ಪುಟಗಳು

31 December 2011

ವರ್ಷ ಕಳೆದರೇನು.... ನಾವು ನಾವೇ....!!!


ಇತಿಹಾಸದ ಪುಟಕ್ಕೆ ಮತ್ತೊದು ವರ್ಷ ಸೇರಿದೆ....ಇಂಥಹ ಅದೆಷ್ಟೋ ವರ್ಷಗಳು ಸರಿದಿವೆ ಆದರೂ ಮನುಷ್ಯನ ಆಸೆಗೆ ಮಿತಿಯೇ ಇಲ್ಲ, ಇದು ಅದೆಷ್ಟು ಸತ್ಯವಾದ ಮಾತು...ಹಣ, ಅಂತಸ್ತು, ಹೆಸರು ಇತ್ಯಾದಿ ಇತ್ಯಾದಿ ಅವನ ಬಯಕೆ... ಇದೆಲ್ಲ ಬಿಡಿ ಇದರಂತಹ ಅದೆಷ್ಟೋ ವರ್ಷ ಕಳೆದರು ಇನ್ನು ಬಾಳಿ ಬದುಕಬೇಕೆಂಬ ಆಸೆ...ಬದುಕಿರುವಷ್ಟು ದಿನ ಸುಖದಿಂದಲೇ ಬದುಕಬೇಕೆಂಬ ಕನಸು...ನಮಗೆಲ್ಲ ಗೊತ್ತಿರುತ್ತದೆ ಬದುಕಿನಲ್ಲಿ ಬರೀ ಸುಖವನ್ನೇ ಅನುಭವಿಸಲು ಸಾದ್ಯವಿಲ್ಲ ಎಂದು...ಆದರು ನಿಲುಕದಕ್ಕೆ ಕೈ ಚಾಚುತ್ತಿರುತ್ತೇವೆ...ನಮಗೆ ಏನು ಸಿಕ್ಕರೆ ಸುಖವಾಗಿರುತ್ತೇವೆ ಎಂಬುದರ ಅರಿವು ನಮಗಿರುತ್ತದೆ.... ಅಷ್ಟಕ್ಕೂ ನಾವು ಬಯಸುವುದೇನು?? ಇಡೀ ಜೀವನ ನೆಮ್ಮದಿಯಾಗಿ  ಇರಬೇಕಂದೆ?? ಬಹಳಷ್ಟು ಜನರ ಮಟ್ಟಿಗೆ ಇದು ಹೌದು ಎನ್ನುವುದಾದರೆ ಆ ನೆಮ್ಮದಿ ಎಂಬ ಪದದಲ್ಲಿ ಏನೆಲ್ಲಾ ಅಡಗಿದೆ....ನೆಮ್ಮದಿಯಾಗಿ ಇರಲು ಬಯಸುವುದು ಇಷ್ಟೇ....ಒಂದು ಸ್ವಂತ ಮನೆ...ಒಂದು ಕಾರು..ಮುದ್ದಾದ ಸಂಸಾರ...ನಮ್ಮ ಸರ್ವಜ್ಞನ ವಚನ ಇದೆಯಲ್ಲ...ಬೆಚ್ಚನೆ ಗೂಡು..ವೆಚ್ಚಕ್ಕೆ ಹೊನ್ನು..ಇಚ್ಛೆ ಅರಿವ ಸತಿ.. ಇಷ್ಟಿದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚು ಎಂದು ಆದರೆ ನಾವು ಸ್ವರ್ಗಕ್ಕೆ ಕಿಚ್ಚು ಹಚ್ಚುವ ಬದಲು ಇರುವ ಜೀವನವನ್ನ ನರಕ ಮಾಡಿಕೊಂಡು ಸ್ವರ್ಗಕ್ಕೆ ಹೋಗಲು ಪರಿತಪಿಸುತ್ತಿರುತ್ತೇವೆ.
ಇದು ಒಬ್ಬ  ವ್ಯಕ್ತಿಯ ಕಥೆಯಾದರೆ ಇನ್ನು ವ್ಯವಸ್ಥೆಗೆ ಬರೋಣ..ನಮ್ಮ ವ್ಯವಸ್ಥೆಯೋ ಭ್ರಷ್ಟಾಚಾರದಲ್ಲಿ ಮುಳುಗಿ ಮಿಂದು ಅದರಲ್ಲಿಯೂ ಬೆರೆತು ಹೋಗಿದೆ...ವ್ಯವಸ್ಥೆ ಎಂದರೆ ಭ್ರಷ್ಟಾಚಾರ... ಭ್ರಷ್ಟಾಚಾರ  ಎಂದರೆ ವ್ಯವಸ್ಥೆ ಎಂಬಂತಾಗಿದೆ...೨೦೧೦ ಹಗರಣಗಳ ಸರಮಾಲೆಯನ್ನೇ ನಾವು ನೋಡಿದ್ದೇವೆ ೨೦೧೧ ಅದಕಿಂತ ಏನು ಭಿನ್ನವಾಗಿಲ್ಲ... ಹಗರಣಗಳು...ರಾಜಕೀಯ ಸಮರ...ಕುರ್ಚಿಗಾಗಿ ಗುದ್ದಾಟ... ಎಲ್ಲಿ ಹೆಚ್ಚು ಲಾಭ ಮಾಡಿಕೊಳ್ಳಬಹುದೋ ಅಲ್ಲಿ ತಮ್ಮ ಬೆಲೆ ಬೇಯಿಸಿಕೊಳ್ಳುವ ಹೊಲಸು ನಾಯಕರು, ಪಕ್ಷದಿಂದ ಪಕ್ಷಕ್ಕೆ ಹಾರುವ...ಪಕ್ಷದಲ್ಲಿ ನಮಗೆ ಬೆಲೆ ಇಲ್ಲ ಎಂದು ರಾಜಿನಾಮೆ ಕೊಡುವ ನಾಯಕರು,...ಅಲ್ಲಿ ರಾಜಿನಾಮೆ ನೀಡಿ ಚುನಾವಣೆ ಎದುರಿಸಲು ನಾನು ಸಿದ್ದ ಎಂದು ಹೆಮ್ಮೆಯಿಂದ ದೇಶ ರಕ್ಷಣೆಗೆ ಹೊರಡಲು ಸಿದ್ದವಿರುವ ಸೈನಿಕರಂತೆ ಹೆಮ್ಮೆಯಿಂದ  ಹೇಳಿಕೊಳ್ಳುವ ಹೊಲಸು ರಾಜಕೀಯ ವ್ಯಕ್ತಿಗಳು...ಚುನಾವಣೆಗೆಂದು ಲಕ್ಷಂತ ರುಪಾಯಿ ಖರ್ಚು ಮಾಡಿ ಅದನ್ನು ಸಾಮಾನ್ಯ ಜನರ ತಲೆಯ ಮೇಲೆ ಹೇರುವುದು... ಜನ ಸಾಮಾನ್ಯ  ಅಲ್ಲಿ ಇಲ್ಲಿ ಉಳಿಸಿ ತೆರಿಗೆ ಕಟ್ಟಿದ ಹಣ ಎಲ್ಲಿಲ್ಲಿ ಹೇಗೇಗೆ ವೆಚ್ಚವಾಗುತ್ತದೆ ನೋಡಿ...
ಇನ್ನು ಸಾಮಾನ್ಯನ ಕೂಗು ಕೇಳದ ಸರ್ಕಾರ....೩ ತಿಂಗಳಿಗೊಮ್ಮೆ ೪ ತಿಂಗಳಿಗೊಮ್ಮೆ ಪೆಟ್ರೋಲ್, ಹಾಲು ದಿನ ಬಳಕೆ ವಸ್ತುಗಳ ಬೆಲೆ ಏರಿಕೆ....ಹೇಗಿದ್ದರೂ ಕೊಂಡುಕೊಳ್ಳುತ್ತರೆಂಬ ಭಂಡ ಧೈರ್ಯ ನಮ್ಮ ಸರ್ಕಾರಕ್ಕೆ...ಅಭಿವೃದ್ದಿ ಅಬ್ಧಿವ್ರುದ್ದಿ ಎಂದು ಬೊಬ್ಬೆ ಹೊಡೆಯುವ ಸರ್ಕಾರ...ನಮ್ಮ ಸರ್ಕಾರ ಇಷ್ಟು ಮಾಡಿದೆ...ಅಷ್ಟು ಮಾಡಿದೆ ಎಂದು ಹೇಳಿಕೊಳ್ಳುವ ಮುಂಚೆ ಮಾಡಿರುವಷ್ಟರಲ್ಲಿ ಎಷ್ಟು ಪಾಲು ನಿಜವಾಗಿ ಸೇರಬೇಕಾಗಿರುವ ಕಡೆ ಸೇರಿದೆ ಎಂದು ನೋಡಿದರೆ ಉತ್ತಮ....ವ್ಯವಸ್ಥೆಯ ಬಗ್ಗೆ ಭ್ರಮ ನಿರಸನ ಗೊಂಡಿರುವ ಮತದಾರ ಪ್ರಭು...ಪ್ರಭು ಅಲ್ಲ ನಿಜವಾದ ಅರ್ಥದಲ್ಲಿ ಭಿಕ್ಷುಕ....ಅಯ್ಯೋ ಬಿಡಿ ಇಲ್ಲ ಸರ್ಕಾರಗಳು ಅಷ್ಟೇ ಓಟಕುವುದಷ್ಟೇ ನಮ್ಮ ಕೈನಲ್ಲಿರುವುದು ಎಂದು ಕೈಚೆಲ್ಲಿ ಕುಳಿತುಬಿಟ್ಟಿದ್ದಾನೆ.  ನಾವು ಬದಲಾವಣೆ ಅಗಲಿ ಎಂದು ಬಯಸುತ್ತೇವೆ ಹೊರತು ಆ ಬದಲಾವಣೆ ನನ್ನಿಂದಲೇ ಆಗಲಿ ಎಂದು ಏಕೆ ಯೋಚಿಸದೆ, ಅದಕ್ಕೆ ಪ್ರಯತ್ನವೂ ಪಡದೆ....ಪ್ರಯತ್ನ ಪಟ್ಟವರನ್ನು ಅವರ ಪಾಡಿಗೆ ಬಿಡದೆ ಟೀಕಿಸುತ್ತಾ ಇರುತ್ತೇವೆ.
ಬದಲಾವಣೆ ಜಗದ ನಿಯಮ ಅನ್ನೋ ಮಾತಿದೆ, ಜಗತ್ತು ಬದಲಾಗುತ್ತಿದೆಯೋ ಇಲ್ಲ ಮನುಷ್ಯ ಬದಲಾಗುತ್ತಿದ್ದಾನೋ ಎರಡು ಗೊಂದಲ...ಜಗತ್ತು...ಕಾಲ ಬದಲಾದರು ಯಾವಾಗಲು ನಮ್ಮ ಬೇಡಿಕೆಗಳು ಯಾಕೆ ಬದಲಾಗುವುದಿಲ್ಲ...ಯಾವಾಗಲು ಸುಖವಾಗಿರಬೇಕು...ಹಣ ಸಂಪಾದಿಸಬೇಕು...ಇವೆಲ್ಲವನ್ನೂ ಬಿಟ್ಟು ಒಂದು ಸುಂದರ  ಅರ್ಥಪೂರ್ಣ ಬದುಕು ನಡೆಸಲು ಮುಂದಾಗುವುದಕ್ಕೆ ಇನ್ನು ಇಂಥಹ ಅದೆಷ್ಟು ವರ್ಷಗಳು ಸರಿಯಬೇಕೋ.....???
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.....೨೦೧೨ ನಿಮ್ಮಲ್ಲರಿಗೂ ಸುಖ, ಶಾಂತಿ ನೆಮ್ಮದಿ ತರಲೆಂದು ಹಾರೈಸುತ್ತೇನೆ....ಇದೇನಪ್ಪ ಇಷ್ಟು ಹೊತ್ತು ಮನುಷ್ಯ ಸುಖ, ನೆಮ್ಮದಿ ಮಾತ್ರ ಬಯಸುತ್ತಾನೆ... ಎಂತಹ ಸ್ವಾರ್ಥ ಜೀವಿ ಮನುಷ್ಯ ಎಂದು ಹೇಳಿ ಮತ್ತೆ ಸುಖ, ಶಾಂತಿ ನೆಮ್ಮದಿ ಸಿಗಲಿ ಎಂದು ಹಾರೈಸುತ್ತಿದ್ದೇನೆ ಎಂದು ಕೇಳಬೇಡಿ....ಹಾರೈಸುವುದೊಂದೇ  ನಮ್ಮ ಕೈಲಿರುವುದು ಅಲ್ಲವೇ???

15 December 2011

ಕ್ರಾಂತಿಯ ಆರಂಭ ಎಲ್ಲಿಂದ ?? ಯಾರಿಂದ ??



ಮಾನವನ ಸ್ವಭಾವವೇ ಹಾಗೆ ಅನಿಸುತ್ತದೆ ಇರುವ ವ್ಯವಸ್ಥೆ ಸರಿ ಇಲ್ಲ ಎಂದು ಗೊಣಗುತ್ತಾ ಇರುವ ವ್ಯವಸ್ಥೆಯನ್ನು ಬದಲಾಯಿಸಬೇಕು ಎಂದು ಗುಂಪಿನಲ್ಲಿ ನಿಂತು ಸ್ನೇಹಿತರ ಜೊತೆ ಹರಟುತ್ತಿರುತ್ತೇವೆ. ಅಲ್ಲಿ ನಾವು ಮಾತನಾಡುವ ಪರಿ ಹೇಗಿರುತ್ತದೆಯೆಂದರೆ ಅಲ್ಲಿಂದಲೇ ಒಬ್ಬ ಕ್ರಾಂತಿಕಾರಿ ವ್ಯಕ್ತಿಯ ಉಗಮವಾಗಿ ವ್ಯವಸ್ಥೆಯ ವಿರುದ್ಧ ಹೋರಾಡಿ ಬದಲಾವಣೆ ತಂದುಬಿಡುತ್ತೇವೆನೋ ಎಂಬ ಭಾವನೆ ಮೊಳೆಯುತ್ತದೆ, ನಂತರ ಈ ಎಲ್ಲಾ ಯೋಚನೆಗಳು ನಡೆದ ಮರು ಘಳಿಗೆ ಇಲ್ಲವನ್ನು ಮರೆತು ನಮ್ಮ ಮನೆ-ನಮ್ಮದೇ ಅದ ವೈಯುಕ್ತಿಕ ಸಮಸ್ಯೆಗಳ ಸುಳಿಯಲ್ಲಿ ಮುಳುಗಿ ಹೋಗುತ್ತೇವೆ. ಇನ್ನು ರಸ್ತೆ ಬದಿಯಲ್ಲಿ ನಿಂತು ಉದ್ದುದ್ದ ಭಾಷಣ ಮಾಡುವಾಗ ಇರುವ ಆಸಕ್ತಿ ಮತ್ತು ನಾಯಕತ್ವದ ಭಾವನೆ ಅದರ ಮುಂದಾಳತ್ವ ವಹಿಸಿ ಅದನ್ನು ಕಾರ್ಯರೂಪಕ್ಕೆ ತರುವಾಗ ಮಾತ್ರ ಹಿಂದೆ ಸರಿದು ಬಿಡುತ್ತದೆ. 

ಒಬ್ಬ ಸಾಮಾನ್ಯ ಮನುಷ್ಯ ಕ್ರಾಂತಿ ಎಂಬ ಪದ ಕೇಳುತ್ತಲೇ ಅವನಿಗೆ ಬರುವ ಯೋಚನೆ ಯಾವುದೊ ಒಂದು ಬಾಹ್ಯ ಶಕ್ತಿಯ ಕಾರಣ ಅಥವಾ ಆಗಮನದಿಂದಾಗಿ ಪ್ರಸ್ತುತ ಪರಿಸ್ಥಿತಿಯನ್ನು ಬದಲಾಯಿಸಿವುದು ಎಂದು ಅನೇಕರು ಭಾವಿಸಿರುತ್ತಾರೆ. ಯಾವುದೊ ಒಬ್ಬ ವ್ಯಕ್ತಿ ಅಥವ ಯಾವುದೊ ಒಂದು ಸಂಘಟನೆ ಕ್ರಾಂತಿಯ ಮುಂದಾಳತ್ವ ವಹಿಸಿ ಪರಿವರ್ತನೆ ಆಗುತ್ತದೆ ಎಂಬುದು ಎಲ್ಲರ ಸಾಮಾನ್ಯ ನಂಬಿಕೆ. ಇತಿಹಾಸದ ಪುಟಗಳನ್ನ ತಿರುವಿ ಹಾಕಿದಾಗ ಅದೆಷ್ಟೋ ಕ್ರಾಂತಿಗಳು ಸಂಭವಿಸಿರುವುದು ಕಣ್ಣಮುಂದೆ ಬಂದು ನಿಲ್ಲುತ್ತವೆ; ಒಂದು ವ್ಯವಸ್ಥೆ ಅಥವಾ ವ್ಯಕ್ತಿಯ ದಬ್ಬಾಳಿಕೆಯಿಂದ ಬೇಸತ್ತ ಜನರು ದಂಗೆಯೆದ್ದ ಅನೇಕ ಉದಾಹರಣೆಗಳು ಕಾಣಸಿಗುತ್ತವೆ. 1792 1802ರ ಕಾಲಘಟ್ಟದಲ್ಲಿ ನೆಡದ ಫ್ರೆಂಚ್ ಕ್ರಾಂತಿ, ರಾಜನ ದಬ್ಬಾಳಿಕೆಗೆ ಬೆಂದ ಜನರು ದಂಗೆಯೆದ್ದದ್ದು; ಅಂತೆಯೇ 1917 ರಲ್ಲಿ ಸಂಭವಿಸಿದ ರಷ್ಯ ಕ್ರಾಂತಿಯು ಸಹ ತನ್ನದೇ ಆದ ಸ್ವರೂಪ ಹೊಂದಿತ್ತು, ಕ್ರಾಂತಿ ಎಂದಾಗ ಕೇವಲ ಯುದ್ದಗಳೆಂದಲ್ಲ, ಒಂದು ಕಡೆ ಯುದ್ದಗಳ ಮೂಲಕ ಕ್ರಾಂತಿಯು ತನ್ನ ಸ್ವರೂಪವನ್ನು ತೋರಿಸಿದರೆ ಇನ್ನೊಂದೆಡೆ ಕೈಗಾರಿಕ ಕ್ರಾಂತಿ, ಹಸಿರು ಕ್ರಾಂತಿಯಂತಹ ಅದೆಷ್ಟೋ ಕ್ರಾಂತಿಗಳು ಮನುಷ್ಯನ ಜೀವನದ ಶೈಲಿಗೆ ಸದ್ದಿಲ್ಲದೆ ಲಗ್ಗೆ ಹಾಕಿರುವುದು ಕಾಣುತ್ತೇವೆ. 

ಯುದ್ದಗಳ ಮೂಲಕ ಇರುವ ವ್ಯವಸ್ಥೆಯ ಪರಿವರ್ತನೆ ಆಗಿರುವುದು ಕ್ರಾಂತಿಯ ಒಂದು ಮುಖವಾದರೆ, ವಿವಿಧ ರೀತಿಯ ಆವಿಷ್ಕಾರ–ಅನ್ವೇಷಣೆಗಳ ಮೂಲಕ ಸಮಾಜ ಪರಿವರ್ತನೆಯ ಕಡೆಗೆ ಸಾಗುವಂತೆ ಮಾಡುವುದು ನಮಗೆ ಕಂಡಿರುವ ಕ್ರಾಂತಿಯ ಇನ್ನೊಂದು ಮುಖ. ಕ್ರಾಂತಿ ಸಂಭವಿಸಿತೆಂದರೆ ಅದರ ಪರಿಣಾಮ ಧನಾತ್ಮಕವಾಗಿಯೇ ಇರುತ್ತದೆಂದು ಹೇಳಲಾಗದು, ಕೆಲವು ಸಂದರ್ಭಗಳಲ್ಲಿ ಆ ಕ್ಷಣಕ್ಕೆ ಅದ ಪರಿವರ್ತನೆ ಧನಾತ್ಮಕವಾಗಿಯೇ ಕಂಡರೂ ಭವಿಷ್ಯದಲ್ಲಿ ಅದರ ಪರಿಣಾಮಗಳು ಅತ್ಯಂತ ಭೀಕರವಾಗಿರಬಹುದು. ಇದಕ್ಕೆ ಅನೇಕ ನಿದರ್ಶನಗಳು ಕಾಣಸಿಗುತ್ತವೆ. ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನದಲ್ಲಿ ನಡೆದ ಕೈಗಾರಿಕ ಕ್ರಾಂತಿಯ ಪರಿಣಾಮವಾಗಿ ಕೃಷಿ, ಉತ್ಪಾದನೆ, ಗಣಿಗಾರಿಕೆ, ಸಾರಿಗೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ  ಮಹತ್ವದ ಪರಿವರ್ತನೆ ತಂದಿತು. ಇದರ  ಪರಿಣಾಮವಾಗಿ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಬದಲಾವಣೆ ಉಂಟಾಗಿ ಮಾನವ ಇತಿಹಾಸದಲ್ಲಿ ಅತ್ಯಂತ ಮಹತ್ವದ ತಿರುವು ಇಂದು ಗುರುತಿಸುವಂತಾಗಿದೆ. ಇನ್ನು ಹಸಿರು ಕ್ರಾಂತಿಯಿಂದಾಗಿ ಆದ ಪರಿಣಾಮ ತತ್ಕ್ಷಣಕ್ಕೆ ಅತೀ ಮಹತ್ವದೆನಿಸಿದರು, ಅತಿಯಾದ ರಾಸಾಯನಿಕಗಳು, ವಿವಿ ರೀತಿಯ ಔಷಧಿಗಳ ಬಳಕೆಯಿಂದಾಗಿ ಭೂಮಿಯ ಮೇಲಾದ ಪರಿಣಾಮವನ್ನು ನಾವು ಮರೆಯುವಂತಿಲ್ಲ; ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಾ ಬಂದಿರುವುದು ಜೊತೆಗೆ ಅತೀ ಹೆಚ್ಚು ಇಳುವರಿ ಪಡೆಯಲು ನಾವು ಬಳಸುವ ರಾಸಾಯನಿಕಗಳ ಸಂಖ್ಯೆ ಕಡಿಮೆಯೇನಿಲ್ಲ.

ಜಪಾನ್ ನಲ್ಲಿ ಅದ ಅನಿಲ ಸೋರಿಕೆಯ ಪರಿಣಾಮ ನಮ್ಮೆಲ್ಲರ ಕಣ್ಣ ಮುಂದೆ ಹಾಗೆಯೆ ಇದೆ... ಇತ್ತೀಚಿಗೆ ನಡೆದ ಘಟನೆಯನ್ನು ಮರೆಯಲು ಹೇಗೆ ಸಾಧ್ಯ? ಪರಮಾಣು ಶಕ್ತಿಯಿಂದ ಜಗತ್ತನ್ನೇ ತನ್ನ ಹತೋಟಿಗೆ ತರುತ್ತೇನೆ ಎಂದು ಯೋಚಿಸಿದ ಮಾನವ ಪರಮಾಣು ಶಕ್ತಿಯಿಂದ ಕ್ರಾಂತಿ ಮಾಡಲು ಹೊರಟ, ಅದರಿಂದ ಆದ ದುಷ್ಪರಿಣಾಮ ನಮ್ಮೆಲ್ಲರಿಗೂ ತಿಳಿದಿದೆ. ಹೀಗೆ ಮಾನವ ವಿವಿದ ರೀತಿಯ ಅನ್ವೇಷಣೆಗಳ ಮೂಲಕ, ಹೊಸ ಹೊಸ ತಂತ್ರಜ್ಞಾನಗಳ ಬಳಕೆಯಿಂದಾಗಿ ಹೊಸ ಆವಿಷ್ಕಾರಗಳ ಮೂಲಕ ಅಭಿವೃದ್ದಿಯ ಕಡೆ ಸಾಗುತ್ತಿದ್ದೇವೆ ಎಂದು ತಿಳಿದು ಭವಿಷ್ಯದಲ್ಲಿ ಅದರಿಂದ ಆಗುವ ಪರಿಣಾಮಗಳ ಬಗ್ಗೆ ಯೋಚಿಸದೆ ಇಂದಿನ ಫಲಿತಾಂಶದ ಬಗ್ಗೆ ಮಾತ್ರ ಯೋಚಿಸುವುದರ ಪರಿಣಾಮ ಏನಾಗುತ್ತದೆ ಎಂಬುದಕ್ಕೆ ಇದು ಒಂದು ಜ್ವಲಂತ ನಿರ್ಶನ.

ಹಿಂದೆಲ್ಲಾ ಕ್ರಾಂತಿ ಎಂದರೆ ತಟ್ಟನೆ ನೆನಪಾಗುವುದು ಸಾಮಾಜಿಕ ಬದಲಾವಣೆ ಅಥವಾ ವ್ಯವಸ್ಥೆಯನ್ನೇ ಬದಲಾಯಿಸುವುದಕ್ಕಾಗಿ; ಇಂಥಹ ಒಂದು ಮಹತ್ತರ ಉದ್ದೇಶಕ್ಕೆ ಕ್ರಾಂತಿಯಂತಹ ಕಾರ್ಯಾಚರಣೆಗಳು ನಡೆಯುತ್ತಿತ್ತು. ಹಾಗಾಗಿ ಸಾಮಾನ್ಯರಿಗೆ ಕ್ರಾಂತಿ ಎಂದರೆ ದೊಡ್ಡ ವಿಷಯ ಮತ್ತು ಭಾರವಾದ ಪದವಾಗಿಯೂ ಕಾಣುತ್ತಿತ್ತು. ಆದರೆ ಇಂದು ಸಣ್ಣ ಪುಟ್ಟ ಕಾಲೆಳೆಯುವ ತಂತ್ರಗಳನ್ನು ಕೂಡಾ ಕ್ರಾಂತಿ ಪಟ್ಟಿಯಲ್ಲಿ ಸೇರಿಸಿದ್ದೇವೆ, ಕ್ರಾಂತಿಯ ಮೂಲ ಅರ್ಥ ನಾವು ಎಂದುಕೊಂಡ ಸ್ವರೂಪದಲ್ಲಿಲ್ಲ. ನಮಗೆಲ್ಲಾ ತಿಳಿದಿರುವಂತೆ ಕರ್ನಾಟಕ ರಾಜ್ಯದ ರಾಜಕೀಯ ಡೊಂಬರಾಟವನ್ನು ಮಾಧ್ಯಮದಲ್ಲಿ ಬಿತ್ತರಿಸಿರುವ ರೀತಿ, ಪ್ರತಿದಿನ ಒಂದಲ್ಲಾ ಒಂದು ಪತ್ರಿಕೆಯಲ್ಲಿ ಈ ಬಗ್ಗೆ ಕ್ರಾಂತಿ ಎಂಬ ಪದ ಬಳಕೆ ಮಾಡಿರುತ್ತಾರೆ.  

ಬದಲಾವಣೆ ಯಾರಿಗೆ ಬೇಡ!, ಬದಲಾವಣೆಯಿಂದ ಏನಾದರು ಒಳ್ಳೆಯದಾಗಲಿ ಎನ್ನುವ ಆಕಾಂಕ್ಷೆ ಸಹಜವಾಗಿಯೇ ಇರುತ್ತದೆ. ಹಾಗಾಗಿ ಕ್ರಾಂತಿಯ ಗುಣಗಳು ಎಲ್ಲರಲ್ಲಿಯೂ ಇರುತ್ತವೆ, ಎಲ್ಲರೂ ಅದನ್ನು ಪ್ರದರ್ಶಿಸಲು ಹೋಗುವವರೆ, ಸಾರ್ವಜನಿಕ ಹಿತಾಸಕ್ತಿಗೋಸ್ಕರ ತೊಡಗಿಕೊಳ್ಳುವವರಿಗೆ ಹಲವರ ಸಹಾಯ ಹಸ್ಥ ಸಿಗುತ್ತದೆ. ಇತ್ತೀಚಿಗೆ ಭ್ರಷ್ಟಾಚಾರದ ವಿರುದ್ದ ಕ್ರಾಂತಿಗೆ ನಾಂದಿ ಹಾಡಿದ ಅಣ್ಣಾ ಹಜಾರೆ ಇದಕ್ಕೊಂದು ಉತ್ತಮ ನಿದರ್ಶನ. ಇನ್ನು ಕೆಲವರದ್ದು ಕ್ರಾಂತಿಯ ಸ್ವರೂಪ ಮತ್ತು ಮುನ್ನಡೆಸುವಲ್ಲಿನ ಕಾರ್ಯತಂತ್ರಗಳು ವಿಭಿನ್ನವಾಗಿರುತ್ತದೆ, ಕೆಲವೊಮ್ಮೆ ಸಂದರ್ಭ ಮತ್ತು ಪರಿಸ್ಥಿತಿಯಿಂದ ಹತ್ತಿಕ್ಕಲ್ಪಡುತ್ತದೆ ಅಥವಾ ಅದರ ಮೊಣಚನ್ನು ಕಳೆದುಕೊಂಡಿರುತ್ತದೆ. ಕ್ರಾಂತಿ ಮನುಷ್ಯನ ಸಹಜ ಗುಣವಾಗಬೇಕು, ಕ್ರಾಂತಿ ಎಲ್ಲೂ ಅದೃಷ್ಯವಾಗಿರುವುದಿಲ್ಲ. ಪ್ರತೀ ವ್ಯಕ್ತಿಯಲ್ಲಿಯೂ ಕ್ರಾಂತಿಯ ಸ್ವಭಾವವಿರುತ್ತದೆ ಕೆಲವರು ಪ್ರಕಟಿಸುತ್ತಾರೆ ಮತ್ತೆ ಕೆಲವರು ಕ್ರಾಂತಿಯನ್ನು ಬೆಂಬಲಿಸುವ ಮೂಲಕ ವ್ಯಕ್ತಪಡಿಸುತ್ತಾರೆ ಇನ್ನು ಕೆಲವರು ಸಂಘಗಳು, ಸಂಘಟನೆ ಇತ್ಯಾದಿಗಳನ್ನು ಸೇರುವ ಮೂಲಕ ವ್ಯಕ್ತಪಡಿಸುತ್ತಾರೆ. ಒಟ್ಟಾರೆಯಾಗಿ ವ್ಯಕ್ತಿ ತನ್ನ ಬೇಕು ಬೇಡಗಳನ್ನು ವಿಮರ್ಷಿಸಬೇಕು, ಬೇಡವಾದಾಗ, ಶೋಷಣೆಗೆ ಒಳಗಾದಾಗ ದೊಡ್ಡ ದ್ವನಿಯೊಂದು ಮೊಳಗಬೇಕು, ಆಗ ಕ್ರಾಂತಿಗೆ ನಾಂದಿ ಹಾಡಿದಂತೆ ಮತ್ತು ಅದರ ಧ್ವನಿಗೆ ಮನುಕುಲದ ಪ್ರಾಮಾಣಿಕ ಒಳಿತಿಗೆ ಕೈಜೋಡಿಸುವ ಜೊತೆಗೆ ಅನ್ಯಾಯವನ್ನು ವಿರೋಧಿಸುವ ಜನಸಮೂಹ ಕಟ್ಟಿಕೊಳ್ಳುವ ಶಕ್ತಿ ಅದಕ್ಕಿರಬೇಕು. ಇದರಿಂದಾಗಿ ಸಮಾಜ ಒಂದು ಬದುಕಲು ಯೋಗ್ಯ ತಾಣವಾಗಿ ರೂಪುಗೊಳ್ಳುವಲ್ಲಿ ಎರಡು ಮಾತಿಲ್ಲ ಅಲ್ಲವೇ??