರಣೆಗಳು ನಡೆಯುತ್ತಿತ್ತು. ಹಾಗಾಗಿ ಸಾಮಾನ್ಯರಿಗೆ ಕ್ರಾಂತಿ ಎಂದರೆ ದೊಡ್ಡ ವಿಷಯ ಮತ್ತು ಭಾರವಾದ ಪದವಾಗಿಯೂ ಕಾಣುತ್ತಿತ್ತು. ಆದರೆ ಇಂದು ಸಣ್ಣ ಪುಟ್ಟ ಕಾಲೆಳೆಯುವ ತಂತ್ರಗಳನ್ನು ಕೂಡಾ ಕ್ರಾಂತಿ ಪಟ್ಟಿಯಲ್ಲಿ ಸೇರಿಸಿದ್ದೇವೆ, ಕ್ರಾಂತಿಯ ಮೂಲ ಅರ್ಥ ನಾವು ಎಂದುಕೊಂಡ ಸ್ವರೂಪದಲ್ಲಿಲ್ಲ. ನಮಗೆಲ್ಲಾ ತಿಳಿದಿರುವಂತೆ ಕರ್ನಾಟಕ ರಾಜ್ಯದ ರಾಜಕೀಯ ಡೊಂಬರಾಟವನ್ನು ಮಾಧ್ಯಮದಲ್ಲಿ ಬಿತ್ತರಿಸಿರುವ ರೀತಿ, ಪ್ರತಿದಿನ ಒಂದಲ್ಲಾ ಒಂದು ಪತ್ರಿಕೆಯಲ್ಲಿ ಈ ಬಗ್ಗೆ ಕ್ರಾಂತಿ ಎಂಬ ಪದ ಬಳಕೆ ಮಾಡಿರುತ್ತಾರೆ.  

ಬದಲಾವಣೆ ಯಾರಿಗೆ ಬೇಡ!, ಬದಲಾವಣೆಯಿಂದ ಏನಾದರು ಒಳ್ಳೆಯದಾಗಲಿ ಎನ್ನುವ ಆಕಾಂಕ್ಷೆ ಸಹಜವಾಗಿಯೇ ಇರುತ್ತದೆ. ಹಾಗಾಗಿ ಕ್ರಾಂತಿಯ ಗುಣಗಳು ಎಲ್ಲರಲ್ಲಿಯೂ ಇರುತ್ತವೆ, ಎಲ್ಲರೂ ಅದನ್ನು ಪ್ರದರ್ಶಿಸಲು ಹೋಗುವವರೆ, ಸಾರ್ವಜನಿಕ ಹಿತಾಸಕ್ತಿಗೋಸ್ಕರ ತೊಡಗಿಕೊಳ್ಳುವವರಿಗೆ ಹಲವರ ಸಹಾಯ ಹಸ್ಥ ಸಿಗುತ್ತದೆ. ಇತ್ತೀಚಿಗೆ ಭ್ರಷ್ಟಾಚಾರದ ವಿರುದ್ದ ಕ್ರಾಂತಿಗೆ ನಾಂದಿ ಹಾಡಿದ ಅಣ್ಣಾ ಹಜಾರೆ ಇದಕ್ಕೊಂದು ಉತ್ತಮ ನಿದರ್ಶನ. ಇನ್ನು ಕೆಲವರದ್ದು ಕ್ರಾಂತಿಯ ಸ್ವರೂಪ ಮತ್ತು ಮುನ್ನಡೆಸುವಲ್ಲಿನ ಕಾರ್ಯತಂತ್ರಗಳು ವಿಭಿನ್ನವಾಗಿರುತ್ತದೆ, ಕೆಲವೊಮ್ಮೆ ಸಂದರ್ಭ ಮತ್ತು ಪರಿಸ್ಥಿತಿಯಿಂದ ಹತ್ತಿಕ್ಕಲ್ಪಡುತ್ತದೆ ಅಥವಾ ಅದರ ಮೊಣಚನ್ನು ಕಳೆದುಕೊಂಡಿರುತ್ತದೆ. ಕ್ರಾಂತಿ ಮನುಷ್ಯನ ಸಹಜ ಗುಣವಾಗಬೇಕು, ಕ್ರಾಂತಿ ಎಲ್ಲೂ ಅದೃಷ್ಯವಾಗಿರುವುದಿಲ್ಲ. ಪ್ರತೀ ವ್ಯಕ್ತಿಯಲ್ಲಿಯೂ ಕ್ರಾಂತಿಯ ಸ್ವಭಾವವಿರುತ್ತದೆ ಕೆಲವರು ಪ್ರಕಟಿಸುತ್ತಾರೆ ಮತ್ತೆ ಕೆಲವರು ಕ್ರಾಂತಿಯನ್ನು ಬೆಂಬಲಿಸುವ ಮೂಲಕ ವ್ಯಕ್ತಪಡಿಸುತ್ತಾರೆ ಇನ್ನು ಕೆಲವರು ಸಂಘಗಳು, ಸಂಘಟನೆ ಇತ್ಯಾದಿಗಳನ್ನು ಸೇರುವ ಮೂಲಕ ವ್ಯಕ್ತಪಡಿಸುತ್ತಾರೆ. ಒಟ್ಟಾರೆಯಾಗಿ ವ್ಯಕ್ತಿ ತನ್ನ ಬೇಕು ಬೇಡಗಳನ್ನು ವಿಮರ್ಷಿಸಬೇಕು, ಬೇಡವಾದಾಗ, ಶೋಷಣೆಗೆ ಒಳಗಾದಾಗ ದೊಡ್ಡ ದ್ವನಿಯೊಂದು ಮೊಳಗಬೇಕು, ಆಗ ಕ್ರಾಂತಿಗೆ ನಾಂದಿ ಹಾಡಿದಂತೆ ಮತ್ತು ಅದರ ಧ್ವನಿಗೆ ಮನುಕುಲದ ಪ್ರಾಮಾಣಿಕ ಒಳಿತಿಗೆ ಕೈಜೋಡಿಸುವ ಜೊತೆಗೆ ಅನ್ಯಾಯವನ್ನು ವಿರೋಧಿಸುವ ಜನಸಮೂಹ ಕಟ್ಟಿಕೊಳ್ಳುವ ಶಕ್ತಿ ಅದಕ್ಕಿರಬೇಕು. ಇದರಿಂದಾಗಿ ಸಮಾಜ ಒಂದು ಬದುಕಲು ಯೋಗ್ಯ ತಾಣವಾಗಿ ರೂಪುಗೊಳ್ಳುವಲ್ಲಿ ಎರಡು ಮಾತಿಲ್ಲ ಅಲ್ಲವೇ??

29 November 2011

ನಿಸರ್ಗಮಾತೆಗೆ ನಾವೆಷ್ಟು ಆಭಾರಿಯಾಗಿದ್ದೇವೆ???


ಒಂದು ಪ್ರದೇಶದ ಅಭಿವೃದ್ದಿ ಅಲ್ಲಿ ದೊರೆಯುವ ನೈಸರ್ಗಿಕ ಸಂಪತ್ತು ಮತ್ತು ಅದರ ಸರಿಯಾದ ಬಳಕೆಯನ್ನು ಅವಲಂಬಿಸಿರುತ್ತದೆ ಎಂಬುದನ್ನು ನಾವೆಲ್ಲ ಅರಿತಿದ್ದೇವೆ. ನೈಸರ್ಗಿಕ ಸಂಪತ್ತಿನ ಬಳಕೆಯ ಜೊತೆಗೆ ಪರಿಸರ ಸಂರಕ್ಷಣೆಯ ಹೊಣೆಯು ಕೂಡ ನಮ್ಮದೇ ಆಗಿರುತ್ತದೆ. ನಮ್ಮಲ್ಲಿ ಎಷ್ಟು ಜನರು ಪರಿಸರ ಸಂರಕ್ಷಣೆಯ ಬಗ್ಗೆ ಯೋಚಿಸುತ್ತಾರೆ? ತಮ್ಮ ದಿನ ನಿತ್ಯದ ಜೀವನದ ಜಂಜಾಟದಲ್ಲಿ ಅದೆಷ್ಟು ಜನರು ಇದರ ಬಗ್ಗೆ ತಮ್ಮ ಅಮೂಲ್ಯವಾದ ಸಮಯವನ್ನು ಇದರ ಬಗ್ಗೆ ಯೋಚಿಸಲು ಕಳೆಯುತ್ತಾರೆ? ಎಷ್ಟು ಜನರು ಪರಿಸರ ಸಂರಕ್ಷಣೆಯ ಬಗ್ಗೆ ನಿಜವಾದ ಕಾಳಜಿ ಹೊಂದಿದ್ದಾರೆ? ಪ್ರಜಾಪ್ರಭುತ್ವ ವ್ಯವಸ್ಥೆ, ನಮ್ಮ ಹಕ್ಕು-ಬಾಧ್ಯತೆ, ವ್ಯಕ್ತಿ ಸ್ವಾತಂತ್ರ ಮತ್ತು ನಮ್ಮ ಮೂಲಭೂತ ಕರ್ತವ್ಯಗಳ ಬಗ್ಗೆ ಮಾತನಾಡುವ ನಾವು ಪರಿಸರ ಸಂರಕ್ಷಣೆಯನ್ನು ಕೂಡ ನಮ್ಮ ಕರ್ತವ್ಯಗಳಲ್ಲಿ ಒಂದು ಎಂದು ಏಕೆ ಭಾವಿಸುವುದಿಲ್ಲ? ದಿನ ನಿತ್ಯದ ನಾವು ಓಡಾಡುವಾಗ, ವಾಹನಗಳಲ್ಲ್ಲಿ ಪ್ರಯಾಣಿಸುವಾಗ, ಸ್ನೇಹಿತರ ಜೊತೆ ಗುಂಪಿನಲ್ಲಿ ನಿಂತು ಮಾತನಾಡುತ್ತಿರುವಾಗ...ಹೇಗೆ ಅನೇಕ ಸಂಧರ್ಭಗಳಲ್ಲಿ ನಮಗೆ ಅರಿವಿಲ್ಲದಂತೆ ಪರಿಸರ ಮಾಲಿನ್ಯ ಮಾಡುತ್ತಿರುತ್ತೇವೆ. ಕೇವಲ ನಮ್ಮ ಅಗತ್ಯ ಮತ್ತು ಅನುಕೂಲತೆಯ ಬಗ್ಗೆ ಚಿಂತಿಸುವ ನಾವು ಎಂದಾದರೂ ನಮ್ಮಿಂದ ಪ್ರಕೃತಿಯ ಮೇಲಾಗುತ್ತಿರುವ ದಬ್ಬಾಳಿಕೆಯ ಬಗ್ಗೆ ಚಿಂತಿಸಿದ್ದೇವೆಯೇ? ಸರ್ಕಾರ ಪರಿಸರ ಸಂರಕ್ಷಣೆಗಾಗಿ ಅನೇಕ ಕಾರ್ಯಕ್ರಮಗಳು, ಯೋಜನೆಗಳು, ಅನೇಕ ನಿಯಮಗಳನ್ನು ಜಾರಿಗೆ ತಂದಿದ್ದರೂ ಅವುಗಳನ್ನು ಪಾಲಿಸುತ್ತಿದ್ದೆವೆಯೇ? ಜನರೇ ಅವುಗಳನ್ನು ಪಾಲಿಸದೆ ಹೋದಾಗ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅವುಗಳನ್ನು ಅನುಷ್ಟಾನಕ್ಕೆ ತಂದ ಪ್ರಯೋಜನವಾದರೂ ಏನು? ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇದವಿದ್ದರೂ ಎಷ್ಟು ಜನರು ಅದನ್ನು ಪಾಲಿಸುತ್ತಿದ್ದಾರೆ? ಅಸಲಿಗೆ ಪಾಲಿಸದೆ ಇರುವವರಲ್ಲಿ ಹೆಚ್ಚು ಜನರು ವಿದ್ಯಾವಂತರೇ ಆಗಿರುತ್ತಾರೆ ಎಂಬುದು ನೋವಿನ ಸಂಗತಿ. 
ತಮ್ಮ ಮನೆಯ ಒಳಗೆ ಮಾತ್ರ ಕಸ ಇರಬಾರದು, ಮನೆಯ ಹೊಸಲಿನಿಂದ ಹೊರಗೆ ಹೇಗಾದರೂ ಇರಲಿ ಎನ್ನುವ ಮನೋಭಾವುಳ್ಳ ಜನರಿದ್ದಾರೆ. ಇನ್ನು ನಿಸರ್ಗದ ಅಂದವನ್ನು ಸವಿಯಲೆಂದು ಪ್ರವಾಸ ಹೋಗುವ ಮಂದಿ ನಿಸರ್ಗದ ಸೊಬಗನ್ನು ಸವಿಯುವುದರ ಜೊತೆಗೆ ಅಲ್ಲಿನ ಪರಿಸರ ಮಾಲಿನ್ಯಕ್ಕೆ ತಮ್ಮ ಪಾಲನ್ನು ಕೊಟ್ಟು ಬರುತ್ತಾರೆ. ಅನೇಕ ಜನರ ತಿಳುವಳಿಕೆಯೆಂದರೆ ಕೇವಲ ಓಟು ಹಾಕುವುದು ಮಾತ್ರ ನಮ್ಮ ಕರ್ತವ್ಯ ಉಳಿದ ಜವಾಬ್ಧಾರಿ ಸರ್ಕಾರದ್ದು, ಅದರಂತೆಯೇ ಪರಿಸರ ಸಂರಕ್ಷಣೆಯು ಸಹ ಸರ್ಕಾರದ್ದೇ ಕರ್ತವ್ಯವೆಂದು ಭಾವಿಸಿರುವುದು. ಇಂದು ನಾವು ಆಲೋಚಿಸುತ್ತಿರುವ ಮಟ್ಟ ಎಂಥಹದೆಂದರೆ, ನಮ್ಮ ಮನೆಯ ಒಳಗಿನ ಸ್ವಚ್ಚತೆ ಕಾಪಾಡಿಕೊಳ್ಳುವುದು ಮಾತ್ರ ನಮ್ಮ ಜವಾಬ್ಧಾರಿ ಮನೆಯ ಹೊರಗಿನ ಎಲ್ಲಾ ಕಾರ್ಯಗಳನ್ನು ಮಾಡುವುದು ಸರ್ಕಾರಕ್ಕೆ ಸೇರಿದ್ದು ಎಂಬ ಗಟ್ಟಿಯಾದ ಮನೋಭಾವನೆ ಬೆಳೆಸಿಕೊಂಡುಬಿಟ್ಟಿದ್ದೇವೆ. ಹೆಜ್ಜೆ-ಹೆಜ್ಜೆಗೂ ನಿಸರ್ಗ ಮಾತೆಯ ಪಾವಿತ್ರತೆಯನ್ನು ಹಾಳುಮಾಡುತ್ತಿರುವ ನಾವು ಅದರ ಸಂರಕ್ಷಣೆಯ ಹೊಣೆಯನ್ನು ಮಾತ್ರ ಸರ್ಕಾರಕ್ಕೆ ಬಿಟ್ಟಿದ್ದೇವೆ. ವರ್ಷಾನುವರ್ಷದಿಂದ ಬೇರುಬಿಟ್ಟು ಗಟ್ಟಿಯಾಗಿ ನಿಂತಿದ್ದ ಎಷ್ಟೋ ಮರಗಳನ್ನು ಕಡಿದು ಅಲ್ಲಿ ದೊಡ್ಡ-ದೊಡ್ಡ ವಸತಿ ಸಮುಚ್ಚಯಗಳು, ವಿವಿದ ಖಾಸಗಿ ಸಂಸ್ಥೆಗಳು ತಲೆಯೆತ್ತಿವೆ ಇದಕ್ಕೆ ನಾವು ನೀಡಿರುವ ಹೆಸರು "ಅಭಿವೃದ್ದಿ" ಎಂದು. ಇದರಿಂದ ಅನೇಕ ಜನರಿಗೆ ಕೆಲಸವೇನೋ ಸಿಗುತ್ತಿದೆ ಆದರೆ ಪ್ರಕೃತಿಯ ನಾಶದಿಂದಾಗಿ ಇಂದು ನಾವು ಬದುಕುತ್ತಿರುವುದದರು ಹೇಗೆ? ಎಷ್ಟು ಬಗೆಯ ಖಾಯಿಲೆಗಳಿಗೆ ತುತ್ತಾಗಿದ್ದೇವೆ, ಎಷ್ಟು ಒತ್ತಡದ ಬದುಕು ಸಾಗಿಸುತ್ತಿದ್ದೇವೆ? ಸರ್ಕಾರವೆಂದರೆ ನಾವು, ನಾವೆಂದರೆ ಸರ್ಕಾರ ಎಂದು ಹೇಳುವ ನಾವು ರಾಜಕೀಯ ವ್ಯಕ್ತಿಗಳನ್ನು ದೂರುವಾಗ ನಮ್ಮಿಂದಲೇ ಅವರು ಎನ್ನುವ ನಾವು, ನಾವು ವಾಸಿಸುತ್ತಿರುವ ಸುತ್ತ-ಮುತ್ತಲಿನ ಪರಿಸರ ಸಂರಕ್ಷಣೆಯೂ ನಮ್ಮದೆಂದು ಏಕೆ ತಿಳಿಯುವುದಿಲ್ಲ? ನಮ್ಮ ಪೂರ್ವಿಕರು ನೈಸರ್ಗಿಕ ಸಂಪನ್ಮೂಲಗಳ ಮಹತ್ವವನ್ನು ಅರಿತ್ತಿದ್ದರು ಅದರಿಂದಲೇ ನಮಗೆ ಇಂಥಹ ಬದುಕು ಸಿಕ್ಕಿದೆ, ಆದರೆ ಇಂದಿನ ಬಹುಮಂದಿ ಜನರಿಗೆ ಇದರ ಅರಿವೇ ಇಲ್ಲ. ದಿನನಿತ್ಯ ವಾಹನಗಳು ಹೊರಸೂಸುವ ಹೊಗೆ, ಅದರಿಂದಾಗುತ್ತಿರುವ ದುಷ್ಪರಿಣಾಮಗಳು, ಸೇವಿಸಲು ಶುದ್ದ ಗಾಳಿಯೇ ಸಿಗದಂತಾಗುವ ಪರಿಸ್ಥಿತಿ ಬಂದೊದಗುವ ಭೀತಿ, ಅನೇಕ ರೀತಿಯ ರಾಸಾಯನಿಕಗಳ ಬಳಕೆಯಿಂದ ಫಲವತ್ತತೆಯನ್ನು ಕಳೆದುಕೊಳ್ಳುತ್ತಿರುವ ಭೂಮಿ, ಕುಸಿಯುತ್ತಿರುವ ಅಂತರ್ಜಲದ ಮಟ್ಟ, ಜಲಕ್ಷಾಮ ತಲೆದೋರುವ ದಿನಗಳು ಬಹಳ ದೂರವೇನಿಲ್ಲ.
ಒಂದು ಆರೋಗ್ಯಕರ ಸಮಾಜಕ್ಕೆ ಶುದ್ದ ಕುಡಿಯುವ ನೀರಿನ ಅವಶ್ಯಕತೆ ಇದೆ ಆದರೆ ಇಂದು ಶುದ್ದ ಕುಡಿಯುವ ನೀರಿಗಾಗಿ ಹಳ್ಳಿ- ನಗರಗಲ್ಲಿ ಪರದಾಡುವ ಸ್ಥಿತಿ ಇದೆ. ನದಿ, ನಾಲೆ, ಸರೋವರಗಳು ಮಲಿನಗೊಂದು ಪರಿಸರದ ಮೇಲೆ ಕೆಟ್ಟ ಪ್ರಭಾವ ಬೀರುತ್ತಿವೆ. ನೀರಿನ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ಇನ್ನು ನಾವು ಅರಿಯದೆ ಹೋಗಿದ್ದೇವೆ. ಇನ್ನು ಬಹುತೇಕ ಪ್ರವಾಸಿ ತಾಣಗಳಲ್ಲಿ ಮತ್ತು ದಿನ ನಿತ್ಯ ನಾವು ಓಡಾಡುವ ಸ್ಥಳಗಳಲ್ಲಿ ಕಂಡುಬರುವ ಪ್ಲಾಸ್ಟಿಕ್ ತ್ಯಾಜ್ಯಗಳು ಪರಿಸರಕ್ಕೆ ಮಾರಕವಾಗಿರುವ ಮಹಾರಾಕ್ಷಸ ಇನ್ನಬಹುದು. ಪ್ಲಾಸ್ಟಿಕ್ ತ್ಯಾಜ್ಯಗಳು ಭೂಮಿ  ಸೇರುವುದರಿಂದ ಮಳೆ ನೀರು ಭೂಮಿಯ ಒಳಗೆ ಹೋಗದಂತೆ ತಡೆಯುತ್ತದೆ ಇದರಿಂದಾಗಿ ಅಂತರ್ಜಲದ ಮಟ್ಟ ಕುಸಿಯುತ್ತದೆ, ಸಸ್ಯಗಳು ಆಳವಾಗಿ ಬೇರುಬಿಡಲು ಇವು ಅಡ್ಡಿಯಾಗುತ್ತವೆ. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಾಗದಿದ್ದರೂ ಕನಿಷ್ಠ ಪಕ್ಷ ಅದರ ಬಳಕೆಯನ್ನಾದರೂ ಕಡಿಮೆಮಡೋಣ..ಪರಿಸರಸ್ನೇಹಿ ವಸ್ತುಗಳನ್ನು ಬಳಸೋಣ.
ಎಲ್ಲದಕ್ಕೂ ಸರ್ಕಾರವನ್ನು ದೂರುವುದು ಎಷ್ಟು ಸಮಂಜಸ? ಪ್ರತಿ ವ್ಯಕ್ತಿಯಲ್ಲಿ ಇಂದು ನಮ್ಮ ಭೂಮಿ, ನಾವು ಬದುಕುತ್ತಿರುವ ಪರಿಸರ, ಇದರ ಸಂರಕ್ಷಣೆಯ ಹೊಣೆಯಲ್ಲಿ ನಮ್ಮದು ಪಾಲಿದೆ ಇಂಬ ಮನೋಭಾವನೆ ಬೆಳೆಸಿಕೊಳ್ಳಬೇಕು. ನಾವು ಬದುಕುತ್ತಿರುವ ಸುಂದರ ನಾಡನ್ನು ನಮ್ಮ ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಬಿಟ್ಟುಹೊಗೋಣ. ಭೂಮಿಯ ಮೇಲೆ ನೆಡೆಯುತ್ತಿರುವ ದೌರ್ಜನ್ಯವನ್ನು ಒಮ್ಮೆ ಯೋಚಿಸಿ ನೋಡಿ. ಈಗಾಗಲೇ ಕಾಡುಗಳ ನಾಶದಿಂದಾಗಿ ಗ್ಲೋಬಲ್ ವಾರ್ಮಿಂಗ್ ಇನ್ನುವ ಭೂತ ಕಣ್ಣ ಮುಂದೆಯೇ ಕುಣಿಯುತ್ತಿದೆ, ಅಕಾಲಿಕ ಮಳೆ, ಬೆಳೆ ನಾಶ, ಸಾರ್ವಜನಿಕ ಜೀವನ ಅಸ್ತ-ವ್ಯಸ್ತ ಮುಂತಾದವುಗಳ ಪರಿಣಾಮ ಎಂಥಹದೆಂದು ಈಗಾಗಲೇ ಅನುಭವಿಸಿದ್ದೇವೆ. ಇನ್ನಾದರೂ ಪರಿಸರ ಸಂರಕ್ಷಣೆಗೆ ಮುಂದಾಗೋಣ. ಈಗ ಹೇಳಿ ನಮಗೆ ಉಸಿರಾಡಲು ಗಾಳಿ, ಕುಡಿಯಲು ನೀರು, ಬದುಕಿಗೊಂದು ನೆಲೆ ನೀಡಿರುವ ನಿಸರ್ಗ ಮಾತೆಗೆ ನಾವು ಎಷ್ಟು ಆಭಾರಿಯಾಗಿದ್ದೇವೆ?? 

25 November 2011

ನಾವು ಮತ್ತು ನಮ್ಮ ಸಾಮಾಜಿಕ ಜವಾಬ್ಧಾರಿ !!!



ಬಹಳ ದಿನಗಳಾಯಿತು ನನ್ನ ಬ್ಲಾಗ್ ಬರೆದು...ಏನಾದ್ರು ಬರೆಯಬೇಕೆನ್ನುವ ಹಂಬಲ ಆದರೆ ಸಮಯದ ಅಭಾವ...ಆಫೀಸ್ ಕೆಲಸ, ಪಿ.ಎಚ್ ಡಿ ಕೆಲಸಗಳ ಮದ್ಯೆ ಬರೆಯಲು ಬಿಡುವೆ ಇಲ್ಲದಂತಾಗಿದೆ, ಆದರೂ ನನ್ನ ಕೆಲ ಗೆಳೆಯರನ್ನು ನೋಡಿದರೆ ಬಹಳ ಆಶ್ಚರ್ಯ ಮತ್ತು ಸಂತೋಷವಾಗುತ್ತದೆ ಕಾರಣ ತಮ್ಮ ಕೆಲಸದ ಒತ್ತಡದಲ್ಲಿಯೂ ಅವರ ಬರವಣಿಗೆಗಳನ್ನು ಓದುವ ಭಾಗ್ಯ ನನಗೆ ಸಿಗುತ್ತಿರುತ್ತದೆ ಎಂದು...
ಅಂದ ಹಾಗೆ ವಿಷಯಕ್ಕೆ ಬರುತ್ತೇನೆ ಪ್ರತಿ ಶನಿವಾರ ನನ್ನ ಪಿ.ಎಚ್.ಡಿ ಗೈಡ್ ನೋಡಲು ಮೈಸೂರಿಗೆ ಹೊಗಿಬರುತ್ತಿರುತ್ತೇನೆ, ಹೆಚ್ಚಾಗಿ ಟ್ರೈನ್ ನಲ್ಲಿಯೇ ಪ್ರಯಾಣಿಸುತ್ತಿರುತ್ತೇನೆ. ಪ್ರತಿ ಬಾರಿ ಇಲ್ಲಿಂದ ಹೊರಡುವಾಗ ಮತ್ತು ಮೈಸೂರಿನಿಂದ ಬರುವ ನಾನು ಯೋಚಿಸುವುದು ಒಂದೇ ವಿಚಾರ...ಅದು ಟ್ರೈನ್ ನ ಸ್ವಚ್ಚತೆ ಬಗ್ಗೆ...ಹೌದು ಮೈಸೂರಿನಿಂದ ಟೈನ್ ಹತ್ತುವಾಗ ಇರುವ ಖುಷಿ ನನಗೆ ಇಳಿಯುವಾಗ ಸಿಗುವುದಿಲ್ಲ...ನಮ್ಮ ಜನರು ತಾವು ತಮ್ಮ ಉಪಯೋಗಕ್ಕಾಗಿ ಬಳಸುವ ಸಾರ್ವಜನಿಕ ವಸ್ತುಗಳನ್ನ ಏಕೆ ಇಷ್ಟು ಉಡಾಫೆತನದಿಂದ ನೋಡುತ್ತಾರೆ ಎಂದು ತಿಳಿದಿಲ್ಲ...ಟ್ರೈನ್ ಹತ್ತುವಾಗ ಅದರ ಸ್ವಚ್ಚತೆ ನೋಡಿದರೆ ನಿಜವಾಗಿಯೂ ಖುಷಿ ಎನಿಸುತ್ತದೆ ಆದರೆ ಆ ಖುಷಿ ಬಹಳ ಸಮಯ ಉಳಿಯುವುದಿಲ್ಲ...ಟ್ರೈನ್ ನಲ್ಲಿ ಮಾರಿಕೊಂಡು ಬರುವ ಹೆಚ್ಚು-ಕಡಿಮೆ ಪ್ರತಿಯೊಂದು ತಿಂಡಿ-ತಿನಿಸನ್ನು ಕೊಂಡು ತಿನ್ನುವ ಬಹಳಷ್ಟು ಜನರು ಕಸ ಎಂದು ಎನಿಸಿಕೊಳ್ಳುವ ವಸ್ತುಗಳನ್ನ ತಾವು ಕುಳಿತಲ್ಲೇ ಹಾಕುವುದನ್ನು ನೋಡಬಹುದು...ಕಡಲೆ ಕಾಯಿ ತಿಂದು ಅದರ ಸಿಪ್ಪೆಯನ್ನು ಕಾಲ ಬಳಿಯಲ್ಲಿಯೇ ಹಾಕುವುದಲ್ಲದೆ ಸಿಪ್ಪೆಗಳು ಎದುರಿಗೆ ಕುಳಿತಿರುವ ವ್ಯಕ್ತಿಯ ಪಾದಗಳನ್ನೂ ಸಹ ತೊಳೆಯುತ್ತಿರುತ್ತವೆ...ಇನ್ನು ಮದ್ದೂರ್ ವಡೆ ತಿಂದ ಪೇಪರ್, ಕಾಫಿ-ಟೀ ಕುಡಿದ ಪೇಪರ್ ಕಪ್ ಅನ್ನು ಕಿಟಕಿ ಪಕ್ಕ ಕುಳಿತವರು ಹೊರಗೆ ಹಾಕಿದರೆ ಕೆಲವರು ಏಳಲು ಕಷ್ಟ ಎನ್ನುವ ಮಟ್ಟಿಗೆ ಅದನ್ನು ಅಲ್ಲಿಯೇ ಹಾಕಿ ಬಿಡುತ್ತಾರೆ...
ಇದು ಕೆಳಗೆ ಕುಳಿತವರ ಕಥೆಯಾದರೆ ಇನ್ನು ಮೇಲೆ ಅಂದರೆ ಅಪ್ಪರ್ ಬರ್ತ ನಲ್ಲಿ ಕುಳಿತುಕೊಳ್ಳುವವರ ಕಥೆ ಕೇಳಿ..ಪಾಪ ಮೇಲೆ ಹತ್ತಿ ಕುಳಿತುಕೊಳ್ಳುವ ಕೆಲವವು ಮಹಾಶಯರಿಗೆ ತಮ್ಮ ಚಪ್ಪಲಿ-ಶೂಗಳದ್ದೇ ಚಿಂತೆ ಎಲ್ಲಿ ಕೆಳಗೆ ಬಿಟ್ಟರೆ ಯಾರದ್ರು ಕದ್ದು ಬಿಡುತ್ತಾರೋ ಎಂಬ ಭಯ ಅದಕ್ಕರಾಗಿ ಇವರು ಮೇಲೆ ಹತ್ತುವಾಗ ಚಪ್ಪಲಿ ಶೂ ಹಾಕಿ ಕೊಂಡಿಯೇ ಹತ್ತುವುದು...ಕೆಲವರು ಹತ್ತಿ ಅವಗಳನ್ನು ಬಿಚ್ಚಿ ಕಾಲುಗಳ ಹತ್ತಿರ ಇಟ್ಟುಕೊಂಡರೆ ಇನ್ನು ಕೆಲವರು ಬಿಚ್ಚದೆ ಹಾಕಿಕೊಂಡಿಯೇ ಮಲಗುತ್ತಾರೆ...ಓಡಾಡುವ ಜನರು ತಮ್ಮ ಚಪ್ಪಲಿ-ಶೂ ಕಾಲುಗಳ ದರ್ಶನ ಮಾಡಿ ಕೊಳ್ಳಲಿ ಎಂದು...ನಾವು ಇಳಿದ ಮೇಲೆ ಬೇರೊಬ್ಬರು ಇಲ್ಲಿ ಕುಳಿತುಕೊಳ್ಳಲೋ  ಇಲ್ಲ ಮಲಗಲೋ ಈ ಸೀಟ್ ಅನ್ನು ಉಪಯೋಗಿಸುತ್ತಾರೆ ಎಂಬ ಜ್ಞಾನವೇ ಇರುವುದಿಲ್ಲ.. ಇನ್ನು ಮಲಗುವ ಪರಿ ಕಾಲು ಹಾಕುವ ಜಾಗದಲ್ಲಿ ತಲೆ, ತಲೆ ಇಡುವ ಜಗದಲ್ಲಿ ಕಾಲು ಇಟ್ಟು ಮಲಗುತ್ತಾರೆ. ಪಾಪ ಇನ್ನ್ಯಾರೋ ಬಂದು ತಲೆ ಇಡುವ ಜಾಗದಲ್ಲಿ ತಲೆಯನ್ನೇ ಇಟ್ಟು ಮಲಗಿಕೊಂಡರೆ ಅಷ್ಟೇ ಇದಕ್ಕೂ ಮೊದಲು ಅಲ್ಲಿ ಕಾಲು ಇಟ್ಟು ಮಲಗಿದ್ದವನ ಪಾದದ ದೂಳಿನ ಸ್ಪರ್ಶ....ಇನ್ನು ಆಶ್ಚರ್ಯದ ವಿಚಾರ ಎಂದ ಹೆಚ್ಚು ಜನ ಇಂತಹವರಲ್ಲಿ ವಿದ್ಯಾವಂತರೇ ಆಗಿದ್ದಾರೆ...ಇದೆಲ್ಲ ದರ್ಶನದ ಅಜೋತೆಗೆ ಇಳಿಯಲು ಬಂದಾಗ ನಿಮಗೆ ನೀವು ಮೊದಲು ನೋಡಿದ ಸ್ವಚ್ಚವಾದ  ಟ್ರೈನ್ ತಿಪ್ಪೆ ಗುಂಡಿಯಂತೆ ಕಾಣುತ್ತಿರುತ್ತದೆ.
ಇದೆಷ್ಟು ಟ್ರೈನ್ ಕಥೆಯಾದರೆ ಇನ್ನು ನಮ್ಮ ಬೃಹತ್ ಬೆಂಗಳೂರಿನ ಕಥೆಯು ಅಷ್ಟೇ...ಅನೇಕ ಬಾರಿ  ಬಿ ಎಮ್ ಟಿ ಸಿ ಬಸ್ ನಲ್ಲಿ  ಪ್ರಯಾಣಿಸುವಾಗ ನಾನು ಇಂತಹ ದೃಶ್ಯಗಳನ್ನು ಕಂಡಿದ್ದೇನೆ...ಮಹಿಳೆಯರು ಬಸ್ಸಿನಲ್ಲಿಯೇ ತಾವು ಅಂದಿನ ಅಡಿಗೆಗೆಂದು  ಖರೀದಿಸಿದ ತರಕಾರಿ, ಸೊಪ್ಪನ್ನು ಸ್ವಚ್ಚಗೊಳಿಸುತ್ತ ಕೋರುವುದು...ಮೊನ್ನೆ ಕೂಡ ಇಂತಹದ್ದೇ ದೃಶ್ಯ...ಮಹಿಳೆಯೊಬ್ಬಳು ತಾನು ಕೊಂಡಿದ್ದ ಸೊಪ್ಪನ್ನು ಬಸ್ಸಿನಲ್ಲಿಯೇ ಸ್ವಚ್ಚ ಮಾಡುತ್ತಾ ಕುಳಿತಿದ್ದರು...ನಾನು ಎದುರಿಗೆ ನಿಂತಿದ್ದ ಕಾರಣ ಅವರು ನನ್ನನು ನಾನು ಅವರನ್ನು ನೋಡುತ್ತಿದ್ದೆವು, ಆಕೆ ಸೊಪ್ಪನ್ನು ಬಿಡಿಸಿ ಚೆನ್ನಾಗಿರುವುದನ್ನು ಕವರ್ ಗೆ ಹಾಕಿ ಕೊಳ್ಳುತ್ತಾ ಚೆನ್ನಗಿಲ್ಲದನ್ನು ಒಮ್ಮೆ ಕೆಳಗೆ ಮತ್ತೆಮ್ಮೋ ಕಿಟಕಿಯಿಂದ ಆಚೆಗೆ ಹಾಕುತ್ತಿದ್ದಳು....ಇದನ್ನು ನೋಡುತ್ತಾ ನಿಂತಿದ್ದ ನಂಗೆ ಕೋಪ ಬರುತ್ತಿರುವುದನ್ನು ಗಮನಿಸಿದ ಅಆಕೆ ತನ್ನೆ ಕೆಲಸವನ್ನೂ ಮುದುವರೆಸುತ್ತಿದ್ದಳು...ಆಕೆ ಹಾಕುತ್ತಿದ್ದ ಕಸ ಕಿಟಕಿಯಿಂದ ಹೊರಗೆ ಯಾವುದೊ ಒಬ್ಬ ವಾಹನ ಸವಾರನ ಮೇಲೆ ಬಿಳುತ್ತಿರಬಹುದೆಂಬ ಪರಿವೆ ಇಲ್ಲವೇ?? ನಾನು ಒಪ್ಪುತ್ತೇನೆ ಮನೆ ಹೊರಗು-ಒಳಗೂ ದುಡಿಯುವ ಮಹಿಳೆಗೆ ಇರುವ ಕಷ್ಟ ಮತ್ತು ಸಮಯದ ಅಭಾವವಿದೆ ಎಂದು....ನಾನು ಕೇಳುವ ಪ್ರಶ್ನೆ ಬಸ್ ವ್ಯವಸ್ಥೆಯಿಲ್ಲದ್ದರೆ ಸರ್ಕಾರವನ್ನು ದೂರುವ ನಾನು ನಮಗೆಂದೇ ಇರುವ ಬಸ್, ಟ್ರೈನ್ ಸಾರ್ವಜನಿಕ ಸ್ವತ್ತುಗಲ್ಲನ್ನು ನಾವು ನೋಡಿಕೊಳ್ಳುವ ರೀತಿ ಇದೇನಾ? ಪ್ರತಿಯೊಂದಕ್ಕೂ ಸರ್ಕಾರವನ್ನು ದೂರುವ, ಬೈಯ್ಯುವ ನಾವು...ನಮ್ಮ ತಪ್ಪನ್ನು ತಿದ್ದಿಕೊಳ್ಳುವುದು ಯಾವಾಗ?? ಇದಕ್ಕೆನಾದ್ರು ಒಂದು ಇಲಾಖೆಯನ್ನು ನೇಮಿಸಬೇಕೆ??ಸಾಮಾಜಿಕ ಜವಾಭ್ದಾರಿ ಎಂಬುದನ್ನು ಬಲವಂತವಾಗಿ ನಮ್ಮಲ್ಲಿ  ತುಂಬಬೇಕೇ? ಎಲ್ಲ ಎಚ್ಚರಿಸಬೇಕೆ?? ಟ್ರೈನ್ ನಲ್ಲಿಯೇ ತಿಂದು ಅಲ್ಲಿಯೇ ಹಾಕುವ ಜನರು...ಬಸ್ಸಿನಲ್ಲಿಯೇ ಕಸ ಹಾಕುವ ಜನರು ತಮ್ಮ  ಮನೆಗಳಲ್ಲಿಯೂ ಹೇಗೆ ನೆದೆದುಕೊಲ್ಲುತ್ತರೆಯೇ ??
ಒಮ್ಮೆ ಯೋಚಿಸಿ ಎಲ್ಲದಕ್ಕೂ ನಾವು ಸರ್ಕಾರರವನ್ನು ದೂರುತ್ತೇವೆ.....ನಮಗೆ ಸೌಲಭ್ಯ ನೀಡಿಲ್ಲ ..ಅದಿಲ್ಲ ಇದಿಲ್ಲ ಎಂದು ಆದರೆ ಇರುವ ಸವಲತ್ತುಗಳನ್ನೂ ಎಷ್ಟರ ಮಟ್ಟಿಗೆ ಜೋಪನಮಾಡಿದ್ದೇವೆ...ಇಲ್ಲ ಅವುಗಳ ರಕ್ಷಣೆ ನಮ್ಮ ಹೊಣೆ ಎಂದು ಎಂದಾದರೂ ನೆದಡಿದುಕೊಂದಿದ್ದೆವೆಯೇ...??

20 July 2011

ಟಿವಿ ಕಾರ್ಯಕ್ರಮಗಳು ಮತ್ತು ನಮ್ಮ ಅಭಿಪ್ರಾಯ


ಹಿಂದೆ ವಾರಕ್ಕೊಮ್ಮೆ ಬರುತ್ತಿದ್ದ ಧಾರಾವಾಹಿಗಳು ---- ಅಯ್ಯೋ ಹಿಂದಿನ ವಾರ ಏನಾಯಿತೆಂದು ಮರೆತು ಹೋಗುತ್ತೇವೆ. ಆದರು ಚೆನ್ನಾಗಿರುತ್ತಿದ್ದವು....
ಮೆಗಾ ಧಾರವಾಹಿಗಳು ---- ದಿನಾ ನೋಡುವುದು ಕಷ್ಟ ಕಾರಣ, ನೆನ್ನೆ ಎಪಿಸೋಡ್ ಅನ್ನೇ ಎಳೆಯುತ್ತಿರುತ್ತಾರೆ.....
ಮಾಯಾಮೃಗ, ಮಲೆಗಳಲ್ಲಿ ಮಧುಮಗಳು ಇತ್ಯಾದಿ ಯಂತಹ ಧಾರಾವಾಹಿಗಳು ಮತ್ತೆ ಬರುವುದಿಲ್ಲ.
ನಗೆ ಧಾರವಹಿಗಳು ---- ನೋಡುತ್ತಿರುತ್ತೇವೆ ಆದರು ನಗು ಬರುವುದಿಲ್ಲ
ರಿಯಾಲಿಟಿ ಶೋಗಳು ----- ಒಂದು ಚಾನೆಲ್ ಮೇಲೆ ಮತ್ತೊಂದು ಚಾನೆಲ್ ಸ್ಪರ್ಧೆಗಿಳಿದಂತೆ ಬರಿ TRP ಹೆಚ್ಚಿಸಿಕೊಳ್ಳಲು ಮಾಡುವ ಗಿಮಿಕ್ಕು,  
ಫ್ಯಾಶನ್ ಷೋಗಳು ------ ಎಂಥಹ ಕಾಲ ಬಂತಪ್ಪ...ಬಟ್ಟೆಗೆ ಬರ ???
ಟಿವಿ ನ್ಯೂಸ್ ಗಳು ------ ಅಯ್ಯೋ ಹೇಳಿದ್ದನ್ನೇ ಹೀಳುತ್ತಿರುತ್ತವೆ...ತೋರಿಸಿದ್ದನ್ನೇ ತೋರಿಸುತಿರುತ್ತವೆ.....ಹೊಸ ಸುದ್ದಿಯೇ ಇಲ್ಲವೇ ಇವರಿಗೆ....
ನ್ಯೂಸ್ ಚಾನೆಲ್ –----- ವಿವಿಧ ಪಕ್ಷಗಳ ರಾಜಕೀಯ ವ್ಯಕ್ತಿಗಳ ಜೊತೆಗಿನ ಚರ್ಚೆ ಮತ್ತು ಸಂಭಾಷಣೆ ------ ಅಯ್ಯೋ ದಿನ ಇವರುಗಳು  ಮಾಡುವುದನ್ನು ನಾವು ಪರೋಕ್ಷವಾಗಿ ನೋಡುತ್ತಿಲವೇ ಈಗ ಇವರ ಜಗಳವನ್ನು ಅದಕ್ಕೆ ವಿವರಣೆಯನ್ನ ನೇರವಾಗಿ ನೋಡಬೇಕೆ ??
ಬೃಹತ್ ಬ್ರಹ್ಮಾಂಡ ------ ಕರ್ಮ ಕಾಂಡ....
ಬದುಕು ಜಟಕಾಬಂಡಿ ----- ಸರ್ಕಾರೀ ಕೌಟುಂಬಿಕ ನ್ಯಾಯಾಲಯದ ಜೊತೆಗೆ ಸ್ಪರ್ದೆ....ಯಾರು ಹೆಚ್ಚು ಕೇಸು ಮುಗಿಸುತ್ತಾರೆ ಎಂಬಂತೆ...  
ಇನ್ನು ವಾರದ ಕೊನೆಯಲ್ಲಿ ಹಾಕುವ ಚಲನಚಿತ್ರಗಳು ------ ಹಾಕಿದ್ದನ್ನೇ ಹಾಕುತ್ತಾರೆ ಜೊತೆಗೆ ಅಯ್ಯೋ ಎರಡುವರೆ ಘಂಟೆಯಲ್ಲಿ ಮುಗಿಯುವ ಸಿನಿಮ ನೋಡಲು ಮೂರುವರೆ ಗಂಟೆ ಕೂತು ಯಾರು ನೋಡುತ್ತಾರೆ.