ಪುಟಗಳು

05 October 2010

B B M P ಭಿತ್ತಿ ಚಿತ್ರಗಳು ಮತ್ತು ನಮ್ಮ (ಮರ್ಯಾದಸ್ಥ ?) ಜನರು !!!

ನೆನ್ನೆ ಮತ್ತು ಇಂದು ಯಾವುದೊ ಒಂದು ಕಾರ್ಯನಿಮಿತ್ತ ನಮ್ಮ ನಿರ್ಮಲ ಬೆಂಗಳೂರನ್ನು ಸುತ್ತುವ ಭಾಗ್ಯ ನನಗೆ ಒದಗಿ ಬಂದಿತ್ತು. ಬೆಂಗಳುರಿನಲ್ಲೇ ಹುಟ್ಟಿ ಬೆಳದರೂ ಸರಿಯಾಗಿ ಬೆಂಗಳೂರು ತಿಳಿಯದ ನಾನು  BMTC ಬಸ್ ಹಿಡಿದು ಸಂಚರಿಸುವಾಗ ದಾರಿಯ ಉದ್ದಕ್ಕೂ ಅಕ್ಕ-ಪಕ್ಕ ಗೋಡೆಗಳಲ್ಲಿ ಬಿಡಿಸಿದ್ದ ಚಿತ್ರಗಳನ್ನು ನೋಡಿ ಮನಸ್ಸಿಗೆ ತುಂಬಾ ಸಂತೋಷವಾಗಿ ಒಂದು ಕ್ಷಣ ನಾನು ಬೆಂಗಳೂರಿನಲ್ಲಿ ಇದ್ದೆನೆಯೇ ಎಂಬ ಅನುಮಾನ ಬಂತು...ಅವು ನನ್ನ ಕಣ್ಣಿಗೆ ಕೇವಲ ಚಿತ್ರಗಳಂತೆ ಕಾಣಲಿಲ್ಲ...ಕರ್ನಾಟಕದ ಸಂಸ್ಕೃತಿ, ಕಲೆಯ ಇತಿಹಾಸದ ಗತವೈಭವ ಸಾರುತ್ತಿರುವ ಮಹಾನ್ ವ್ಯಕ್ತಿಗಳಂತೆ ಕಂಡವು...ಏನೆ ಆದರು ನಾನು ಇದುವರೆಗೂ ನೋಡಲು ಸಾಧ್ಯವಾಗದಂಥಹ ಅನೇಕ ಚಿತ್ರಗಳನ್ನು ನಾನು ಕಂಡೆ....ಇಂಥಹ ಕಲಾಕೃತಿಗಳನ್ನು ಭಿತ್ತಿಚಿತ್ರಗಳ ಮೂಲಕ ನೋಡಲು ಅಣುವುಮಾಡಿಕೊಟ್ಟ B B M P ಮತ್ತು ಇವುಗಳನ್ನು ಗೋಡೆಯಮೇಲೆ ಚಿತ್ರಸಿದ ಕಲಾವಿದರಿಗೆ ನನ್ನ ನಮನಗಳು....

ಆದರೆ ನನ್ನ ಈ ಸಂತೋಷ ತುಂಬ ಸಮಯ ಉಳಿಯಲಿಲ್ಲ....ಮುಂದೆ ಸಾಗುತ್ತಾ ನಮ್ಮ ನಾಗರೀಕ ಸಮಾಜದ ಮೇಲೆ ಅದರಲ್ಲೂ ನಮ್ಮ ಬೆಂಗಳೂರಿನ ಜನರ ಬಗ್ಗೆ ಅಸಹ್ಯದ ಭಾವನೆ ಹುಟ್ಟಿತು...B B M Pಯವರು ಗೋಡೆ  ಕಂಡಲ್ಲಿ ನಮ್ಮ ಜನರು ಮೂತ್ರ ವಿಸರ್ಜನೆ ಮಾಡುವುದನ್ನು ತಪ್ಪಿಸಲು ಮತ್ತು ನಮ್ಮ ನಿರ್ಮಲ ನರಗದ ಸೌಂದರ್ಯವನ್ನು ಹೆಚ್ಚಿಸಲು ಬಿಡಿಸಿದ್ದ  ಇಷ್ಟು ಸುಂದರವಾದ ಭಿತ್ತಿಚಿತ್ರಗಳ ಎದುರಿಗೆ ನಮ್ಮ ಜನರು (ಕೆಲವರು) ನಾಚಿಕೆಯಿಲ್ಲದೆ ಮೂತ್ರ ವಿಸರ್ಜನೆ ಮಾಡುತ್ತಿದ್ದರು....ಇದನ್ನು ನೋಡಿ ಅನಿಸಿದ್ದು ಮೊದಲು ಸಹ ಅಂದರೆ  ಬಿತ್ತಿಚಿತ್ರಗಳನ್ನು ಬಿಡಿಸುವ ಮುಂಚೆಯೂ ಇಲ್ಲಿ ಮೂತ್ರ ವಿಸರ್ಜನೆ ಮಾಡಬಾರದೆಂಬ ಬರಹ ಕಾಣಿಸುತ್ತಿದ್ದರು ಅದು ನಮಗಲ್ಲ ಕೇವಲ ಮರ್ಯಾದಸ್ಥರಿಗೆಂದು ಅಲ್ಲಿಯೇ ತಮ್ಮ ಕೆಲಸ ಮುಗಿಸಿ ಹೋಗುತ್ತಿದ್ದರು. ಆದರೆ ಭಿತ್ತಿ ಚಿತ್ರಗಳನ್ನು ಬಿಡಿಸಿದ ಮೇಲಾದರೂ ನಮ್ಮ  ಈ ಮರ್ಯಾದಸ್ಥ ಜನರು ನಮ್ಮ ಕಲೆ, ಸಂಸ್ಕೃತಿಗೆ ಬೆಲೆ ನೀಡಿ, ಅವುಗಳನ್ನು ಗೌರವಿಸಿ ಹಾಗೆ ಮಾಡುವುದಿಲ್ಲವೆಂದು ತಿಳಿದ B B M P ಯವರ ನಂಬಿಕೆಯನ್ನು ಸುಳ್ಳು ಮಾಡಿದ್ದರೆ...ಬರೀ ಇದೊಂದೇ ಘನ ಕಾರ್ಯವಲ್ಲ ಅದರ ಜೊತೆಗೆ ಅದೇ ಗೋಡೆಗಳ ಕೆಳಗೆ ಕಸದ ರಾಶಿ ನೋಡಿ ನನಗೆ ಅನ್ನಿಸಿದ್ದು ಕಾನೂನನ್ನು ಪಾಲಿಸುವುದು ಬೇಡ ಕೊನೆಪಕ್ಷ ಆ ಚಿತ್ರಗಳಿಗಾದರು, ಅವುಗಳನ್ನು ಬಿಡಿಸಲು ಕಷ್ಟ ಪಟ್ಟ ಕಲಾವಿದರಿಗದರೂ ಗೌರವ ನೀಡದ ನಮ್ಮ ಜನರ ಹೃದಯ ವೈಶಾಲ್ಯತೆಯನ್ನು ಹೋಗಳಬೇಕಲ್ಲವೇ???

ಸರ್ಕಾರ ಇದಕ್ಕೆಂದೆ ಕಂಡಕಂಡಲ್ಲಿ ನಿರ್ಮಲ ಬೆಂಗಳೂರು ಎಂಬ ಶೀರ್ಷಿಕೆಯಡಿ ಸಾರ್ವಜನಿಕ ಶೌಚಾಲಯಗಳನ್ನೂ ನಿರ್ಮಿಸಿದ್ದರು ಅದನ್ನು ಬಳಸುವ ಬದಲು ಹೀಗೆ ನಗರದ ಸೌಂದರ್ಯ ಹಾಳುಮಾಡುವ, ನಮ್ಮ ಸಂಸ್ಕೃತಿ, ಕಲೆಗೆ ಅಗೌರವ ತೋರಿಸುವ ಜೊತೆಗೆ ಅನಾರೋಗ್ಯ ಹರಡಲು ಕಾರಣವಾಗುವ ಇಂಥಹ ಜನರಿಗೆ ಎಂದು ತಾವು ಮಾಡುತ್ತಿರುವುದು ನಾಚಿಕೆ ಇಲ್ಲದ ಕೆಲಸ ಎಂದು ಅನಿಸುವುದಿಲ್ಲವೇ??? ಜೊತೆಗೆ ಅನೇಕ ಪ್ರವಾಸಿಗರು ಇವುಗಳನ್ನು ನೋಡಿ ನಮ್ಮ ಜನರ ಬಗ್ಗೆ ಅವರಿಗೆ ಮೂಡುವ ಭಾವನೆಗಳೇ ಬೇರೆ ಅಲ್ಲವೇ?? ಇದು ನಮ್ಮ ನಾಡು ಇದರ ಸ್ವಚ್ಚತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಅದಕ್ಕಾಗಿ ಸರ್ಕಾರ ಕಾನೂನು ಮಾಡಿ ಅದನ್ನು ಬಲವಂತವಾಗಿ ನಮ್ಮ ಮೇಲೆ ಹೆರುವ ಅಗತ್ಯವಿರಬಾರದು ಆದರೆ ಅದು ಸಾಧ್ಯವಿಲ್ಲ ಎಲ್ಲಿಯವರಿಗೆ ನಾನು ನಮ್ಮ ಜವಾಬ್ಧಾರಿಯನ್ನು ಅರಿತು ನಡೆದುಕೊಳ್ಳುವ ಹೊರತು ಸರ್ಕಾರವನ್ನು ದೂಷಿಸುವ ನಮ್ಮ ಕಾರ್ಯ ನಿಲ್ಲುವುದಿಲ್ಲ ಅಸಿಲಿಗೆ ಕಾನೂನು ಮಾಡುವುದು ಮಾಡಲಿ ನಾವು ಮುರಿದೆ ತೀರುತ್ತಿವೆ ಎನ್ನುವ  ಇಂಥವರು ಇರುವವರೆಗೂ  ನಮ್ಮ ಸಂಸ್ಕೃತಿ, ಕಲೆ ಉಳಿಯಲು ಸಾಧ್ಯವಾಗದು.....ಜೊತೆಗೆ ಅವುಗಳ ಮೇಲೆ ಗೌರವವು ಬರುವುದಿಲ್ಲ....ಎಲ್ಲೋ ಒಂದು ಕಡೆ ನನಗೆ ಅನಿಸಿದ್ದು  B B M P ಯವರು ಹೀಗೆ ಬಿತ್ತಿಚಿತ್ರಗಳನ್ನು ಬಿಡಿಸಿ ಅವುಗಳ ಮೌಲ್ಯ ಕುಸಿಯಲು ಪರೋಕ್ಷವಾಗಿ ಕಾರಣವಾಗಿದ್ದರೆ ಎಂದು.........

02 October 2010

ಗಾಂಧಿತಾತ...........ರಾಷ್ಟ್ರಪಿತ....

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ...ಪದಗಳಿಗೆ ನಿಲುಕದ ಅವರ ವ್ಯಕ್ತಿತ್ವ, ಅಹಿಂಸ ತತ್ವದ ಪ್ರತಿಪಾದಕ ಹಾಗು ಪಾಲಕ....  ಗಾಂಧೀಜಿ ಬ್ರಿಟಿಷರೊಡನೆ ಹೋರಾಡಿ ನಮ್ಮನೆಲ್ಲಾ ಸ್ವತಂತ್ರ ದೇಶದ ಪ್ರಜೆಗಳನ್ನಾಗಿ ಮಾಡಿದ್ದರೆ..... ಕೇವಲ ಗಾಂಧೀಜಿ ಮಾತ್ರವಲ್ಲ ಅನೇಖ ಸ್ವತಂತ್ರ ಹೋರಾಟಗಾರರ ಶ್ರಮದ ಪ್ರತಿಪಲವೇ ಇಂದು ನಾವೆಲ್ಲರೂ ಅನುಭವಿಸುತ್ತಿರುವ ಸ್ವತಂತ್ರ....ಇವರಿಗೆಲ್ಲರಿಗೂ ನಮ್ಮ ನಮನಗಳು...

ಗಾಂಧೀಜಿ ಎಂದಾಗ ನಮ್ಮ ಕಣ್ಣ ಮುಂದೆ ಬಂದು ನಿಲ್ಲುವ ಚಿತ್ರ...ಶುಭ್ರ ಬಿಳುಪಿನ ಬಿಳಿ ಪಂಚೆ....ಅರ್ದಂಭರ್ದ ಮೈಮುಚ್ಚಿದ ಬಿಳಿ ಶಾಲು....ದುಂಡಗಿನ ಆಕಾರದ ಕನ್ನಡಕ....ಕೈಯಲ್ಲಿ ಒಂದು ಕೋಲು....ಕಾಲಿಗೆ ಚಪ್ಪಲಿ..ಇದು ಅವರ ಚಿತ್ರಣ..... ಇಡೀ ದೇಶ ಹಸಿವು ಬಡತನದಿಂದ ಬಳಲುತ್ತಿರುವ ನಾನು ಮಾತ್ರ ಮೈತುಂಬ ಬಟ್ಟೆ ಧರಿಸಿ ಹೇಗೆ ನಡೆಯಲಿ ಎಂದು ತಮ್ಮ ಉಡುಗೆಯಲ್ಲಿ ಇಡೀ ಭಾರತದ ಚಿತ್ರಣವನ್ನು ಪ್ರತಿಕಿಸಿ ಬಡತನವನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು......ರಾಷ್ಟ್ರಪಿತ ಗಾಂಧೀಜಿ ಬಯಸಿದ್ದು ಕೇವಲ ಬ್ರಿಟಿಷರಿಂದ ಸ್ವತಂತ್ರ ಮಾತ್ರವಲ್ಲ ಬದಲಿಗೆ ಭಾರತದ ಪ್ರತಿ ಹಳ್ಳಿಗಳು ಸ್ವಯಂ ಪರಿಪೂರ್ಣತೆ, ಸ್ವಾವಲಂಬನೆ  ಸಾಧಿಸುವುದು, ಸ್ತ್ರಿ ಸ್ವತಂತ್ರದ ಜೊತೆಗೆ ಅವಳು ಸ್ವಾವಲಂಬಿಯಾಗಿ ಬದುಕುವುದು, ಪ್ರತಿಯೊಬ್ಬರೂ ಶಿಕ್ಷಣ ಹೊಂದುಬೇಕೆನ್ನುವುದು.....ಅವರು ರೈತ ನಮ್ಮ ದೇಶದ ಬೇನ್ನೆಲುಬೆಂದು ಹೇಳಿದ್ದರು........ಇವೆಲ್ಲ ಅವರು ಕಂಡ ಕನಸುಗಳು....ಈ ಕನಸುಗಳಲ್ಲಿ ಇಷ್ಟು ನನಸಾಗಿವೆ ಇನ್ನು ಎಷ್ಟೋ ಕನಸಾಗಿಯೇ ಉಳಿದಿವೆ....

ಅವರ ಕನಸಿನಂತೆ ನಮ್ಮ ಹಳ್ಳಿಗಳು ಸ್ವತಂತ್ರ ಬಂದು ಇಷ್ಟು ವರ್ಷವಾದರೂ ಸ್ವಯಂ ಪರಿಪೂರ್ಣತೆ, ಸ್ವಾವಲಂಬನೆಯನ್ನು ಸಾದಿಸುವಲ್ಲಿ ವಿಫಲವಾಗಿದೆ...ಇಂದು ಕೂಡ ಹಳ್ಳಿಗಳು ಸರ್ಕಾರದ ಸಹಾಯಹಸ್ತ ಬಯಸುತ್ತಿವೆ...ಅದು ತಪ್ಪು ಕೂಡ ಅಲ್ಲಾ....ಕಾರಣ ನಮ್ಮ ಪ್ರಜಾಪ್ರಭುತ್ವ ದೇಶದ ಮಹಾದೊರೆಗಳು (ರಾಜಕೀಯ ವ್ಯಕ್ತಿಗಳು)  ಅವುಗಳನ್ನು ಮುಂದುವರೆಯಲು ಬಿಡುವುದು ಇಲ್ಲ ಅಲ್ಲವೇ?? ಇನ್ನು ಸ್ತ್ರಿ ಸ್ವತಂತ್ರ.........ಗಾಂಧಿ ಎಂದು ಒಂಟಿಯಾಗಿ ಹೆಣ್ಣು ಮಧ್ಯ ರಾತ್ರಿ ಓಡಾಡುತ್ತಲೋ ಅಂದು ನಮಗೆ ನಿಜವಾದ ಸ್ವತಂತ್ರ ಎಂದರು....ಆದರೆ ಅದು ಇಂದು ಸ್ವಲ್ಪ ಮಟ್ಟಿಗೆ ಸಾಕರವಗಿದ್ದರು ಬಹಳಷ್ಟು ಹೆಣ್ಣು ಮಕ್ಕಳು ಇದನ್ನು ದುರುಪಯೋಗ ಪಡಿಸಿಕೊಂದಿರುವುದೇ ಹೆಚ್ಚು ಎನ್ನುವುದು ವಾಸ್ತವ......ಇಂದು ಶಿಕ್ಷಣ ಕ್ಷೇತ್ರದಲ್ಲಂತೂ ಕ್ರಾಂತಿಯನ್ನೇ ಮಾಡಿಬಿಟ್ಟಿದ್ದೇವೆ....ಆದರೂ ಇಂದಿನ ಶಿಕ್ಷಣ ಬಹಳ ದುಬಾರಿಯೇ ಸರಿ.......

ಇನ್ನು ನಮ್ಮ  ರಾಜಕೀಯ ವ್ಯಕ್ತಿಗಳು ಎಷ್ಟರ ಮಟ್ಟಿಗೆ ಇವರ ತತ್ವ, ಆದರ್ಶಗಳನ್ನು ಪಾಲಿಸುತ್ತಾರೆ ??? ಹೌದೌದು ನಮ್ಮ ರಾಜಕೀಯ ವ್ಯಕ್ತಿಗಳು ಹಿಂಸೆಯನ್ನು ಕನಸಿನಲ್ಲಿಯೂ ಕಂಡವರಲ್ಲ ಬದಲಿಗೆ ನಿಜವಾಗಿ ಹಿಂಸೆಯನ್ನು ಮಾಡುತ್ತ ಅಧಿಕಾರಕ್ಕಾಗಿ ದೊಡ್ಡ  (ಸ್ವ)ತಂತ್ರ ಹೋರಾಟವನ್ನೇ ಮಾಡಿಬಿಡುತ್ತಾರೆ....ಗಾಂಧೀಜಿಯಾ ಬಗ್ಗೆ ಬರೆಯುವಾಗ ರಾಜಕೀಯ ವ್ಯಕ್ತಿಗಳ ಬಗ್ಗೆ ಬರೆಯುವುದು ಗಾಂಧೀಜಿಗೆ ಮಾಡುವ ಅವಮಾನವೆನಿಸಿದರು ಅದನ್ನು ಬರೆಯಲೇ ಬೇಕೆಂದು ನನ್ನ ಕೈಬೆರಳುಗಳು ಹಾತೊರೆಯುತ್ತವೆ....ದೇಶದ ಪ್ರತಿಯೊಬ್ಬ ಪ್ರಜೆಯು ಮೂಲಭೂತ ಹಕ್ಕು ದೊರೆಯಬೇಕು...ಆದರೆ ಎಲ್ಲಿ ದೊರೆಯುತ್ತಿದೆ...ಬೆಳೆ ಬೆಳೆದು ಇಡೀ ದೇಶಕ್ಕೆ ಅನ್ನ ನೆಡುತ್ತಿದ್ದ ರೈತ ಇಂದು ಬೆಳೆ ಬೆಳೆಯಲಾಗದೆ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ....ಅವರ ಕುಟುಂಬಕ್ಕೆ ಪರಿಹಾರ ಘೋಷಿಸಿದರು ಅದು ಕೇವಲ ಘೋಷಣೆಯಷ್ಟೇ ಹಣ ಅವರ ಕೈಸೇರುವಷ್ಟರಲ್ಲಿ ಹರಿದು ನೂರಾರು ದಿಕ್ಕು ಸೇರಿ ಕೊನೆಗೆ ಅವರಿಗೆ ಸಿಗುವುದು ಕೇವಲ ಒಂದು ದಿನದ ಅಥವಾ ಒಂದು ವಾರದ ಜೀವನ ಸಾಗಿಸಲು ಅಷ್ಟೆ.....ಇಂಥಹ ಅದೆಷ್ಟೋ ಕಷ್ಟದ ಪರಿಸ್ಥಿಯಲ್ಲಿ ಇಂದು ನಮ್ಮ ದೇಶದ ಜನರಿದ್ದಾರೆ ಆದರೆ ನಮ್ಮ ರಾಜಕೀಯ ವ್ಯಕ್ತಿಗಳು ಇದರ ಪರಿವೆ ಇಲ್ಲದೆ ತಮ್ಮ ಕುರ್ಚಿ, ಅಧಿಕಾರಕ್ಕೆ ಗುದ್ದಾಡುತ್ತಾ.... ಚುನಾವಣೆ ಬಂದಾಗ ಮಾತ್ರ ಆಶ್ವಾಸನೆ ಇತ್ತು ಚುನಾವಣೆ ಮುಗಿದ ಬಳಿಕ ತಿರುಗಿಯೂ ನೋಡುವುದಿಲ್ಲ......ಅದರಲ್ಲೂ ಈಗಂತು ನಮ್ಮ ರಾಜಕೀಯ ವ್ಯಕ್ತಿಗಳಿಗೆ ಹಗರಣ ಗಳೆಂದರೆ ನೀರು  ಕುಡಿದಷ್ಟು ಸುಲಭವಾಗಿ ಬಿಟ್ಟಿದೆ .... ಗಾಂಧಿ ಹೇಳಿದ್ದು ಹಳ್ಳಿ ಜನರು ಸ್ವಾವಲಂಬಿಗಳಾಗಬೇಕು ಇಂದು ಆದರೆ ನಮ್ಮ ಜನರು ಅಷ್ಟೆ ಚುನಾವಣೆಯ ವೇಳೆ ನೀಡುವ ನೋಟು, ಬಟ್ಟೆ, ಹೆಂಡಕ್ಕಾಗಿ ತಮ್ಮ ತನವನ್ನೇ ಮಾರಿಕೊಳ್ಳುತ್ತ ದಾಸರಾಗಿ ಬಿಟ್ಟಿದ್ದಾರೆ...

ಅದೆಷ್ಟೋ ಇಂಥಹ ಗಾಂಧಿ ಜಯಂತಿಗಳು, ಸ್ವತಂತ್ರ ದಿನಾಚರಣೆಗಳು, ಬರಬಹುದು ಹೋಗಬಹುದು.....ಕೊನೆಗೆ ಉಳಿಯುವ ಪ್ರಶ್ನೆ.....ನಮಗೆ ಸ್ವತಂತ್ರ ತಂದು ಕೊಡಲು ಹೋರಾಡಿ ಮಾಡಿದ ಜೀವಗಳಿಗೆ ನಾವು ನೀಡುತ್ತಿರುವ ಗೌರವಗಳೆನಾದರೂ ಏನು ?? ಎಷ್ಟರ ಮಟ್ಟಿಗೆ ನಾವು  ಸ್ವತಂತ್ರವನ್ನು ನಮ್ಮ ದೇಶದ ಏಳಿಗೆಗಾಗಿ ಬಳಸಿಕೊಳ್ಳುತ್ತಿದ್ದೇವೆ ?? ಅಸಲಿಗೆ ಸ್ವತಂತ್ರ ಎಂಬ ಪದದ ಅರ್ಥವನ್ನು ನಾವು ತಿಳಿದಿರುವುದದರೂ ಹೇಗೆ ??
ನಿಜವಾದ ಸ್ವಾತಂತ್ರದ ಅರ್ಥ ಮತ್ತು ಅದರ ಸುದುಪಯೋಗದ ವಿನಃ ಇಂಥಹ ಅದೆಷ್ಟೋ ಗಾಂಧಿ ಜಯಂತಿಗಳು, ಸ್ವತಂತ್ರ ದಿನಾಚರಣೆಗಳು ಬಂದರು ಅವು ಕೇವಲ ಹೆಸರಿಗಷ್ಟೇ ಆಚರಣೆಗಳಗಿರುತ್ತವೆಯೇ  ಹೊರತು ನಿಜವಾಗಿ ಮಾನವನ ಮತ್ತು  ದೇಶದ ಅಭಿವೃಧಿ ಸಾಧ್ಯವಿಲ್ಲ ಎಂಬುದು ನನ್ನ ವಯುಕ್ತಿಕ ಅಭಿಪ್ರಾಯ.....     

           

                 

24 September 2010

ಸಾರ್ಥಕ ಬದುಕು ಅಂದರೆ.......???

ಬಹಳಷ್ಟು ಸಲ ನನ್ನನು ಕಾಡುವ ಪ್ರಶ್ನೆ ಬದುಕು ಸಾರ್ಥಕವಾಗಲು ಏನು ಮಾಡುಬೇಕು?  ಇದಕ್ಕೆ ಉತ್ತರ ಸಿಗುವುದು ಸುಲಭದ ಮಾತಲ್ಲ ಎಂಬುದು ನನಗೆ ತಿಳಿದೆದೆ. ಪ್ರತಿ ಮನುಷ್ಯನು ಜೀವನದಲ್ಲಿ ಕೆಲವೊಂದು ಆಸೆಗಳನ್ನೂ ಇಟ್ಟುಕೊಂಡಿರುತ್ತಾನೆ ಕೆಲವೊಮ್ಮೆ ಅವು ಅತಿಯಾಸೆಗಳು ಆಗಿರುತ್ತವೆ........ಸಾಮಾನ್ಯವಾಗಿ ಒಬ್ಬ ಸಾಮಾನ್ಯ ಮನುಷ್ಯನನ್ನ  ಯಾರಾದರು ನಿನ್ನ ಆಸೆ ಏನು?? ಎಂದು ಕೇಳಿದಾಗ ಮಾಮೂಲಿಯಾಗಿ ಬರುವ ಉತ್ತರ ಸುಖವಾಗಿ ಬಾಳಬೇಕು ಎಂಬುದೇ ಆಗಿರುತ್ತದೆ....ಸುಖ ಅನ್ನುವ ಎರಡಕ್ಷರದಲ್ಲಿ ಏನೇನೆಲ್ಲ ಅಡಗಿದೆ....ಕೆಲವರಿಗೆ ಸುಖ ಹಣ ಸಂಪಾದನೆ ಮಾಡುವಲ್ಲಿ ಸಿಕ್ಕರೆ ಮತ್ತೆ ಕೆಲವರಿಗೆ ಒಂದು ಮನೆ ಕಟ್ಟಬೇಕು, ಮನೆಯವರನ್ನೆಲ್ಲ ಚೆನ್ನಾಗಿ ನೋಡಿಕೊಳ್ಳಬೇಕು, ನಮ್ಮ ಹೆಣ್ಣು ಮಕ್ಕಳಿಗೆ ಒಳ್ಳೆಯ ಕೆಲಸ, ಆಸ್ತಿ ಹೊಂದಿರುವ ಹುಡುಗನನ್ನು ನೋಡಿ ಮದುವೆ ಮಾಡಬೇಕು, ಗಂಡು ಮಗನಿಗೆ ಒಳ್ಳೆಯೇ ಶಿಕ್ಷಣ ಕೊಡಿಸಿ ಲಂಚ ಕೊಟ್ಟಾದರೂ ಸರಿ ಸರ್ಕಾರೀ ಕೆಲಸ ಕೊಡಿಸಬೇಕು......ಹೇಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಹೀಗೆ ಬೆಳೆಯುವ ಪಟ್ಟಿ ಕೇವಲ ತನಗೆ-ತನ್ನ ಮನೆಯವರಿಗೆ ಮಾತ್ರ ಸಂಬಂದಿಸಿರುತ್ತದೆ.....
ಸಾರ್ಥಕ ಬದುಕು ಎಂದರೆ ಇದೇನಾ?? ವಯುಕ್ತಿಕ ಮಟ್ಟದಲ್ಲಿ ನೋಡಿದಾಗ....ಮನೆ ಕಟ್ಟುವುದು....ಹಣ, ಆಸ್ತಿ ಸಂಪಾದನೆ, ನಾನು ಇರುವ ಮನೆ, ಮನೆ ಮುಂದೆ ಇರುವ ಜಾಗ ಸ್ವಚ್ವ ವಾಗಿರಬೇಕು....ಮನೆಯಲ್ಲಿ ಒಬ್ಬ ಮನುಷ್ಯನ ಅಗತ್ಯಗಳನೆಲ್ಲ ಪೂರೈಸುವ ವಸ್ತುಗಳು ಇರಬೇಕು....ದಿನ ಬೆಳಿಗ್ಗೆ ಎದ್ದು ಬಿಸಿ-ಬಿಸಿ ಕಾಫಿ ಕುಡಿದು, ತಿಂಡಿ ತಿಂದು ಆಫೀಸಿಗೆ ಹೋಗಿ ಕೆಲಸ ಮುಗಿಸಿ ಮತ್ತೆ ಊಟ ಮಾಡಿ ಟೈಮ್ ಪಾಸು ಮಾಡೋದಕ್ಕೆ ಒಂದಿಷ್ಟು ಹೊತ್ತು TV  ನೋಡಿ ಮತ್ತೆ ಮಲಗುವುದು....ಇನ್ನು ರಜಾ ದಿನಗಳಲ್ಲಿ ಒಂದಿಷ್ಟು ಮೋಜು-ಮಸ್ತಿ ಮಾಡುವುದು....... ಇಷ್ಟೇ ಆದರೆ ಸಾರ್ಥಕ ಬದುಕು ಎಂದು ಕರೆಯಲು ಸಾಧ್ಯವೇ???

ನಾವು ಬದುಕಿರುವ ಸಮಾಜಕ್ಕೆ ನಾವು ನೀಡುವುದಾದರೂ ಏನು?? ಸಹಾಯದ ಅಗತ್ಯವಿರುವವರಿಗೆ ಎಂದಾದರೂ ಕೈಚಾಚಿದ್ದೆವೆಯೇ?? ತಿನ್ನಲು ಒಂದು ಹೊತ್ತು ಊಟ ಇಲ್ಲದವರು ಇಂದು ಎಷ್ಟೋ ಜನರಿದ್ದಾರೆ ಆದರೆ ಉಳ್ಳವರು ಮದುವೆ, ನಾಮಕರಣ, ಅನೇಕ ಸಮಾರಂಭಗಳಲ್ಲಿ ಹೊಟ್ಟೆ ಬಿರಿಯೆ ತಿಂದು ಉಳಿದುದ್ದನ್ನು ತಿಂದ ಎಲೆಯಲ್ಲಿಯೇ ಬಿಟ್ಟು ಹೋಗುವ ಜನರಿದ್ದಾರೆ ಅವರು ಬಿಟ್ಟು ಹೋಗುವ ಊಟದಲ್ಲಿ ಕಡಿಮೆಯೆಂದರೆ ಎರಡು ಮಕ್ಕಳಿಗೆ ಹೊಟ್ಟೆ ತುಂಬಿಸಬಹುದಾಗಿದೆ.....ಇಂಥಹ ಸಮಾರಂಭಗಳಲ್ಲಿ ಸಂಬ್ರಮದಿಂದ ಓಡಾಡಿಕೊಂಡು ಊಟ ಮಾಡುವವರು ಯಾರಾದರು ಅದರ ಬಗ್ಗೆ ಯೋಚನೆ ಮಾಡಿದ್ದಾರೆಯೇ...?? ಇಲ್ಲ...  ಮಾನ ಮುಚ್ಚಲು ಬೇಕಿರುವ ಬಟ್ಟೆ ಇಲ್ಲದವರು ಎಷ್ಟೋ ಜನರಿದ್ದಾರೆ....ಆದರೆ ನಾವುಗಳು ತಿಂಗಳಿಗೊಮ್ಮೆ ಹೊಸ ಬಟ್ಟೆ ಖರಿದಿಸುತ್ತಲೇ ಇರುತ್ತೇವೆ...ಎಂದಾದರೂ ಇದರ ಬಗ್ಗೆ ಯೋಚಿಸುತ್ತೆವೆಯೇ?? ಯಾರ ಯಾರಿಗೋ ಬೇಡ ನಮ್ಮ ಹೆತ್ತ ತಂದೆ-ತಾಯಿಯರಿಗೆ ನೀಡುವುದಾದರೂ ಏನು ?? ವಯಸ್ಸಾದ ಕಾಲದಲ್ಲಿ ಅವರಿಗೆ ನೀಡಬೇಕದ  ಆಸರೆಯನ್ನು ಕೊಡಲು ಇಂದು ನಾವು ವೃದ್ಧಶ್ರಮಗಳ ಮೊರೆ ಹೋಗಿದ್ದೇವೆ....ಅನೇಕ ಕುರುಡರು ರಸ್ತೆ ದಾಟಲು, ಬಸ್ಸು ಹತ್ತಲು ಪರದಾಡುತ್ತಿದ್ದರು ನಮ್ಮ ಪಾಡಿಗೆ ನಾವು ಇರುತ್ತೇವೆ......ದಿನ ನಿತ್ಯ ನಾವು ಬೇಟಿಕೊಡುವ ಸ್ಥಳಗಳಲ್ಲಿ ಮಾಮೂಲಿ ಎಂಬಂತೆ ಚಿಕ್ಕ ವಯಸ್ಸಿನ ಮಕ್ಕಳು ಶಾಲೆ ತೊರೆದು ದುಡಿಯುವುದನ್ನು ನಾವು ನೋಡುತ್ತಲೇ ಇರುತ್ತೇವೆ....   

ಇನ್ನು ಎಲ್ಲೋ ಯಾರೋ ಸತ್ತರೆ ನಮಗೇನು ಎಂಬ ಭಾವನೆ ನಾನು ಅನೇಕರಲ್ಲಿ ಕಂಡಿದ್ದೇನೆ....ಇಂದು ಮುಂಜಾನೆ ಕೂಡ ಆದದ್ದು ಅದೇ..ನಮ್ಮ ಆಫೀಸ್ ನಲ್ಲಿ ಡ್ರೈವರ್ ಆಗಿ ಕೆಲಸಮಾಡುತ್ತಿದ್ದ ಶ್ರೀಕಂಠ ಅವರು ಮುಂಜಾನೆ ತೀರಿಹೋದರು ಎಂದು ತಿಳಿದು ಬೇಸರದಿಂದ ಕುಳಿತು ಅಳುತ್ತಿದ್ದ ನಾನು...ಅದೇ ಆಫೀಸಿನಲ್ಲಿ ವಿಷಯ ತಿಳಿದಿದ್ದರೂ ತಮ್ಮ ಪಾಡಿಗೆ ತಾವು ತಮಾಷೆ ಮಾತನಾಡುತ್ತ ನಗುತ್ತಿದ್ದರವರನ್ನು ಕಂಡೆ.....ನಮ್ಮ ಜೊತೆಯಲ್ಲಿಯೇ ಕೆಲಸಮಾಡುತ್ತಿದ್ದ ಒಬ್ಬ ವ್ಯಕ್ತಿ ಇನ್ನಿಲ್ಲ ಎಂದು ತಿಳಿದಾಗ ನಾವು ನೀಡುವ ಪ್ರತಿಕ್ರಿಯೆ ಇದೇನಾ ??? ಸರಿ ಅವರಿಗಾಗಿ ಅಳುತ್ತ.... ಗಲಾಟೆ ಮಾಡಿ... ಆಫೀಸ್ ಗೆ ರಜಾ ನೀಡಿ ಎಂದು ಕೇಳಲು ಆಗುವುದಿಲ್ಲ ಕಾರಣ ಅವರು Dr ರಾಜಕುಮಾರ್ ಸತ್ತಗಲೋ, ವಿಷ್ಣುವರ್ಧನ್ ಸತ್ತಗಲೋ, ನಾವು ಮಾಡಿದ್ದನ್ನು ಕೇವಲ ಒಬ್ಬ ಮಾಮೂಲಿ ವ್ಯಕ್ತಿ ಸತ್ತಾಗ ನಾವು ಮಾಡುವುದಿಲ್ಲ ಅಲ್ಲವೇ...... ಎಲ್ಲಿ ನನ್ನ ಪ್ರಶ್ನೆ ಇಷ್ಟೇ....ಸತ್ತ ವ್ಯಕ್ತಿ ಯಾರೇ ಆದರೂ ಅವರನ್ನು ಕ್ಷಣ ಮಾತ್ರ ನೆನೆಯುವುದು ಮುಖ್ಯ...ಅದು ಪ್ರಸಿದ್ದ ವ್ಯಕ್ತಿಗಳಾದ  Dr ರಾಜಕುಮಾರ್, ವಿಷ್ಣುವರ್ಧನ್, ಗಂಗೂಬಾಯಿ ಹಾನಗಲ್ಲ, ಅಶ್ವಥ್,  ರಾಜಶೇಕರ್ ರೆಡ್ಡಿಯೇ ಆಗಿರಲಿ ಅಥವಾ ವೀರಪ್ಪನ್, ಪ್ರಭಾಕರನ್ ರಂಥಹ ಕುಖ್ಯಾತ ವ್ಯಕ್ತಿ ಗಳೇ ಆಗಿರಲಿ ಸತ್ತಮೇಲೆ ಅವರುಗಳನ್ನು ಕೇವಲ ಒಬ್ಬ ಮನುಷ್ಯನನ್ನಗಿಯೇ ನೋಡಬೇಕು....ನಂತರ ಆತ ಮಾಡಿರುವ ಕೆಲಸಗಳು ಬರುತ್ತವೆ ಎಂಬುದು ನನ್ನ ವಯುಕ್ತಿಕ ಅಭಿಪ್ರಾಯ.... ನಮ್ಮ ದೇಶದಲ್ಲಿ ನಮ್ಮ ಬಂಧುಗಳೋ , ಸ್ನೇಹಿತರೋ ಸತ್ತಾಗ ನೀಡುವ ಪ್ರತಿಕ್ರಿಯೆಯನ್ನ ಪಾಕಿಸ್ತಾನದಲ್ಲಿ ಯಾರೋ ಒಬ್ಬರನ್ನು ಗುಂಡಿಕ್ಕಿ ಕೊಂದ ದೃಶ್ಯವನ್ನು ನೇರವಾಗಿ ನೋಡಿದಾಗಲು ನಾವು ಮರುಗುವುದಿಲ್ಲ ಕಾರಣ ಅವರು ನಮ್ಮವರಲ್ಲ..ಅವರಿಗೂ ನಮಗೂ ಸಂಭಂದವಿಲ್ಲ ಎಂದು.......

ನಾವು ಪ್ರಪಂಚದಲ್ಲಿ ಕಷ್ಟದಲ್ಲಿರುವ ಎಲ್ಲರಿಗೂ ಸಹಾಯ ಮಾಡಲು ಸಾಧ್ಯವಿಲ್ಲವೆಂದು ನನಗೆ ತಿಳಿದೆದೆ....ಆದರೆ ಬದುಕನ್ನು ಸಾರ್ಥಕಗೊಳಿಸಲು ನಮ್ಮ ಮನೆಯವರಿಗಾಗಿ  ನಾವು ಮಾಡುವ ಪ್ರಯತ್ನದಲ್ಲಿ ಕಿಂಚಿತ್ತಾದರೂ ಕೈಲಾಗದವರ, ಸಹಾಯದ ಬೇಕಾಗಿರುವವರಿಗೆ ನಮ್ಮ ಕೈಲಾದ ಸಹಾಯ ಮಾಡಬಹುದು ಎಂಬುದು ನನ್ನ ಅಭಿಪ್ರಾಯ....ಸರಿ ಇನ್ನು ನಾವು ಹೇಗೆ ಇಂಥಹವಿರಿಗೆ ಸಹಾಯ ಮಾಡಬಹುದು ಎಂಬ ಪ್ರಶ್ನಗೆ ನನಗೆ ಅನ್ನಿಸಿದ ಕೆಲವು ಉತ್ತರಗಳನ್ನು ಇಲ್ಲಿ ನೀಡಲು ಇಷ್ಟ ಪಡುತ್ತೇನೆ......ಊಟದ ವಿಷಯ ಬಂದಾಗ ಯಾವುದೇ ಸಭೆ- ಸಮಾರಂಭಗಳಿಗೆ ಹೋದಾಗ ಅಗತ್ಯವಿರುವಷ್ಟು, ನಿಮಗೆ ತಿನ್ನಲು ಆಗುವಷ್ಟು ಮಾತ್ರ ಹಾಕಿಸಿಕೊಳುವುದು ಒಂದು ವೇಳೆ ಉದಿದರೆ ಅದನ್ನ ಯಾವುದಾದರು ಅನಾಥಾಶ್ರಮ, ವೃದ್ದಾಶ್ರಮ ಅಥವ ದೇವಸ್ಥಾನದ ಮುಂದೆ ಸಾಲಾಗಿ ಕುಳಿತು ದುಡಿಯಗದೆ ಇರುವ ಜೀವಗಳಿಗೆ ನೀಡಬಹುದು. ಬಟ್ಟೆ ವಿಷಯಕ್ಕೆ ಬಂದಾಗ ನೀವು ತಿಂಗಳಿಗೊಮ್ಮೆ ಹೊಸ ಬಟ್ಟೆ ಖರೀದಿಸುವುದು ತಪ್ಪಲ್ಲ ಆದರೆ ನಿಮ್ಮ ಹಳೆಯ ಬಟ್ಟೆಗಳನ್ನು ಬೀರುವಿನಲ್ಲಿ ಗಂತು ಕಟ್ಟಿ ಇಡುವ ಬದಲಿಗೆ ಅನಾಥ ಮಕ್ಕಳಿಗೆ ನೀಡುವುದು ಉತ್ತಮವಲ್ಲವೇ. ಕೇವಲ ನಿಮ್ಮ ಮನೆ, ಮನೆ ಮುಂದಿನ ಜಾಗ ಮಾತ್ರ ಸ್ವಚ್ಛತೆ ಬಗ್ಗೆ ಮಾತ್ರ ಕಾಳಜಿ ವಹಿಸದೆ ಇಡೀ ಬೀದಿಯ ಸ್ವಚ್ಛತೆಯ ಬಗ್ಗೆ ಎಲ್ಲರು ಕುಡಿ ಶ್ರಮಿಸಿದರೆ....ಒಂದು ಬೀದಿ  ಸ್ವಚ್ಛವಾಗಿದ್ದರೆ.......ಒಂದು ಊರು ಸ್ವಚ್ಚವಗಿದ್ದಂತೆ...ಒಂದು ಊರು ಸ್ವಚ್ಚವಗಿದ್ದರೆ ಒಂದು ರಾಜ್ಯ.....ಒಂದು ರಾಜ್ಯ ಸ್ವಚ್ಛವಾಗಿದ್ದರೆ..... ಒಂದು ದೇಶ ಆರೋಗ್ಯ ಪೂರ್ಣವಾಗಿದ್ದಂತೆ ಅಲ್ಲವೇ..? ಹಣ ಸಂಪಾದನೆಯೊಂದೆ ಸಾರ್ಥಕ ಜೀವನದ ಗುರುತಲ್ಲ.....ತಾಣ ಮನೆ- ಮನೆಯವರು ಎಂಬ ಭಾವನೆಯಾ ಜೊತೆಗೆ....ಒಂದು ಚೂರು-ಪಾರು ಕಷ್ಟದಲ್ಲಿರುವವರ ಸಹಾಯಕ್ಕೆ ಬರಬಹುದಲ್ಲವೇ? ಪ್ರತಿ ವಾರವನ್ನು ಮೋಜು-ಮಸ್ತಿ ಮಾಡಿ ಕಳೆಯುವುದಕಿಂತ ಶಲ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಓದುವುದನ್ನು ಕಲಿಸುದಕ್ಕೆ ಮೀಸಲಿಡಬಹುದಲ್ಲವೇ. ಕಾಣದ ದೇವರ ಮುಂದೆ ನಿಂತು ಎಲ್ಲರನ್ನು ಚೆನ್ನಾಗಿ ಇಟ್ಟಿರು ಎಂದು ಕೇಳುತ್ತ ಸಮಯ ವ್ಯರ್ಥ ಮಾಡುವ ಬದಲು ನಿಮ್ಮ ಕಣ್ಣಿಗೆ ಕಾಣುವ ನಿಮ್ಮ ಸಹಾಯದ ಅಗತ್ಯವಿರುವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ಸಾರ್ಥಕ ಬದುಕು ಸಾಗಿಸಲು ಇಷ್ಟು ಸಾಕಲ್ಲವೇ???

ಸಲಹೆಗನ್ನು ಕೊಡುವುದು ತುಂಬಾ ಸುಲಭ ಅದನ್ನು ಕಾರ್ಯರೂಪಕ್ಕೆ ತರುವುದು ಕಷ್ಟ..ಇಷ್ಟು ಹೇಳಿ ತೋಚಿದ್ದನೆಲ್ಲ ಗೀಚಿರುವ ನೀವು ಇಲ್ಲಿಯವರೆಗೆ ಮಾಡಿರುವ ಸಹಾಯದ ಪಟ್ಟಿ ಕೊಡಿ ಎಂದರೆ.....ದಯವಿಟ್ಟು ಕ್ಷಮಿಸಿ ಇಲ್ಲಿಯವರೆಗೆ ನನ್ನನ್ನು ಪ್ರೀತಿಸಿದ ಜೀವಗಳಿಗೆ ತೊಂದರೆ ಕೊಡುವುದನ್ನು ಬಿಟ್ಟು ಬೇರೆ ಯಾವುದೇ ಸಹಾಯವನ್ನು ನಾನು ಮಾಡಿಲ್ಲ....................                            

16 September 2010

ಗಣೇಶ ಹಬ್ಬ........ಅಂದು-ಇಂದು.....!!!

 ಹಿಂದೂಗಳು ನಾವು ಬರುವ ಇಲ್ಲ ಹಬ್ಬಗಳನ್ನೂ ಸಂತೋಷದಿಂದ ಆಚರಿಸುವುದು ನಮ್ಮ ಸಂಪ್ರದಾಯ....ದಿನ ನಿತ್ಯದ ಅಗತ್ಯವಿರುವ ವಸ್ತುಗಳ ಬೆಲೆ ಗಗನಕ್ಕೆರಿದರೂ ಸರಿಯೇ ನಾವು ಹಬ್ಬ ಆಚರಿಸದೇ ಇರಲು ಸಾಧ್ಯವಿಲ್ಲ.....ಇನ್ನು ನಮ್ಮ ವಿಘ್ನ ನಿವಾರಕ ಗಣೇಶ ಹಬ್ಬ ಬಂತೆಂದರೆ ಸಾಕು ಎಲ್ಲಿಲ್ಲದ ಸಡಗರ-ಸಂಭ್ರಮ........ಗಣೇಶ ಹಬ್ಬದ ಬಗ್ಗೆ ನನಗೆ ಅನಿಸಿದ ಎರಡು ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುತ್ತೇನೆ..... ನಾನು ಚಿಕ್ಕವಳಿದ್ದಾಗ ನಮ್ಮೂರಿನಲ್ಲಿ ಗಣೇಶ ಹಬ್ಬ ಬಂತೆಂದರೆ ಎಲ್ಲಿಲ್ಲದ ಸಡಗರ....ನನ್ನೂರಿನ ಪ್ರತಿಯೊಬ್ಬರು ಸೇರಿ ಈ ಹಬ್ಬ ಆಚರಣೆ ಮಾಡುತ್ತಿದೆವು.....ಅಲ್ಲಿ ಯಾವುದೇ ರೀತಿಯ ರಾಜಕೀಯ ಪ್ರಭಾವವಾಗಲಿ....ಜಾತಿಯ ಪ್ರಭಾವವಾಗಲಿ.....ಯಾವುದು ಇರುತ್ತಿರಲಿಲ್ಲ...ಆಗ ನನಗೆ ಅನಿಸುತ್ತಿದಿದು ಅಬ್ಬ ನನ್ನ ಊರು ಎಷು ಚೆನ್ನ ಎಲ್ಲರು ಸೇರಿ ಎಷ್ಟು ಚೆನ್ನಾಗಿ ಹಬ್ಬ  ಆಚರಿಸುತ್ತಿದ್ದಾರೆ ......."ಊರಿಗೊಂದೇ ಗಣಪತಿ" ಎಂಬ ಮಾತು ನೆನಪಾಗುತ್ತಿತ್ತು. ಇನ್ನು ಗಣೇಶನಿಗೆ ಪೂಜೆ ಮುಗಿಸಿ ನೀಡುವ ಪ್ರಸಾದಕ್ಕೆ ಯಾವಾಗಲು ನಾನು ಮುಂದು...ಹುಡುಗಿಯಾಗಿದ್ದರು ಮನೆಯಲ್ಲಿ ಮುದ್ದಿನಿಂದ ಸಾಕಿದ್ದರಿಂದ ಹುಡುಗರ ಮಧ್ಯೆ ಯಾವುದೇ ಮುಜುಗರ ಅಥವ ನಾನು ಹುಡುಗಿ ಎಂದು ಯೋಚಿಸದೆ ಪ್ರಸಾದಕ್ಕಾಗಿ ನುಗ್ಗಿ ಹೋಗುತ್ತಿದೆ........ಹೀಗೆ ನನ್ನೂರು ಎಂದರೆ ನನಗೆ ಒಂಥರಾ ಅಭಿಮಾನ...ಗೌರವ....   ಕೆಲವು ವರ್ಷಗಳ ನಂತರ ನನ್ನೂರಿನ ಸ್ಥಿತಿಯೇ ಬದಲಾಯಿತು.....

ಆಗ ನಾನು BA  ಓದುತ್ತಿದ್ದೆ....ಪ್ರತಿ ವರ್ಷದಂತೆ ಆ ವರ್ಷವೂ ಗಣೇಶ ಹಬ್ಬ ಬಂತು....ಅದರ ಜೊತೆಗೆ ಮನೆ ಮನೆಗೆ ಬಂದು ಗಣೇಶ ಇಡುತ್ತಿದ್ದೇವೆ ಹಣ ಕೊಡಿ ಎಂದು ಕೇಳುತ್ತಿದ್ದರು....ನನಗೆ ಆಶ್ಚರ್ಯವಾಗಿದ್ದು ಇಷ್ಟು ವರ್ಷದಿಂದ ಯಾರು ಕೂಡ ನನ್ನೂರಿನಲ್ಲಿ ಇದಕ್ಕಾಗಿ ಹಣ ಸಂಗ್ರಹಿಸುತ್ತಿರಲಿಲ್ಲ.....ಊರಿನ ಹಿರಿಯರು ಇದರ ಜವಾಬ್ಧಾರಿ ಹೊರುತ್ತಿದ್ದರು.....ಹಬ್ಬದಲ್ಲಿ ಇಲ್ಲ ಖರ್ಚು.... ಆಗು-ಹೋಗುಗಳಿಗೆ.... ಅವರೇ ಕಾರಣರಾಗಿರುತ್ತಿದ್ದರು.....ಆದರೆ ಇದ್ದಕ್ಕಿದ್ದ ಹಾಗೆ ಈ ರೀತಿ ಹಣ ಕೇಳಲು ಏನು ಕಾರಣ??? ಇದಕ್ಕೆ ಉತ್ತರ..... ಅಯ್ಯೋ ಅದೇ ನೋಡಿ ನಮ್ಮ ರಾಜಕೀಯದ ಪ್ರಭಾವ....ಯಾವಾಗ ನಮ್ಮೂರಿನ ಜನರು ನಾನು BJP ಪಕ್ಷ ನೀನು JDS  ಎಂದು ಜಗಳವಾದತೊಡಗಿದರೋ  ಅಲ್ಲಿಂದ ಶುರು ನೋಡಿ...ಚಿತ್ರ-ವಿಚಿತ್ರ ಹಬ್ಬದ ಆಚರಣೆ.....  "ಊರಿಗೊಂದೇ ಗಣಪತಿ" ಎಂಬುದು ನಂತರ "ಪಕ್ಷಕೊಂದು ಗಣೇಶ" ಆಯಿತು...ಒಬ್ಬರ ಮೇಲೊಬ್ಬರು ಎಂಬಂತೆ ಅವರಿಗಿಂತ ನಾವು ಜೋರಾಗಿ ಗಣೇಶ ಕೂರಿಸಬೇಕು ಎಂದು BJP  ಪಕ್ಷದವರು ಅಂದು ಕೊಂಡರೆ ಈ ಬಾರಿ ನಾವು ಅವರಿಗಿಂತ ನಾವು ಜೋರಾಗಿ ಗಣೇಶ ಕೂರಿಸಬೇಕು ಎಂದು   JDS , ನಂತರ ಕಾಂಗ್ರೆಸ್ ಪಾರ್ಟಿ....ನನಗೆ ಇನ್ನು ನೆನಪಿದೆ ಒಂದೇ ವರ್ಷದಲ್ಲಿ 3  ಪಕ್ಷದವರು ಕುರಿಸಿದ್ದ ಗಣೇಶನನ್ನು ನೋಡಿ ನಾನು ಮನಸ್ಸಿನಲ್ಲಿಯೇ "ಗಣೇಶ ನಿನ್ನ ಮಹಿಮೆ ಅಪಾರ" ಎಂದು ಕೊಂಡೆ....

ಇನ್ನು ನನ್ನೂರಿನ ಜನೆರೆ ಹೀಗೋ ಅಥವ ಇಲ್ಲ ಹಳ್ಳಿ ಜನರೇ ಹೀಗೋ ಗೊತ್ತಿಲ್ಲ.....ಎಲ್ಲಿ ಗಣೇಶನ್ನು ಯಾರೂ ಕೂರಿಸಿದರೆ ನಮಗೇನು ಪ್ರಸಾದ ಸಿಕ್ಕರೆ ಸಾಕು....ಒಂದು ಪಕ್ಷದವರು ಕೂರಿಸಿದ ಗಣೇಶನ ಕಡೆ ಪ್ರಸಾದ ಸಿಗದಿದ್ದರೆ ಏನಂತೆ ಇನ್ನೊಂದು ಕಡೆ ಹೋಗೋಣ ಅಂತ ಹೇಳುತ್ತಿರುವುದನ್ನು ಎಷ್ಟೋ ಬಾರಿ ನಾನು ಕೇಳಿದ್ದೇನೆ.....

ಇನ್ನು ನಾನು MA ಸೇರಿದೆ.... ಆಗಲು ಒಂದು ಹೊಸ ಬದಲಾವಣೆ......  ಪ್ರತಿ ವರ್ಷದಂತೆ ಆ ವರ್ಷವೂ ಗಣೇಶ ಹಬ್ಬ ಬಂತು....ಆಗ ನೋಡಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಸಹ ಬೀದಿ ಬೀದಿಗಳಲ್ಲಿ ಹೋಗುವವರನ್ನು ಬರುವವರನ್ನು ಅಡ್ಡಗಟ್ಟಿ ಚಂದ ವಸೂಲಿಗೆ ಇಳಿದುಬಿಟ್ಟಿದ್ದರು....ಅಯ್ಯೋ ಗಣೇಶ ನಿನ್ನ ಹಬ್ಬ ಆಚರಿಸಲು ನಮ್ಮೂರಿನ ಜನರಿಗೆ ಎಂತಹ ಬಡತನ ಕೊಟ್ಟುಬಿಟ್ಟೆ....ಎಲ್ಲರನ್ನು ಕಾಡಿ-ಬೇಡಿ ಇಲ್ಲ ಜಬರುದಸ್ತಿಯಿಂದ  ದುಡ್ಡು ಕೇಳಿ ಹಬ್ಬ ಆಚರಿಸ ಬೇಕೇ??? ಇಗ ನೋಡಿ "ಪಕ್ಷಕೊಂದು ಗಣೇಶ" ಹೋಗಿ  ನಮ್ಮೂರಿನ "ಗಲ್ಲಿಗೊಂದು ಗಣೇಶ" ಆಗಿಬಿಟ್ಟಿತು....  ಇತ್ತಿಚಿನ ವರ್ಷಗಳಲ್ಲಿ ನಮ್ಮೂರಿನಲ್ಲಿ ಗಣೇಶ ಹಬ್ಬ ಬಂತೆಂದರೆ ಸುಮಾರು 7 - 8  ಗಣೇಶನನ್ನು ಕಾಣಬಹುದು.....ನನ್ನೂರಿನಲ್ಲಿ ಇರುವುದು ಕೇವಲ 150  ಮನೆಗಳು....150  ಮನೆಗಳಿಗೆ 7 - 8  ಗಣೇಶ......

ಇನ್ನು ಇತ್ತಿಚಿನ ದಿನಗಳಲಿ ನಾನು ಕಂಡ ಇನ್ನೊದು ಬೆಳವಣಿಗೆಎಂದರೆ ಹಬ್ಬ ದಿನಗಳಲಿ ಏರ್ಪಡಿಸುವ archestra ....ಆಹಾ ಏನು ಗಣೇಶ ಎಂದಾದರೂ ನನ್ನ ಹಬ್ಬವನ್ನು ಈ ರೀತಿ ಆಚರಿಸಿ ಎಂದು ಹೇಳಿದ್ದನೆಯೇ.....ಕುಡಿದು.... ತುರಾಡಿ ಅಲ್ಲಿ ಹಾಡುವವರಿಗೆ ಅಸಭ್ಯವಾಗಿ ಬೈಯುತ್ತ....ಅಲ್ಲಿ ಹೊಟ್ಟೆ ಪಾಡಿಗಾಗಿ ಹಾಡುವ ಹೆಣ್ಣು ಮಕ್ಕಳನ್ನು ಕಿಟಲೆ ಮಾಡುತ್ತಾ.... ತಾವು ಹೇಳಿದ ಹಾಡನ್ನೇ ಹಾಡಬೇಕು ಎಂದು ವರ್ತಿಸುವ ನನ್ನೂರಿನ ಜನರನ್ನು ಕಂಡೆರೆ ಇತ್ತೀಚಿಗೆ ಒಂದು ರೀತಿಯ ದ್ವೇಷ ಹುಟ್ಟುತ್ತಿದೆ....ಇನ್ನು ಹಬ್ಬದ ಸಂದರ್ಭದಲ್ಲಿ ಜೋರಾಗಿ ದ್ವನಿವರ್ಧಕಗಳನ್ನೂ ಹಾಕಿ ತಮಗೆ ಇಷ್ಟ ಬಂದ ಸಿನಿಮ ಹಾಡುಗಳನ್ನು ಹಾಕುವ ಪರಿ ಆಹಾ ಆ ಗಣೇಶನೇ ಮೆಚ್ಚಬೇಕು.... ಅಂದು ಆಚರಿಸುತ್ತಿದ ನಮ್ಮೂರಿನ ಗಣೇಶನ ಹಬ್ಬಕ್ಕೂ ಇಂದು ಆಚರಿಸುತ್ತಿರುವ ಹಬ್ಬಕ್ಕೂ ನಿಜವಾಗಿಯೂ ಅಜಗಜಾಂತರ ವ್ಯತ್ಯಾಸ ಕಾಣುತ್ತದೆ....ದ್ವೇಷ....ಪಕ್ಷ....ನಾನೋ-ನೀನೋ ನೋಡಿಯೇ ಬಿಡೋಣ ಇಂದು ಒಬ್ಬರಿಗೊಬ್ಬರು ಸವಾಲು ಹಾಕಿದಂತೆ ಇಂದು ಹಬ್ಬ ಆಚರಿಸುತ್ತರೆಯೇ ಹೊರತು ಕಿಂಚಿತ್ತು ಭಕ್ತಿಯು ಅವರಲ್ಲಿ ಇಲ್ಲವಾಗಿದೆ..... ಎಲ್ಲರನ್ನು ಒಂದು ಮಾಡುವ ಉದ್ದೇಶದಿಂದ ಗಣೇಶ ಹಬ್ಬ ಆಚರಣೆ ಶುರುವಾಯಿತು ಆದರೆ ಇಂದು ಅದೇ ಹಬ್ಬ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಎಲ್ಲರು ಕಿತ್ತಾಡುವಂತಹ ಪರಿಸ್ತಿತಿ ಒದಗಿದೆ.... ಇಂತಹ ಬದಲಾವಣೆ ನನ್ನ ಊರಿನಲ್ಲಿ ಮಾತ್ರವಲ್ಲ ಇಂದು ಅನೇಕ ಹಳ್ಳಿಗಳಲ್ಲಿ ಇಂಥ ಪರಿಸ್ತಿತಿ ಇದೆ.....ನಮ್ಮ ಕೊಳಕು ರಾಜಕೀಯ ನಮ್ಮ ಹಬ್ಬ...ಆಚರಣೆಗಳ ಜೊತೆಗೆ ದಿನ ನಿತ್ಯ ಜೀವನನ್ನು ಕೊಳಕು ಮಾಡಿ ಬಿಟ್ಟಿದೆ.....ಇಲ್ಲಿ ಯಾರೂ ಯಾರ ಬಗ್ಗೆಯೂ ಆಲೋಚನೆ ಮಾಡುವುದಿಲ್ಲ....ಹಿಂದಿನ ದಿನಗಳಲಿ ಹಳ್ಳಿ ಜನರಲ್ಲಿ ಇದ್ದ ಪರಸ್ಪರ ಅವಲಂಬನೆ ಇಂದು ನಾವು ಕಾಣುವುದಿಲ್ಲ....ಎಲ್ಲವು ಬದಲಾಗಿದೆ........ಮನುಷ್ಯ....ಆತನ ಯೋಚನೆ......ಅದು ಕೇವಲ ತನ್ನ ಮತ್ತು ತನ್ನ ಮನೆಗೆ ಮಾತ್ರ ಸೀಮಿತವಾಗಿದೆ......ಸಮುದಾಯಕ್ಕಲ್ಲ.....ಎವೆಲ್ಲೆದಕ್ಕು ಕೊನೆ ಎಂದು???                                

 
                       

14 September 2010

ಮೂರ್ಖರ ಪೆಟ್ಟಿಗೆ ಮತ್ತು ರಿಯಾಲಿಟಿ ಷೋಗಳು............

   ಇತ್ತೀಚಿಗೆ ಎಲ್ಲೆ ಮೀರಿ ಮೂರ್ಖರ ಪೆಟ್ಟಿಗೆಯಲ್ಲಿ (TV ) ಪ್ರಸಾರವಾಗುತ್ತಿರುವ ರಿಯಾಲಿಟಿ ಷೋಗಳೆಂಬ ಅರ್ಥವಿಲ್ಲದ ಕಾರ್ಯಕ್ರಮಗಳನ್ನು  ನೋಡಿ ನನಗೆ ಅನಿಸಿದ ಎರಡು ಮಾತುಗಳನ್ನು ಬರೆಯಲು ಇಷ್ಟಪಡುತ್ತೇನೆ..... ಜಗತ್ತಿನ ಅತ್ಯಂತ ಪ್ರಭಾವಿ ಸಮೂಹ ಮಾಧ್ಯಮಗಳಲ್ಲಿ ಬಹುಷಃ TV  ಎಂಬ ಮಾಯಾಪೆಟ್ಟಿಗೆಯಷ್ಟು ಬೇರೆ ಯಾವುದೇ ಮಾಧ್ಯಮವು ತನ್ನ ಪ್ರಬಾವ ಬೀರುವುದಿಲ್ಲ....  ಇಂದು ಇದರ ಪ್ರಭಾವ ಎಷ್ಟಿದೆ ಎಂದರೆ ಹುಟ್ಟಿ ಕೆಲವೇ ತಿಂಗಳಾದ ಮಗುವಿನ ಅಳು ನಿಲ್ಲಿಸಲು TV ಹಾಕಿ ಅದರ ದ್ವನಿ ಕೇಳಿಸಿದರೆ ಸಾಕು...ಆ ಮಗು ಥಟ್ಟನೆ ಅಳು ನಿಲ್ಲಿಸುವುದು.....ಅಷ್ಟರ ಮಟ್ಟಿಗೆ ಇದು ಪ್ರಭಾವ ಬೀರುತ್ತಿದೆ..... ಚಿಕ್ಕ ಮಕ್ಕಳಿನಿಂದ ಹಿಡಿದು ವಯಸ್ಸಾದ ಹಿರಿಯ ಜೀವಿಗಳವರೆಗೆ  TV  ತಮ್ಮ ಸಮಯ ಕಳೆಯುವುದಕ್ಕೆ ಇರುವ ಒಂದು ಸಾಧನವಾಗಿಬಿಟ್ಟಿದೆ..... ನೀವು ಯಾರನ್ನಾದರೂ TV ಯನ್ನು ಏಕೆ ನೋಡುತ್ತಿರಿ ಎಂಬ ಪ್ರಶ್ನೆ ಕೇಳಿ ನೋಡಿ......ಬಹುತೇಕ ಮಂದಿ ಹೇಳುವ ಉತ್ತರ "TIME  PASS " ಗಾಗಿ ಎಂದು ಹೇಳುತ್ತಾರೆ.....ಟೈಮ್ ಅನ್ನು ಯಾರೂ ಪಾಸ್ ಮಾಡಬೇಕಾಗಿಲ್ಲ ಅದು ನೀವು ಪಾಸ್ ಮಾಡಿದರು.... ಇಲ್ಲವಾದರೂ.... ಪಾಸ್ ಆಗುತ್ತಲೇ ಇರುತ್ತದೆ....ಅದರ ಜೊತೆಗೆ ಪಾಸ್ ಆಗಬೇಕಾದವರು ನಾವುಗಳು....

ನಾನು ಚಿಕ್ಕವಳಿದ್ದಾಗ ನಮ್ಮ ಮನೆಯಲ್ಲಿ TV  ಇರಲಿಲ್ಲ ಅಂದು ನಮ್ಮುರಿಗೆಲ್ಲ ಕೇವಲ ಒಂದು ಮನೆಯಲ್ಲಿ ಮಾತ್ರ TV  ಇತ್ತು ನಾವೆಲ್ಲ ಒಂದು ವಾರದಲ್ಲಿ ಕೇವಲ ಎರಡು ದಿನ ಮಾತ್ರ  TV  ಅವರ ಮನೆಗೆ  ನೋಡಲು ಹೋಗುತ್ತಿದ್ದೆವು.... ಪ್ರತಿ ಬುಧವಾರ ಬರುತ್ತಿದ್ದ ಚಿತ್ರ ಮಂಜರಿ ಮತ್ತು ಭಾನುವಾರ ಬರುತ್ತಿದ್ದ ಹಿಂದಿಯ ರಾಮಾಯಣ ಕಾರ್ಯಕ್ರಮ......ಆದರೆ ಇಂದು ಪ್ರತಿ ಮನೆ ಅಷ್ಟೆ ಏಕೆ ಗುಡಿಸಲುಗಳಲ್ಲಿ ವಾಸಿಸುವವರು  TV  ಹೊಂದಿರುತ್ತಾರೆ....ಮನೆಯಲ್ಲಿ  TV ಇರುವುದು ಅವರ ಪ್ರತಿಷ್ಠೆಯ ಜೊತೆಗೆ ಮೂಲಭೂತ ಅಗತ್ಯಗಳಲ್ಲಿ ಒಂದು ಎಂಬಂತೆ ಆಗಿಬಿಟ್ಟಿದೆ.... ಅಂದರೆ ಜನರು ಟಿವಿಯ ಮೇಲೆ ಎಷ್ಟು ಅವಲಂಬಿತರಾಗಿದ್ದಾರೆ ಅಲ್ಲವೇ???

ಜನರ ಈ ಅವಲಂಬನೆಯನ್ನೇ ಲಾಭವಾಗಿಸಿಕೊಂಡು ಇಂದು ಖಾಸಗಿ ಚಾನೆಲ್ ಗಳ ದರ್ಬಾರ್ ಗಳನ್ನೂ ಹೇಳಲು ಪದಗಳೇ ಸಾಲದು.... ಕೇವಲ ಬೆರಳೆಣಿಕೆಯಷ್ಟು ಇದ್ದ ಚಾನೆಲ್ ಗಳ ಸಂಖ್ಯೆ ಇಂದು ೨೦೦ -೨೫೦ರ ವರೆಗೆ ಧಾಟಿದೆ.....ಇನ್ನು ಕೆಲವು ಚಾನೆಲ್ ಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳ ಗೋಳನ್ನು ಹೇಳತೀರಲಗದು. ಹಿಂದಿ, ತಮಿಳು, ತೆಲುಗು ಧಾರಾವಾಹಿಗಳನ್ನೇ ಕನ್ನಡಕ್ಕೆ ಬಟ್ಟಿ ಇಳಿಸುವ ವೈಕರಿ ಅಬ್ಬಬ!!! ಇನ್ನು ಇತ್ತೀಚಿನ ಬೆಳವಣಿಗೆಯನ್ನು ಗಮನಿಸಿದಾಗ ರಿಯಾಲಿಟಿ ಷೋ ಗಳೆಂಬ  ಎಲ್ಲೆ ಮೀರಿದ ಹೊಸ ಕಾರ್ಯಕ್ರಮಗಳು ಅಬ್ಬರ.... ಮೊದಮೊದಲಿಗೆ ನಾನು ಕೂಡ ಈ ಷೋಗಳನ್ನೂ ನೋಡುತ್ತಾ  ಅದನ್ನೇ ಮನರಂಜನೆ ಎಂದು ಕೊಂಡಿದ್ದೆ.... ಪ್ರತಿ ಷೋಗಳಲ್ಲೂ ನಿರೂಪಕರು ನೆಡಿಸಿಕೊಡುವ ರೀತಿ ಅದನ್ನು ನೋಡಲು ಒಂದು ರೀತಿಯ ಸಂತೋಷ ಅನುಭವವಾಗುತ್ತಿತ್ತು....ಆದರೆ ಇತ್ತೀಚಿಗೆ ಚಾನೆಲ್ ಗಳು ತಮ್ಮ ಜನಪ್ರಿಯತೆಗಳನ್ನು ಹೆಚ್ಚಿಸಿಕೊಳ್ಳಲು, ಲಾಭ ಸಂಪಾದನೆಯ ಮನೋಭಾವದಿಂದ ತಮ್ಮ ಷೋ ಗಳಲ್ಲಿ ಭಾಗವಹಿಸುವವರನ್ನ ನಡೆಸಿಕೊಳ್ಳುವ ರೀತಿಯನ್ನು ನೋಡಿದಾಗ ಸಮಾಜವನ್ನು ಒಂದು ಒಳ್ಳೆಯ ಮಾರ್ಗದಲ್ಲಿ ತೆಗೆದುಕೊಂಡು ಹೋಗುವಲ್ಲಿ ಮುಖ್ಯ ಪಾತ್ರ ವಹಿಸುವ TV  ಮಾಧ್ಯಮದ ಬಗ್ಗೆ ಕೀಳು ಭಾವನೆ ಹುಟ್ಟುತ್ತದೆ.....

ಇಂದು ನಾವು ಪ್ರತಿ ನಿತ್ಯ ಅನೇಕ ರಿಯಾಲಿಟಿ ಷೋ ಗಳನ್ನೂ ನೋಡುತ್ತೇವೆ.....ಮೊದಲ ಬಾರಿಗೆ ಈ ಷೋ ಗಳು ಜನರ ಮನ ಗೆದ್ದರು ಬರುಬರುತ್ತಾ ಇವುಗಳ ಹಾವಳಿ ಹೇಳಲು ಅಸಾಧ್ಯ....ಇನ್ನು ಇತ್ತೀಚಿನ ಷೋ ಗಳಲ್ಲಿ ನಿರೂಪಕ, (ಹೆಚ್ಚಾಗಿ) ನಿರೂಪಕಿ ಮಣಿಯರು ಧರಿಸುವ ಉಡುಪುಗಳೋ ಅಯ್ಯೋ ಇವರಿಗೆ ಇದೆಂತಹ ಬಟ್ಟೆಯ ಬಡತನ  ಬಂದಿದೆ ಎನ್ನುವಂತಾಗಿದೆ...ಕಾರ್ಯಕ್ರಮದ ಶುರುವಿನಲ್ಲೋ ತಮಗೆ ತಾವೇ ಕರ್ನಾಟಕದ No .1 ರಿಯಾಲಿಟಿ ಷೋ ಎಂದು ಹೇಳುವ  ನಿರೂಪಕಿ ಮಣಿಯರು ಇಂಥಹ  No .1 ರಿಯಾಲಿಟಿ ಷೋಗಳನ್ನೂ ಮತ್ತು  ತಮ್ಮನ್ನು ಮನೆಮಂದಿಯೆಲ್ಲ ಕೂತು ನೋಡುವ ಮಂದಿ ಇದ್ದಾರೆ ಎಂಬುದನ್ನು ಮರೆತಿದ್ದಾರೆನೋ ಎಂಬಂತೆ ಅನಿಸುವುದು ಸಹಜ... ಇನ್ನು ಕೆಲವು ದಿನಗಳಿಂದ ಪ್ರಸಾರವಾಗುತ್ತಿರುವ ಒಂದು ರಿಯಾಲಿಟಿ ಷೋ ಬಗ್ಗೆ ಹೇಳಲೇ ಬೇಕು....ಹೌದು "ಅದು ಹಳ್ಳಿ ಹೈದ ಪ್ಯಾಟೆಗ್ ಬಂದ" ಎಂಬ ಷೋ....ಕರ್ನಾಟಕದ ಗುಡ್ಡಗಾಡಿನ ಯುವಕರರಿಗೆ  ಪ್ಯಾಟೆ ಲೈಫ್ ತೋರಿಸಿ ಆಟ ಆಡಿಸುವ ಈ ರಿಯಾಲಿಟಿ ಷೋ ಮೊದಲು ನನ್ನಲ್ಲಿ ಒಂದು ರೀತಿಯ ಕೂತುಹಲ ಮೂಡಿಸಿತ್ತು ಆದರೆ ನೋಡುತ್ತಾ ನೋಡುತ್ತಾ ರಿಯಾಲಿಟಿ ಷೋನ ಹೆಸರಿನಲ್ಲಿ ಆ ಮುಗ್ದ ಹುಡುಗರಿಗೆ ಅವಮಾನ ಮಾಡುವ ಪರಿ ನೀವು ಕೂಡ ನೋಡಿದ್ದಿರಿ ಎಂದು ನನ್ನ ತಿಳಿದಿದ್ದೇನೆ.... ಮಾನವೀಯ ಮೌಲ್ಯಗಳನ್ನು ಮರೆತು ಈ ಷೋ ನಲ್ಲಿ ಹಿನ್ನೆಲೆ ದ್ವನಿಯಲ್ಲಿ ಹೇಳುವ ಮಾತುಗಳನ್ನು ಕೇಳಿದಾಗ ಕೆಳುಗರಿಗೆನೋ ಒಂದು ರೀತಿಯ ತಮಾಷೆ ಎನಿಸಿದರೂ..... ಒಂದು ಜವಾಬ್ಧಾರಿಯುತ ಹೊಣೆ ಹೊತ್ತ ಚಾನೆಲ್ ಮಾಡುವ ಕೆಲಸ ಇದಲ್ಲವೆಂಬುದು ನನ್ನ ವಾದ.....ಇನ್ನು mentor ಗಳೆಂಬ ನಟಿಮಣಿಯರು.... ಅವರುಗಳು ಹಾಕುವ ಬಟ್ಟೆಗಳು...ಆ ಮುಗ್ದ ಹುಡುಗರೊಂದಿಗೆ ನಡೆದುಕೊಳ್ಳುವ ರೀತಿ....ಇವೆಲ್ಲವುಗಳನ್ನು ನೋಡಿದಾಗ ಬೆಂಗಳೂರಿನಲ್ಲಿ ಇಂಗ್ಲಿಷ್ ಕಾನ್ವೆಂಟ್ ಗಳಲ್ಲಿ ಓದಿ....ಡಿಗ್ರಿ ಪಡಿದಿರುವ....ನಾಗರಿಕತೆ ತಿಳಿದಿರುವರಂತೆ ಬೀಗುವ ಇವರುಗಳಿಗಿಂತ ನಾಗರೀಕ ಸಮಾಜದಿಂದ ಬಹುದೂರ ಇದ್ದು ನಾಗರಿಕತೆ ಎಂಬುದೆನೆಂದು ತಿಳಿಯದೆ ಇದ್ದರು ಅವರುಗಳು ಹುಡಿಗಿಯರೊಂದಿಗೆ ನಡೆದುಕೊಳ್ಳುವ ರೀತಿಯೇ ಎಷ್ಟೋ ಮೇಲೂ ಎನಿಸುತ್ತದೆ.....

ಇನ್ನು ಇವರಿಗೆ "ಟಾಸ್ಕ್" ಎನ್ನುವ ಹೆಸರಿನಲ್ಲಿ ಕೊಡುವ ಹಿಂಸೆ ನೋಡುವ ವಿಕ್ಷಕರಿಗೆ (ಕೆಲವರಿಗೆ ಮಾತ್ರ) ಮನರಂಜನೆ ಎನಿಸಿದರೂ ನಿಜವಾಗಿಯೂ ಇಷ್ಟು ಕ್ರೂರವಾಗಿ ನಡೆಸಿಕೊಳ್ಳುವುದೇ ಮನರಂಜನೆಯೇ?? ಎಂಬುದೊಂದು ಪ್ರಶ್ನೆ ನನ್ನನ್ನು ಕಾಡುತ್ತಿದೆ.....ಅಸಲಿಗೆ ಇವರಿಗೆ ನೀಡುವ ಟಾಸ್ಕ್ ಗಳನ್ನೂ ನೋಡಿ....MG  Road , Bridage Road , Mall  ಗಳಿಗೆ ಬರುವ ಅದರಲ್ಲೂ ಹುಡುಗಿಯರ mobile ನಂಬರ್ ತೆಗೆದುಕೊಳ್ಳುವುದು......ತಮ್ಮ mentor ಎಂದು ಕರೆಸಿಕೊಳ್ಳುವ ನಟಿಮಣಿಯರನ್ನು ಎತ್ತಿಕೊಂಡು ಕೆಸರಿನಲ್ಲಿ ಓಡುವುದು.....ಅದನ್ನು ಮಾಡದೇ ಸೋತಾಗ elimination  ಮಾಡುವುದು..... ಅಲ್ಲಾ ಬೆಂಗಳೂರು ಎಂಬ ಮಾಯಾನಗರಿಯಲ್ಲಿ ಯಾರನ್ನಾದರೂ ಹೆಸರು ಕೇಳಿದರೆ ಹೇಳುವುದೇ ಕಷ್ಟ ಅಂತಹದರಲ್ಲಿ ಪಾಪ  ಬೆಂಗಳೂರು ಎಂದರೆ ಏನು ಅಂತ ತಿಳಿಯದೆ ಇರುವ ನೋಡಲು ಕಾಡು ಮನುಷ್ಯರಂತೆ ಒರಟಾಗಿ ಕಾಣುವ ಇವರಿಗೆ ಅದು ನಮ್ಮ ಬೆಂಗಳೂರಿನ ಹುಡುಗಿಯರು ತಮ್ಮ ಮೊಬೈಲ್ ನಂಬರ್ ಕೊಡುವರೇ???.......  ಇದರ ಮಧ್ಯೆ ಈ task ಗಳನ್ನೂ ಮಾಡಲು ವಿಫಲರಾದ ಹುಡುಗರಿಗೆ ನಟಿಮಣಿಯರಿಂದ ಸಿಗುವ ಬೈಗುಳ....ಹೊಡೆತ...ಅಣಕಿಸಿ ಮಾತನಾಡುವ ಶೈಲಿ...ಇವೆಲ್ಲವನ್ನು ನೋಡಿದಾಗ ನಿಜವಾಗಿಯೂ ಇಂಥಹ ರಿಯಾಲಿಟಿ ಷೋ ಗಳ ಅಗತ್ಯವೆನಾದರೂ ನಮಗೆ ಇದೆಯೇ ಎಂಬ ಪ್ರಶ್ನೆ ಮೂಡುತ್ತದೆ.... ಮೊನ್ನೆ ನಾನು ನೋಡಿದ episode  ಒಂದರಲ್ಲಿ ಇದ್ದ ಟಾಸ್ಕ್ ನೋಡಿ ನಾನು ನಿಜಕ್ಕೂ ದಂಗಾದೆ!!! ಅದು ಕುಸ್ತಿ ಆಡುವುದು.... ಅದು ಕೇವಲ ಹುಡುಗರಿಗೆ ಮಾತ್ರ ಅಲ್ಲಾ ನಟಿಮಣಿಯರಿಗೂ ಸಹ...... ಕುಸ್ತಿ ಆಡುವುದು ಮೊದಲಿಂದಲೂ ನಮ್ಮ ದೇಶದಲ್ಲಿ ಕಾಣುವ ಆಟ...ಆದರೆ ಹುಡುಗಿಯರು ತುಂಡು ಬಟ್ಟೆ ತೊಟ್ಟು WWE ಆಡುವುದೆಂದರೆ??? ಇಂಥಹ ಪಾಶ್ಚಾತ್ಯ ಶೈಲಿಯ ಆಟಗಳನ್ನು ಆಡಿಸುವ ಅಗತ್ಯವೆನಾದರೂ ಇದೆಯೇ??? ನಮ್ಮ ದೇಶದ ಹೆಣ್ಣಿಗೆ ಒಂದು ಪವಿತ್ರವಾದ ಗೌರವ, ಸ್ಥಾನ ನೀಡಿರುವ ನಾವುಗಳು ಈ ರೀತಿ ತುಂಡು ಉಡುಪು ತೊಟ್ಟು ಜಗಳವಾಡುವುದನ್ನು ನೋಡಿ ಖುಷಿ ಪಡುವುದೇ ಮನರಂಜನೆಯೇ?? ಇದನ್ನೇ ನಾವು ಮನರಂಜನೆ ಎನ್ನುವುದಾದರೆ ನಮ್ಮ ನಮ್ಮ ನೈತಿಕ ಮೌಲ್ಯದ ಅದಃಪತನ ಅಲ್ಲವೆ???

ಕೊನೆಯದಾಗಿ ನಾನು ನಿಮ್ಮ ಮುಂದೆ ಇಡುವ ಪ್ರಶ್ನೆ...... ಕಾಡಿನಿಂದ ಕರೆತಂದ ಆ ಹುಡುಗರನ್ನು ಜವಾಬ್ಧಾರಿಯುತ  ನಾಗರಿಕನನ್ನಾಗಿ ಮಾಡುವ ಕಾರ್ಯ ಮರೆತು ಕೇವಲ ತಮ್ಮ ಚಾನೆಲ್ ಪ್ರಚಾರಕ್ಕೆ.....ಜಾಹಿರಾತಿನಿಂದ ಬರುವ ದುಡ್ಡಿಗೆ......ಈ ರೀತಿ ನಡೆಸಿಕೊಳ್ಳುವ ಇಂತಹ ಷೋ ಗಳು ನಿಜವಾಗಿಯೂ ನಮಗೆ ಅಗತ್ಯವಿದೆಯೇ??? ಇದೊಂದೇ ಷೋ ಅಲ್ಲಾ ಬಹುತೇಕ ಕನ್ನಡ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿರುವ ಬಹುತೇಕ ಇಲ್ಲ ಡಾನ್ಸ್ ರಿಯಾಲಿಟಿ ಷೋ ಗಳು ಸಹ ಇದನ್ನೇ ಮಾಡುತ್ತಿವೆ....ಕೇವಲ ಒಂದು - ಎರಡು ಚಿತ್ರಗಳಲ್ಲಿ ನಟಿಸಿದ ಮಾತ್ರಕ್ಕೆ ಅವರನ್ನು chief  judge  ಎಂದು ಕೂರಿಸುವ.....ಡಾನ್ಸ್ ನ ಗಂಧವೇ ತಿಳಿಯದ ಅವರು ಕಷ್ಟ ಪಟ್ಟು ಡಾನ್ಸ್ ಕಲಿತು ಅವರ ಮುಂದೆ ಡಾನ್ಸ್ ಮಾಡುವ ಸ್ಪರ್ಧಿಗಳಿಗೆ ನೀಡುವ ಪ್ರತಿಕ್ರಿಯೆಯನ್ನು ಆ ದೇವರೇ ಅಲ್ಲಲ್ಲ ಆ ಷೋ ನ ಆಯೋಜಕರೆ ಮೆಚ್ಚಬೇಕು......   
                                          

03 September 2010

ಭ್ರಷ್ಟಾಚಾರ ಮತ್ತು ನಾವು !!!

ಪ್ರತಿ ಬಾರಿ ನಾವು ಯಾವುದಾರೊಂದು ವಿಷಯದ ಸಾದಕ-ಬಾದಕ ಬಗ್ಗೆ ಚರ್ಚೆ ಮಾಡುವಾಗ ಸಾಮಾನ್ಯವಾಗಿ ಬರುವ ಪದ ಭ್ರಷ್ಟಾಚಾರ.....ಇಂದು ಭ್ರಷ್ಟಾಚಾರ ಎಲ್ಲ ಕಡೆಯಲ್ಲೂ ತುಂಬಿ ತುಳುಕಾಡುತ್ತಿದೆ.....ಭ್ರಷ್ಟಾಚಾರ ಎಂದಾಕ್ಷಣ ನೆನಪಿಗೆ ಬರುವುದು ನಮ್ಮೆಲ್ಲ ನೆಚ್ಚಿನ (?) ಇಂದಿನ ರಾಜಕಾರಣಿಗಳು....ಹೌದು ಸಾಮನ್ಯವಾಗಿ ನಾವೆಲ್ಲ ತಿಳಿದಿರುವುದು ಎಲ್ಲಿ ರಾಜಕಾರಣಿಗಳಿರುತ್ತಾರೋ ಅಲ್ಲಿ ಭ್ರಷ್ಟಾಚಾರ ಇರುತ್ತದೆ, ಅವರೇ ಭ್ರಷ್ಟಾಚಾರವನ್ನು ಬೆಳೆಸುತ್ತಿರುವುದು  ಎಂದು ಅಲ್ಲವೇ ??? ಆದರೆ ನಮ್ಮ ಈ ನಿಲುವನ್ನು ಸ್ವಲ್ಪ ಓರೆ ಹಚ್ಚಿ ನೋಡಿದಾಗ ಭ್ರಷ್ಟಾಚಾರ ಬೆಳೆಸುತ್ತಿರುವುದು  ರಾಜಕೀಯ ವ್ಯಕ್ತಿಗಳಾಗಲಿ ಅಥವಾ ಸರ್ಕಾರೀ ಅಧಿಕಾರಿಗಳಗಲಿ ಅಲ್ಲ, ಬದಲಾಗಿ  ಭ್ರಷ್ಟಾಚಾರವೆಂಬ ಪೆಡಂಭೂತವನ್ನು ಇಲ್ಲಿಯವರೆಗೂ ಸಾಕಿ, ಬೆಳಸಿ, ಭವಿಷ್ಯದಲ್ಲಿಯೂ ಇದನ್ನು ಬೆಳೆಸಿಕೊಂಡು ಹೋಗುವ ಸೂಚನೆ ನೀಡುತ್ತಿರುವುದು ಪ್ರಜೆಗಳೇ, ಅಂದರೆ ನಾವುಗಳೇ....ಇದನ್ನು ಎಲ್ಲರು ಒಪ್ಪಲೇ ಬೇಕಾದ ಮಾತು, ಒಪ್ಪದಿದ್ದರೂ ಇದು ಸತ್ಯವೇ ತಾನೆ??

ಇಂದು ನಾವು  ಭ್ರಷ್ಟಾಚಾರವನ್ನು ಸರ್ವಸಮ್ಮತದಿಂದ ಒಪ್ಪಿ, ಅದನ್ನು ಪ್ರಶ್ನಿಸುವ ಅಥವಾ ಅದನ್ನು ವಿರೋಧಿಸುವ ಗೋಜಿಗೆ ಹೋಗದೆ ತಮ್ಮ ಸ್ವಂತ ಕೆಲಸವಾದರೆ ಸಾಕು ಅದಕ್ಕಾಗಿ ಎಷ್ಟು ಹಣವನ್ನದರು ಖರ್ಚು ಮಾಡಲು ಸಿದ್ದವಿದ್ದೇವೆ ಎಂಬ ಮನೋಭಾವನೆ ಬೆಳೆಸಿಕೊಂಡಿದ್ದೇವೆ...... ಭ್ರಷ್ಟಾಚಾರದ ವಿರುದ್ದ ಹೊರಡಲು ಇಂದು ನಮಗೆ ಸಮಯವೇ ಇಲ್ಲವಂತಾಗಿದೆ ಕಾರಣ ನಮಗೆ ನಮ್ಮ ದೇಶದ ಭವಿಷ್ಯದ ಬಗ್ಗೆ ಕಾಳಜಿಯಾಗಲಿ,  ಯಾವುದೇ ಚಿಂತೆಯಾಗಲಿ  ಇಲ್ಲ....ಯಾರು, ಯಾವುದು  ಹೇಗಾದರೂ ಇರಲಿ ನಮ್ಮ ಕೆಲಸ ಆಗಿ ನಾವು ನೆಮ್ಮದಿ ಇಂದ ಜೀವನ ನಡೆಸಿದರೆ ಸಾಕು ಎಂದು ಯೋಚಿಸುವರೆ ಹೆಚ್ಚು.ಅಸಲಿಗೆ ಈ  ಭ್ರಷ್ಟಾಚಾರದ ಬೇರು ಹೊಟ್ಟುವುದು ಎಲ್ಲಿಂದ?? ಈ ಪ್ರಶ್ನೆಗೆ ಉತ್ತರ ಹುಡುಕುತ್ತ ಹೋದರೆ ಸಿಗುವ ಉತ್ತರ "ಮನೆಯೇ ಮೊದಲ ಪಾಠಶಾಲೆ" ಎಂಬಂತೆ ಇದರ ಹುಟ್ಟಿಗೂ ನಮ್ಮ ಮನೆಗಳೇ ಕಾರಣ, ಇದು ನನ್ನ ವಯುಕ್ತಿಕ ಅಭಿಪ್ರಾಯ....  ಹಿಂದಿಂದ ಕಾಲದ ಲಕ್ಷಿಧಾರಾಮಾತ್ಯ ಎಂಬ ಶಾಸನ ಒಂದರಲ್ಲಿ ತಾಯಿ ತನ್ನ ಮಗುವಿಗೆ ಹೇಳಿಕೊಡುತ್ತಿದ್ದ ಕೆಲವು ಸಾಲುಗಳಿವೆ....."ಕೆರೆಯನ್ನು ಕಟ್ಟಿಸು, ಬಾವಿಯನ್ನು ತೆಗೆಸು, ದೇವಾಲಯ ನಿರ್ಮಿಸು, ನಂಬಿದವರಿಗೆ ನೆರವಾಗು, ದೀನರು ಅನಾಥರನ್ನು ಸಲಹು, ಅಪಾಯದಲ್ಲಿ ಇರುವವರನ್ನು ರಕ್ಹ್ಸಿಸು"  ಎಂದು ಆದರೆ ನಮ್ಮ ಇಂದಿನ modren  ತಾಯಂದಿರು ತಮ್ಮ ಮಕ್ಕಳಿಗೆ ಹೇಳಿಕೊಡುವುದು ಚೆನ್ನಾಗಿ ಓದು, ಒಳ್ಳೆಯ ಕೆಲಸಕ್ಕೆ ಸೇರು, software ಇಂಜಿನಿಯರ್,doctor ಆಗು, ವಿದೇಶಕ್ಕೆ ಹೋಗು, ಚೆನ್ನಾಗಿ ಸಂಪಾದನೆ ಮಾಡಿ ಆಸ್ತಿ ಸಂಪಾದಿಸು, ಯಾರನ್ನು ನಂಬಬೇಡ...... ಎಂದು. ಯಾವುದೇ ಮೌಲ್ಯಾಧಾರಿತ ಗುಣಗಳನ್ನು ಕಲಿಸುವ ಗೋಜಿಗೆ ಅವರು ಹೋಗುವುದಿಲ್ಲ....ಇಂತಹ ವಾತಾವರಣದಲ್ಲಿ ಬೆಳೆದ ಮಕ್ಕಳು ದೇಶಕ್ಕೆ ಒಳ್ಳೆಯ ಪ್ರಜೆಗಳಾಗಳು ಸಾಧ್ಯವೇ??

ಇತ್ತಿಚೆಗೆ ನಮ್ಮ ರಾಜ್ಯಪಾಲರು ಭಾಷಣ ಒಂದರಲ್ಲಿ  ಹೇಳಿದ ಮಾತು ವಿಶ್ವವಿದ್ಯಾಲಯದ VC  ಒಬ್ಬರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಕಳುಹಿಸ ಬೇಕೆಂಬುದಕ್ಕೆ ಅವರು ನೀಡಿದ ಉತ್ತರ "ಹಾಗೆ  ಭ್ರಷ್ಟಾಚಾರದ ಆರೋಪದ ವಿಶ್ವವಿದ್ಯಾಲಯದ VC ಯನ್ನು ಜೈಲಿಗೆ ಕಳುಹಿಸಬೇಕಾದರೆ ನಮ್ಮ ಎಲ್ಲ ವಿಶ್ವವಿದ್ಯಾಲಯದ VC ಜೈಲಿಗೆ ಕಳುಹಿಸಬೇಕಾಗುತ್ತದೆ" ಎಂದು....ಎಲ್ಲಿ ಸ್ವತಃ ನಮ್ಮ ರಾಜ್ಯಪಾಲರೇ ಭ್ರಷ್ಟಾಚಾರಕ್ಕೆ ಉತ್ತೆಜನಕಾರಿಯಾದ ಮಾತುಗಳನ್ನಾಡಿ ಇನ್ನು ಉಳಿದ ಅಧಿಕಾರಿಗಳಿಗೆ ಭ್ರಷ್ಟಾಚಾರವನ್ನು ಮಾಡಲು ಪರೋಕ್ಷವಾಗಿ ಹುರಿದುಂಬಿಸುವ ಕಾರ್ಯ......ಇಲ್ಲಿ ನಾನು ಹೇಳಲು ಬಯಸುವುದೇನೆಂದರೆ "ಎಲ್ಲರು ಭ್ರಷ್ಟರೇ ಆದ್ರೆ ಅಧಿಕಾರ ಇಲ್ಲದವರು ಮಾತ್ರ ಪ್ರಾಮಾಣಿಕವಾಗಿರುತ್ತಾರೆ"....

ಇಂದು ಭ್ರಷ್ಟಾಚಾರ ಎಂಬುದನ್ನು ನಾವು ಗುಂಪುಗಳಲ್ಲಿ ಚರ್ಚಿಸುವ, ಸಮಯ ಕಳೆಯಲು ಮಾತನಾಡುವ ಒಂದು ಚರ್ಚಾ ವಿಷಯವಾಗಿ ಹೋಗಿಬಿಟ್ಟಿದೆ ಹೊರತು ಅದನ್ನು ಪರಿಣಾಮಕಾರಿಯಾಗಿ ವಿರೋಧಿಸುವ ಪ್ರಯತ್ನ ನಮ್ಮದಲ್ಲ ಅದಕ್ಕಾಗಿ ಲೋಕಾಯುಕ್ತ ಸಂಸ್ಥೆ ಇದೆ ಎಂದು ಸುಮ್ಮನೆ ಕೂತಿದ್ದೇವೆ....ಸಾಮಾನ್ಯವಾಗಿ ದಿನ ನಿತ್ಯದ ಜೀವನದಲ್ಲಿ ಇಂಥಹ ಕೆಲವು ಮಾತುಗಳನ್ನು ನಾವು ಕೇಳುತ್ತಿರುತ್ತೇವೆ.....ಅಯ್ಯೋ ಬಿಡಿ ಈಗ ದೊಡ್ದು ಒಂದಿದ್ದರೆ ಸಾಕು ಯಾವ ಕೆಲಸ ಬೇಕಾದರೂ ಚಿಟಿಕೆ ಹೊಡೆಯುವಷ್ಟರಲ್ಲಿ ಆಗುತ್ತದೆ, ಅವಿನಿಗೇನು ತುಂಬ ದುಡ್ಡು ಸಂಪಾದನೆ ಮಾಡಿದ್ದಾನೆ ಬಿಡಿ, ಅಯ್ಯೋ ನಾನು ಆ department ನಲ್ಲಿ ಇರಬೇಕಾಗಿತ್ತು ಚೆನ್ನಾಗಿ ಸಂಪಾದಿಸಬಹುದಿತ್ತು, ಹೀಗೆ  ನಮ್ಮೆಲ್ಲರ ಕೇಂದ್ರ ಬಿಂದು ಒಂದೇ ಅದು ಹಣ....ಅದರ ಸಂಪಾದನೆಗಾಗಿ ಯಾವ ಮಾರ್ಗ ಬೇಕಾದರೂ ಹಿಡಿಯಬಹುದು ಎಂಬ ಮನೋಭಾವನೆ ನಮ್ಮದು....ಇನ್ನು ಸರ್ಕಾರೀ ಕೆಲಸಗಳ ವಿಷಯಕ್ಕೆ ಬಂದರೆ ಎಷ್ಟು ಲಕ್ಷ ಬೇಕಾದರೂ ಕೊಡಲು ಸಿದ್ದವಿದ್ದೇವೆ ದಯವಿಟ್ಟು ಆ ಕೆಲಸ ನಮ್ಮವರಿಗೆ ಕೊಡಿ ಎಂದು ಕೇಳುವ ಜನರಿದ್ದಾರೆ...ಅಷ್ಟು ಲಕ್ಷ ಕೊಟ್ಟಿ ಆ ಕೆಲಸ ಗಿಟ್ಟಿಸಿಕೊಂಡ ಆತ ಕೇವಲ ಅವನಿಗೆ ಬರುವ ಸಂಬಳದಿಂದ ತೃಪ್ತಿ ಹೊಂದುತ್ತನೆಯೇ?? ಇಲ್ಲ ಮತ್ತೆ ಆದೆ ಚಾಳಿ ಲಂಚ ಕೊಡಿ ನಿಮ್ಮ ಕೆಲಸ ಮಾಡಿಕೊಡಲು ರೆಡಿ.....ಇದಕ್ಕೆಲ್ಲ ಯಾರು ಕಾರಣ ವ್ಯವಸ್ಥೆಯೋ? ಇಲ್ಲ ಅದನ್ನು ಪೋಷಿಸುತ್ತಿರುವ ನಾವೋ?? ಸರ್ಕಾರ ಬಡವರಿಗಾಗಿ ನೀಡುವ ಸವಲತ್ತುಗಳನ್ನು ಪಡೆಯಲು ಲಂಚ, ಸರ್ಕಾರೀ ಕೆಲಸಕ್ಕಾಗಿ ಲಂಚ, ಕಾಲೇಜುಗಳಲ್ಲಿ  ಸೀಟ್  ನೀಡಲು ಲಂಚ, ಸರ್ಕಾರೀ ಆಸ್ಪತ್ರೆಗಳಲ್ಲಿ  ಸೌಕರ್ಯ ಪಡೆಯಲು ಲಂಚ, ಹೆಣ್ಣು ಮಕ್ಕಳ ಮದುವೆ ಮಾಡಲು ವರನಿಗೆ ಲಂಚ, ಹೀಗೆ ಭ್ರಷ್ಟಾಚಾರ ಎಂಬುದು ನಮ್ಮ ಮನೆಗಳಿಂದ ಬೆಳೆದು ಇಡೀ ರಾಷ್ಟ್ರ ವನ್ನೇ ಆವರಿಸಿ ಬಿಟ್ಟಿದೆ...ದೇವರ ಅಪ್ಪಣೆ ಇಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲ್ಲಾಡದು ಎಂಬುದು ಅಂದಿನ ಮಾತು ಆದರೆ ಈಗ ಲಂಚ ನಿಡದೇ ಇದ್ದಾರೆ ಒಂದು ಹುಲ್ಲು ಕಡ್ಡಿಯನ್ನು ಅತ್ತಿಂದ ಇತ್ತ ಹಾಕುವುದಿಲ್ಲ ಎಂಬ ಅಧಿಕಾರಿಗಳು.... ಇಂದು ಸಾಮಾನ್ಯ ಮನುಷ್ಯ ಎಂಥಹ ಸ್ಥಿತಿ ತಲುಪಿದ್ದಾನೆ ಎಂದರೆ ಭ್ರಷ್ಟಾಚಾರ ಎಂಬುದು ಇಲ್ಲ ಕಡೆಯಲ್ಲೂ ಇದೆ ಅದನ್ನು ಒಪ್ಪಿಕೊಳ್ಳದೆ ಬದುಕಲು ಬೇರೆ ದಾರಿಯೇ ಇಲ್ಲ ಎಂದು ಅದನ್ನು ಪೋಷಿಸುವ ದೈರ್ಯ ಮಾಡಿದ್ದಾನೆ, ಯಾವುದನ್ನು ಬದಲಾಯಿಸುವ ಮನಸ್ಸು ಮಾಡದೇ ಇದ್ದ ಹಾಗೆ ಇರಲಿ, ನಾವು, ನಮ್ಮ ಮನೆ ಎಂದು ಎಲ್ಲಿಯವರೆಗೂ ಬದುಕುತ್ತಿವೋ ಅಲ್ಲಿಯವರೆಗೆ ಇಂತಹ ಅನಿಷ್ಟಗಳನ್ನೂ ಹೋಗಲಾಡಿಸುವ ದೈರ್ಯ ಬರುವುದಿಲ್ಲ....  ನಮ್ಮ ರಾಜಕಾರಣಿಗಳೋ ಅವರು ಎಲ್ಲಿದ್ದರು ಸುಖಿ ಜೀವಿಗಳು ಎಲ್ಲಾ ಅಧಿಕಾರಿಗಳು ತೆಗೆದುಕೊಳ್ಳುವ ಲಂಚದಲ್ಲಿ  ಅವರ ಪಾಲು ಇದ್ದೆ ಇರುತ್ತದೆ ಇನ್ನು ಅವರು ಸಾಮಾನ್ಯ ಜನರ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಮ್ಮ ಜಾತಿ ರಾಜಕೀಯದಲ್ಲಿ ತುಂಬ busy  ಆಗಿರುತ್ತಾರೆ....ಇನ್ನು ಅವರ ಭಾಷಣ ಗಳಲ್ಲಿ ಅವರು ಬಳಸುವ ಪದಗಳೋ ಕೈ ಕತ್ತರಿಸಿ ಎಂದು BJP  ಪಾರ್ಟಿಯಲ್ಲಿ ಹೇಳಿದರೆ ನಾಲಿಗೆ ಕತ್ತರಿಸಿ ಎಂದು ಕಾಂಗ್ರೆಸ್ ಪಾರ್ಟಿ...... ಅಧಿಕಾರದಲ್ಲಿ ಇರುವ ಸರ್ಕಾರದ  ಭ್ರಷ್ಟಾಚಾರವನ್ನು ಬಯಲಿಗೆ ಎಳೆಯುತ್ತೆವೆ ಎಂದು ವಿರೋಧ ಪಕ್ಷದವರು ಪಾದಯಾತ್ರೆ ಮಾಡಿದರೆ ವಿರೋಧ ಪಕ್ಷ ಅಧಿಕಾರದಲ್ಲಿ ಇದ್ದಾಗ ಮಾಡಿದ ಭ್ರಷ್ಟಾಚಾರವನ್ನು ಎತ್ತಿ ತೋರಿಸುವ ಸರ್ಕಾರ...ಇನ್ನು ಇಂಥಹ ದೊಂಬರಾಟಗಳನ್ನೂ ನೋಡಿ ಏನು ಪ್ರಶ್ನೆ ಮಾಡದೇ ತಮ್ಮ ಕೆಲಸಗಳಲ್ಲಿ ಮಗ್ನರಾಗುವ ಬುದ್ಧಿವಂತ ಸಮುದಾಯ ಒಂದು ಕಡೆಯಾದರೆ ಸಮಾವೇಶಗಳಿಗೆ  ಹೋದರೆ ಊಟದ ಜೊತೆಗೆ ದಿನಕ್ಕೆ 100 ರೂಪಾಯಿ ಸಿಗುತ್ತದೆ ಅದರ ಜೊತೆಗೆ ರಾಜಕಾರಣಿಗಳು ಆಡುವ ಅತ್ಯಂತ ನಯವಾದ, ಗೌರವದಿಂದ ಕೂಡಿದ(?) ಮಾತುಗಳನ್ನು ಕೇಳಿ ಚಪ್ಪಾಳೆಗಳ ಸುರಿಮಳೆಯೊಂದಿಗೆ  ಫ್ರೀ entertainment  ತೆಗೆದುಕೊಳ್ಳುವ ಸಮುದಾಯ ಇನ್ನೊದು ಕಡೆ.... 

ಮಹಾತ್ಮ ಗಾಂಧೀಜಿ, ನೆಹರು, ಬೋಸ್ ರಂಥಹ ಅನೇಕ ಸ್ವತಂತ್ರ ಹೋರಾಟಗಾರರು ಬ್ರಿಟಿಷರ ವಿರುದ್ದ ಸ್ವತಂತ್ರಕ್ಕಾಗಿ ಹೊರಡದೇ ತಮ್ಮ ಪಾಡಿಗೆ ತಾವು ಇದ್ದಿದ್ದರೆ? Dr B  R ಅಂಬೇಡ್ಕರ್ ಹಿಂದುಳಿದವರ ಏಳಿಗೆಗಾಗಿ ದುಡಿಯದಿದ್ದರೆ?? ಇಂದು ನಮ್ಮ ದೇಶ ಹೀಗೆ ಇರುತ್ತಿತ್ತ??  ಎಲ್ಲಿಯವರೆಗೆ ಒಬ್ಬ ತಾಯಿ ತನ್ನ ಮಗುವಿಗೆ doctor , ಇಂಜಿನಿಯರ್ , ಸರ್ಕಾರೀ ಅಧಿಕಾರಿಯಾಗು ಇಂದು ಹೇಳುವುದನ್ನು ನಿಲ್ಲಿಸಿ, ಮಗು ನಿನೊಬ್ಬ ದೇಶ ಕಾಯುವ ಸೈನಿಕನಾಗು, ದೇಶಕ್ಕೆ ಕೀರ್ತಿ ತರುವ ಒಳ್ಳೆ ಪ್ರಜೆಯಾಗು ಎಂದು ಹೇಳಿ ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣ ನೀಡಲು ಮುಂದಾಗುತ್ತರೋ ಅಲ್ಲಿಯವರೆಗೂ ದೇಶದ ಭವಿಷ್ಯ ಹೀಗೆ ಭ್ರಷ್ಟಾಚಾರದ ಸುಳಿಗೆ ಸಿಳುಕಿರುತ್ತದೆ. ಭ್ರಷ್ಟಾಚಾರವನ್ನು ವಿರೋಧಿಸದೆ, ಪ್ರಶ್ನಿಸದೆ ನಾವು, ನಮ್ಮದೆಂದು, ಸ್ವಾರ್ಥಿಗಳಂತೆ ವರ್ತಿಸುತ್ತೆವೋ ಅಲ್ಲಿಯವರೆಗೂ ಭ್ರಷ್ಟಾಚಾರ ಕೊನೆಯಾಗಲು ಸಾಧ್ಯವಿಲ್ಲ........ 



               

24 August 2010

ಅರ್ಥವಿಲ್ಲದ ಸಮ್ಮೇಳನಗಳ ಅಗತ್ಯ ಮತ್ತು ಅನಿವಾರ್ಯತೆ!!!

ಇಂದು ನಾನು ಬರೆಯುತ್ತಿರುವುದು ಪ್ರತಿ ವರ್ಷ ಕರ್ನಾಟಕ ಸಮಾಜಶಾಸ್ತ್ರ ಸಂಘ ನೆಡುಸುವ  ಸಮಾಜಶಾಸ್ತ್ರ ಸಮ್ಮೇಳನದ ಬಗ್ಗೆ....ಇಂದಿನ ವಿಧ್ಯಾರ್ಥಿಗಳಲ್ಲಿ ಕ್ಷಿಣಿಸುತ್ತಿರುವ  ಸಮಾಜಶಾಸ್ತ್ರದ ಬಗೆಗಿನ ಆಸಕ್ತಿಯನ್ನು, ಸಮಾಜಶಾಸ್ತ್ರದ ವಿಧ್ಯಾರ್ಥಿಗಳಿಗೆ ಸರ್ಕಾರೀ ಕ್ಷೇತ್ರದಲ್ಲಿ ಆಗುತ್ತಿರುವ ಅನ್ಯಾಯವನ್ನು ಹೋಗಲಾಡಿಸಲು, ಕ್ಷಿಣಿಸುತ್ತಿರುವ  ಸಮಜಶಾಸ್ತ್ರಿಯ ಅಧ್ಯಯನಗಳಿಗೆ ಉತ್ತೇಜನ ನೀಡಲು ಅದೆಲ್ಲಕಿಂಥಲು ಅತಿ ಮುಖ್ಯವಾಗಿ ಯುವ ಸಂಶೋದನಾಕಾರರನ್ನು  ಉತ್ತೇಜಿಸಿ,  ಸಂಶೋದನ ಕ್ಷೇತ್ರದಲ್ಲಿ ಅವರ ಜ್ಞಾನ ಪ್ರದರ್ಶನಕ್ಕೆ ಒಂದು ಉತ್ತಮ ವೇದಿಕೆ ಕಲ್ಪಿಸಿ ಕೊಡುವುದು ಈ ಕರ್ನಾಟಕ ಸಮಾಜಶಾಸ್ತ್ರ ಸಂಘ ನಡೆಸುವ ಸಮ್ಮೇಳನದ ಉದ್ದೇಶ....ಈ ಸಮ್ಮೇಳನದಲ್ಲಿ ವಿವಿದ ರೀತಿಯ ವಸ್ತು ವಿಷಯಕ್ಕೆ ಸಂಬಂದಿಸಿದಂತೆ ಪ್ರಬಂಧ ಮಂಡನೆಗೆ ಅವಕಾಶವನ್ನು ನೀಡಲಾಗುತ್ತದೆ.ಇದಕ್ಕಾಗಿ ರಾಜ್ಯದ ಅನೇಕ ಸ್ಥಳಗಳಿಂದ ವಿದ್ಯಾರ್ಥಿಗಳು, ಯುವ ಸಂಶೋದಕರು ಬಂದಿದ್ದರು. ಮೊದಲನೇ ಬಾರಿಗೆ ನಾನು ಕೂಡ ನನ್ನ ಪ್ರಭಂದ ಮಂಡನೆಗೆಂದು ಹೋಗಿದ್ದೆ...ಆಗ ಅಲ್ಲಿ ನಡೆದ ಕೆಲವು ಸಿಹಿ-ಕಹಿ (ಹೆಚ್ಚಾಗಿ ಕಹಿ ಘಟನೆಗಳ) ಬಗ್ಗೆ ನಮ್ಮೊಡನೆ ಹಂಚಿಕೊಳ್ಳಲು ಈ ಒಂದು ಸಣ್ಣ ಲೇಖನ 

ಈ ಬಾರಿಯ 9 ನೇ ಸಮಾಜಶಾಸ್ತ್ರ ಸಮ್ಮೇಳನ ನೆಡದದ್ದು  ಜುಲೈ ೩-೫ ರ ವರೆಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ. ಈ  ಕನ್ನಡ ವಿಶ್ವವಿದ್ಯಾಲಯದಲ್ಲಿ ನೆಡದ ಸಮ್ಮೇಳನದಲ್ಲಿ  ಭಾಗವಹಿಸಲು ನಾನು ಮತ್ತು ನನ್ನ ಸ್ನೇಹಿತೆಯರೆಂದು ಕರೆಹಿಸಿಕೊಳ್ಳುವ ಗುಂಪೊಂದು ಅನೇಕ ಕನಸುಗಳನ್ನು ಕಟ್ಟಿಕೊಂಡು ಹೊರಟೆವು. ಮೊದಲ ಬಾರಿಗೆ ನಾನು ಒಂಟಿಯಾಗಿ ದೂರದ ಊರಿಗೆ ಹೋಗುವಾಗ ಒಂದು ರೀತಿಯ ಭಯ ನನ್ನನ್ನು ಕಾಡತೊಡಗಿತು. ನಾನು ಜುಲೈ ೨ರಂದು ಒಬ್ಬಳೇ ಬೆಂಗಳೂರಿನಿಂದ ಹೊಸಪೇಟೆಗೆ ಪ್ರಯಾಣ ಆರಂಭಿಸಿದೆ. ಇನ್ನು ಉಳಿದ ನನ್ನ ಸ್ನೇಹಿತೆಯರು ರೈಲಿನಲ್ಲಿ ಬಂದು ನನ್ನನ್ನು ಸೇರುವುದಾಗಿ ತಿಳಿಸಿದರು.... ಮೊದಲೇ ಗೊತ್ತಿಲ್ಲದ ಸ್ಥಳ ಬೆಳೆಗ್ಗಿನ ಜಾವ ಸುಮಾರು ೫.೧೦ ಕ್ಕೆ ನಾನು ಪ್ರಯಾಣಿಸುತ್ತಿದ್ದ ವೋಲ್ವೋ ಬಸ್  ಹೊಸಪೇಟೆ ಬಸ್ ನಿಲ್ದಾಣಕ್ಕೆ ಬಂದು ಸೇರಿತು...ಬಸ್ಸಿನಿಂದ ಕೆಳಗಿಳಿದ ಕೂಡಲೇ ನನಗೆ ವಸತಿ ವ್ಯವಸ್ಥೆ ಕಲ್ಪಿಸಿರುವುದು ಹೋಟೆಲ್ ಸಿದ್ಧಾರ್ಥ ಎಂದು ಮೊದಲೇ ಮೊಬೈಲ್ ಗೆ ಸಂದೇಶ ಬಂದಿದ್ದರಿಂದ ಅಲ್ಲಿಯೇ ಇದ್ದ ಆಟೋ ನಿಲ್ದಾಣದ ಬಳಿ ಹೋಗಿ ಡ್ರೈವರ್ ಒಬ್ಬರನ್ನ ಇಲ್ಲಿಂದ ಸಿದ್ಧಾರ್ಥ ಹೋಟೆಲ್ ಗೆ ಎಷ್ಟು ದೂರ ಆಗುತ್ತದೆ ಎಂದು ಕೇಳಿದಾಗ ಆತ ಇಲ್ಲಿಂದ ೧೫-೨೦ ನಿಮಿಷ ಆಗುತ್ತದೆ ಅಂದಾಗ ಅಷ್ಟು  ಹೊತ್ತಿನಲ್ಲಿ ಒಬ್ಬಳೇ ನೆಡೆದು ಹೋಗುವುದಕಿಂತ ಆಟೋ ನಲ್ಲಿ ಪ್ರಯಾಣ ಮಾಡೋಣ ಎಂದುಕೊಂಡೆ. ಕಾರಣ ನಮ್ಮ ದೇಶದಲ್ಲಿ ಇನ್ನು ಒಬ್ಬ ಹುಡುಗಿ ಒಂಟಿಯಾಗಿ, ನಿರ್ಭಯದಿಂದ ಒಬ್ಬಳೇ ಓಡಾಡುವ ಪರಿಸ್ಥಿತಿ ಇನ್ನು ನಿರ್ಮಾಣವಾಗಿಲ್ಲ ಎಂಬ ಭಾವನೆ ನನ್ನದು. (M G Road , Bridage Road etc  ಶ್ರೀಮಂತ ಮತ್ತು ಮುಂದುವರಿದ ಸ್ಥಳಗಳನ್ನು ಹೊರತು ಪಡಿಸಿ) ಸರಿ ಎಂದು ಆಟೋ ಹತ್ತಿ ಕುಳಿತ ಕೇವಲ ೩-೫ ನಿಮಿಷಗಳಲ್ಲಿ ಆಟೋ ನಾನು ಇಳಿಯಬೇಕಿದ್ದ ಸ್ಥಳ ಅಂದರೆ ಹೋಟೆಲ್ ಸಿದ್ಧಾರ್ಥ ಮುಂದೆ ಬಂದು ನಿಂತಿತು... ಜೊತೆಗೆ ಡ್ರೈವರ್ ಕೇಳಿದ್ದು ಬರೋಬ್ಬರಿ ೪೦ ರೂಪಾಯಿ.... ಸರಿ ಬೆಳಗಿನ ಜಾವ ಜೊತೆಗೆ ನಾನೆ ಮೊದಲನೇ ಪ್ರಯಾನಿಕಳಗಿದ್ದರಿಂದ ಮತ್ತು ನನ್ನ ಪ್ರಯಾಣದ ಆಯಾಸದಿಂದ ದಣಿದಿದ್ದ ನಾನು ಏನು ಮಾತನಾಡದೆ ಅವನು ಕೇಳಿದಷ್ಟು ನೀಡಿ ಹೋಟೆಲ್ ಒಳ ಹೋಗಿ ಇನ್ನು ನಿದ್ದೆಯಲ್ಲಿ ಕನಸು ಕಾಣುತ್ತಿದ್ದ ರೂಂ ಬಾಯ್ ನನ್ನು ಎಬ್ಬಿಸಿ ನನ್ನ ರೂಂ ಕೀ ತೆಗೆದುಕೊಂಡು ಒಳ ಹೋದೆ.....ಸ್ವಲ್ಪ ಹೊತ್ತು ನಾನು ಕೂಡ ನಿದ್ದೆಗೆ ಮೊರೆ ಹೋಗೋಣವೆಂದುಕೊಂದಾಗ ತಕ್ಷಣ ಇಂದೇ ನನ್ನ ಲೇಖನ ಮಂಡಿಸಬೇಕ್ಕಿದ್ದರಿಂದ ಸ್ವಲ್ಪ ತಯಾರಿ ನಡೆಸೋಣ ಇಂದು ಎದ್ದು ಕುಳಿತು...ಮತ್ತೆ ಮತ್ತೆ ಓದಿದನ್ನೇ ಓದಿ, ನನ್ನ ಪ್ರಭಂದ ಮಂಡನೆಯ ಬಳಿಕ ಯಾವ ಯಾವ ಪ್ರಶ್ನೆಗಳ ಸುರಿಮಳೆ ಸುರಿಯಬಹುದೆಂದು, ಆ ಪ್ರಶ್ನೆಗಳಿಗೆ ಯಾವ ರೀತಿ ಉತ್ತರ ನೀಡಬೇಕೆಂದು ಯೋಚಿಸತೊಡಗಿದೆ.

ಸುಮಾರಿ ೭.೩೦ ನಿಮಿಷ ಮೈಸೂರಿನಿಂದ ಬಂದಿದ್ದ ನನ್ನ ಗೆಳತಿಯರು ಸಹ ನಾನು ಇದ್ದ ಹೋಟೆಲ್ನಲ್ಲೇ ಉಳಿದುಕೊಂಡಿದ್ದಾರೆ ಎಂಬ ಸುದ್ಧಿ ತಿಳಿದು ಅವರನ್ನು ಸಂಪರ್ಕಿಸಿ ಮಾತನಾಡಿ ನಾನು ಕೂಡ ಇಲ್ಲೇ ಇರುವುದಾಗಿ ಹೇಳಿದೆ ಅವರು ನಾವೆಲ್ಲರೂ ರೆಡಿ ಆಗಿ ಬರುತ್ತೇವೆ ಒಟ್ಟಿಗೆ ಸಮ್ಮೇಳನ ನೆದೆಯುತ್ತಿರುವಲ್ಲಿಗೆ ಹೋಗೋಣ ಎಂದು ಮಾತನಾಡಿಕೊಂಡೆವು.....ಸರಿ ಎಂದು ಎಲ್ಲ ತಯಾರಿ ನಡೆಸಿ ಕೂತೆ.....೧೦.೩೦ ಆದರೂ ಒಬ್ಬ ಸ್ನೇಹಿತೆಯೂ ಪತ್ತೆಯಿಲ್ಲ....ಫೋನ್ ಮಾಡಿ ಮಾಡಿ ಲೈನ್ ಸಿಗದೇ ಸಾಕಾಗಿ ಕೊನೆಗೂ ಲೈನ್ ಸಿಕ್ಕಿ ಇಲ್ಲಿದ್ದಿರೆ ??ಎಂದು ಇಂದು ಕೇಳಿದಾಗ ನನ್ನ ಸೊ ಕಾಲ್ಡ್  ಗೆಳತಿಯರು ಹೇಳಿದ ಉತ್ತರ..... ನಿನ್ ಎಲ್ಲಿದಿಯೇ?? ನಾವು University  ನಲ್ಲಿ ಇದ್ದೇವೆ ನಿನ್ ಕಾಣ್ತಿಲ್ಲ ಅಂತ..... ಅದನ್ನ  ಕೇಳಿದ ಕೂಡಲೇ ಮೊದಲೇ ಸಣ್ಣ ಪುಟ್ಟದಕ್ಕೆಲ್ಲ ಬೇಗ ಕೋಪ ಬಾರೋ ನಂಗೆ....ನನ್ನ ಬಗ್ಗೆ ನನಗೆ ಅನ್ನಿಸಿದ್ದು ಛೆ! ನಾನು ಯಾಕೆ ಹೀಗೆ ಬೇರೆಯವರ ಮೇಲೆ ಪದೇ ಪದೇ ಅವಲಂಬಿತಳಗುತ್ತಿನಿ  ಅಂತ??? ಸರಿ ಎಂದು ಹೋಟೆಲ್ ನಿಂದ ಹೊರಟು ಬಸ್ ನಿಲ್ದಾಣಕ್ಕೆ ಮತ್ತೆ ಆಟೋನಲ್ಲೇ ಹೋದಾಗ ನಾನು ಕೊಟ್ಟ ಬಾಡಿಗೆ ಎಷ್ಟು ಗೊತ್ತೇ ??? ಕೇವಲ ೧೦ ರೂ. ಎಲ್ಲಿ ೪೦ ರೂ ಎಲ್ಲಿ ೧೦ ರೂ.??? ಮನಸ್ಸಿನಲ್ಲಿಯೇ ಎಲ್ಲರನ್ನು ಬೈಯುತ್ತ ವಿಶ್ವವಿದ್ಯಾನಿಲಯಕ್ಕೆ ಹೋಗುವ ಬಸ್ ಹತ್ತಿ ಸುಮಾರು ೧೧.೪೫ ಕ್ಕೆ ತಲುಪಿದೆ.....

ಸಮ್ಮೇಳನದಲ್ಲಿ ಬಾಗವಹಿಸಲು ಬಂದ್ದಿದ್ದವನ್ನು ನೋಡಿ ಒಂದು ಕ್ಷಣ ಬೆರಗಾದೆ...ರಾಜ್ಯದ ಅನೇಕ ಸ್ಥಳಗಳಿಂದ ಸುಮಾರು ೬೦೦-೭೦೦  ವಿದ್ಯಾರ್ಥಿಗಳು, ಯುವ ಸಂಶೋದಕರು, ಉಪನ್ಯಾಸಕರು, ಮುಂತಾದವರು ಬಂದಿದ್ದರು. ಅಲ್ಲಿ ಸೇರಿದ್ದವರೆನೆಲ್ಲ ನೋಡಿ ಒಂದು ನಿಮಿಷ ಅರೆ! ನಮ್ಮ ಸಮಾಜಶಾಸ್ತ್ರ ಎಲ್ಲೂ ಕಳೆದು  ಹೋಗಿಲ್ಲ ಇನ್ನು ಇವೆರಲ್ಲಲ್ಲಿ ಅದು ಜೀವಂತವಾಗಿದೆ ಉಸಿರಾಡುತ್ತಿದೆ ಎಂದು. ಸರಿ ಅಷ್ಟೊತ್ತಿಗಾಗಲೇ ಕಾರ್ಯಕ್ರಮ ಶುರುವಾಗಿತ್ತು...ಎಲ್ಲರು ಅವರವರ ಚರ್ಚೆಯಲ್ಲಿ ಮಗ್ನರಾಗಿದ್ದರು....

ಸಮಾಜಶಾಸ್ತ್ರ ಎಷ್ಟು ಆಕರ್ಷಕವಾದ ಹೆಸರು...ಹೆಸರೇ ಸೂಚಿಸುವಂತೆ ನಾವು ಸಮಾಜವನ್ನೇ ಅಧ್ಯಯನ ವಸ್ತುವನ್ನಗಿಸಿಕೊದು.....ಅದರ ನಿರಂತರ ಬದಲಾವಣೆ, ಅದರ ಪರಿಣಾಮ, ಪ್ರಭಾವ, ಮುಂತಾದ....ಒಟ್ಟಾರೆ ನಮ್ಮ ಸಮಾಜದೊಳಗೆ ಬರುವ ಅತಿ ಸೂಕ್ಷ್ಮ ಸುಲಭ ವಸ್ತು ವಿಷಯದಿಂದ ಹಿಡಿದು ಅತಿ ಕಠಿಣ ವಸ್ತು ವಿಷಯದವರೆಗೆ ಇದರ ಸಮಾಜ ಒಂದು ಸಮಷ್ಟಿ ಯಂತೆ ಇದು ಅದ್ಯಯನಿಸುತ್ತದೆ. ಇಲ್ಲಿ ನಾನು ಸಮಾಜಶಾಸ್ತ್ರದ ಬಗ್ಗೆ ಏಕೆ ಹೇಳುತ್ತಿದನೆ ಎಂದರೆ....ಈ ವಿಷಯದಲ್ಲಿ ಪದವಿ ಡಾಕ್ಟ್ ರೇಟ್   ಪಡೆದು ಸಮ್ಮೇಳನದ ಕಾರ್ಯದರ್ಶಿಯಾಗಿ ಆಯ್ಕೆಯಾಗಿ, ಇಡೀ ಸಮ್ಮೇಳನ ಮುನ್ನೆಡೆಸುವ ಜವಾಬ್ಧಾರಿಯನ್ನು ಹೊತ್ತಿರುವ ಒಬ್ಬ ವ್ಯಕ್ತಿಯ ಬಗೆಗೆ ಹೇಳಲು ಹೊರಟ್ಟಿದ್ದೇನೆ... ಆತನ ಹೆಸರು ಇಲ್ಲಿ ಸೂಚಿಸುವುದು ಇಲ್ಲಿ ಸಮಂಜಸವಲ್ಲ ಎನ್ನುವುದು ನನ್ನ ಭಾವನೆ......ಸಮಾಜಶಾಸ್ತ್ರ ವನ್ನು ಅದ್ಯಯನ ಮಾಡಿರುವವರು ಸಮಾಜದ ಇತರ ಜನರೊಡನೆ ಅದರಲ್ಲೂ ನಮಂಥಹ ಯುವ ಪ್ರತಿಭೆಗಳಿಗೆ ನೀಡುವ ಮಾರ್ಗದರ್ಶನ ಅತ್ಯಂತ ಪ್ರಮುಖವಾದುದು...ಆದರೆ ಇಂಥಹ ಇವರನ್ನು ನೋಡಿ ಒಬ್ಬ ವ್ಯಕ್ತಿಯನ್ನು ಹೇಗೆ ಇಲ್ಲಿನ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯ ಹೇಗೆ ಸಹಿಸಿಕೊಳ್ಳುತ್ತಿದೆ ಎಂಬುದು ನನ್ನ ಪ್ರಶ್ನೆ???? ಆತ ಅಲ್ಲಿನ ವಿದ್ಯಾರ್ಥಿಗಳು ಜೊತೆ ಹೋಗಲಿ ನನಂತಹ ನೂರಾರು ಹೊರಗಿನಿದ ಬಂದ ವಿದ್ಯಾರ್ಥಿಗಳನ್ನೂ ಏಕವಚನದಲ್ಲಿ ಸಂಬೋಧಿಸಿ ಕರೆಯುತ್ತಿದ್ದ ರೀತಿ....ತಾನೆ ಏಕ ಚಕ್ರಾದಿಪಥಿಯಂತೆ ವರ್ತಿಸುತ್ತಿದ್ದ ರೀತಿ....ನನ್ನನು ಸಿಟ್ಟಿಗೆಲಿಸುತ್ತಿದ್ದರು ಏನು ಮಾಡಲಾಗದೆ ಸುಮ್ಮನೆ ನನ್ನ ಪಾಡಿಗೆ ನಾನು ಇರುವಂತೆ ಮಾಡಿತು....

ಇನ್ನು ಪ್ರಭಂದ ಮಂಡನೆಯ ಸಮಯ ಬಂದೆ ಬಿಟ್ಟಿತು, ಅದರ ಜೊತೆಗೆ session I ರಲ್ಲಿ   Abstract Book  ನಲ್ಲಿ ನನ್ನದೇ ಮೊದಲೆನೆಯ ಹೆಸರು ಇದ್ದಿದ್ದು ಇನ್ನು ನನ್ನನು ಭಯ ಪಡುವಂತೆ ಮಾಡಿತು....ಸರಿ ನನ್ನ ಪ್ರಭಂದ ಮಂಡನೆಗೆ ತಯಾರಾಗಿದ್ದ ನನಗೆ ಅಲ್ಲಿ ತಿಳಿದಿದ್ದು Session  III ರಿಂದ ಶುರುವಾಗುತ್ತದೆ ಎಂದು...ಸ್ವಲ್ಪವು ವ್ಯವಸ್ಥಿತವಿಲ್ಲದ ರೀತಿಯಲ್ಲಿ ಎಲ್ಲರು ಬಂದು ತಮ್ಮ ತಮ್ಮ ಪ್ರಭಂದ ಮಂಡಿಸಿ ಹೋಗುತ್ತಿದ್ದರು ಅಂದ  ಹಾಗೆ ಅವರಿಗೆ ನೀಡಿದ ಸಮಯ ೧೫-೨೦ ನಿಮಿಷ.... session  III  ಮತ್ತು session  II ಮುಗಿಯುವಷ್ಟರಲ್ಲಿ ಅಂದಿನ session ಗಳನ್ನೂ ಮುಗಿಸಲು ಇನ್ನು ೨೦ ನಿಮಿಷ ಬಾಕಿ ಇದ್ದಿದರಿಂದ session  I ರ ಮೊದಲನೆಯ ಪ್ರಭಂದ ಮಂಡಿಸಲು ಇಷ್ಟವಿದ್ದರೆ ಮಂದಿಸಬಹುದಾಗಿ ಹೇಳಿದರು ಆದರೆ ಬೆಳಗಿನ್ನಿಂದ ಅನೇಕ ಕಹಿ ಘಟನೆಗಳನ್ನೂ ನೋಡಿದ್ದ ನನಗೆ ಅಂದು ನನ್ನ ಪ್ರಭಂದ ಮಂಡಿಸಲು ಆಗದ ಕಾರಣ ನಾಳೆ ಮಾಡುವುದಾಗಿ ಹೇಳಿದೆ....ಅದು ನನ್ನ ದೊಡ್ಡ ತಪ್ಪು ಎಂದು ತಿಳಿದಿದ್ದು ಆ ಸಮಯ ಕಳೆದು ಹೋದ ಮೇಲೆ....  

ಮಾರನೆಯ ದಿನ ಬೇಗನೆ ಎದ್ದು ಮತ್ತೆ ಹಿಂದಿನ ದಿನದಂಥಯೇ ತಯಾರಿಯಾಗಿ ಗೆಳತಿಯರೊಡನೆ ಹೊರಟೆವು...ಬೆಳಗ್ಗೆ ಅತಿಥಿಗಳಿಂದ ವಿಶೇಷ ಭಾಷಣವಿತ್ತು ಅದೆಂಥಹ ವಿಶೇಷ ಭಾಷಣವೆಂದರೆ ಅವರಿಗೆ ಮಾತನಾಡಲು ನೀಡಿದ್ದು ೩೦ ನಿಮಿಷ ಆದರೆ ವಿಶೇಷ ಆಹ್ವಾನಿತರೂ, ಸಮಾಜದಲ್ಲಿ, ಅದರಲ್ಲೂ ಸಮಾಜಶಾಸ್ತ್ರದ ಅಧ್ಯಯನದ ಕ್ಷೇತ್ರದಲ್ಲಿ ದೊಡ್ಡ ಹೆಸರು ಪಡೆದ ಅವರು ತೆಗೆದುಕೊಂಡದ್ದು ಬರೋಬ್ಬರಿ ಒಂದು ಗಂಟೆ  ಐವತ್ತು ನಿಮಿಷಗಳು....ಅವರು ಹೇಳಿದ್ದನ್ನು ಕೇಳಿ ಕೇಳಿ ನಿದ್ದೆಗೆ ಜಾರಿದ್ದ ನಮ್ಮನ್ನು ಕ್ರಿಯಾಶೀಲರನ್ನಾಗಿ ಮಾಡಿದ್ದೂ  Dr V  P Niranjanaradhya  ಅವರ ಪರಿಣಾಮಕಾರಿಯಾದ ಭಾಷಣ...ಅದನ್ನು ಕೇಳಿ, ಅವರನ್ನು ಅತ್ಯಂತ ಹತ್ತಿರದಿಂದ ಬಲ್ಲ ನನಗೆ ವಯುಕ್ತಿಕವಾಗಿ ಅನಿಸಿದ್ದು ಅಯ್ಯೋ! ಇವರಿಗೆ ಯಾಕೆ ಅಸ್ತು ಸಮಯ ನಿಡಬಾರದಗಿತ್ತು ಎಂದು................

ಅದಾದ ನಂತರ ಪ್ರಭಂದ ಮಂಡನೆಯ ಸಮಯ ಬಂದೆ ಬಿಟ್ಟಿತು .....ನಾನೇ ಮೊದಲನೆಯವಳು ಎಂದು ಕಾದು ಕುಳಿತ್ತಿದ್ದವಳಿಗೆ ಕಾರಣಾಂತರ ಗಳಿಂದಾಗಿ ಬೇರೆ ನಾಲ್ಕು ವಿದ್ಯಾರ್ಥಿಗಳ  ಎದುರಾಗಿದ್ದು ಪ್ರಭಂದ ಮಂಡನೆಯಯಾ ವರೆಗೆ ಕಾಯಬೇಕಾಯಿತು....ಅಬ್ಬ! ಕೊನೆಗೂ ನನ್ನ ಸರಧಿ ಬಂತು.....ಈಗ ನನ್ನ ಜಾಣ್ಮೆಯನ್ನು, ಸಂಶೋದನ  ಸಾಮರ್ಥ್ಯವನ್ನು ತೋರಿಸುತ್ತೇನೆಂದು ಬಿಗುತ್ತಿದ್ದ ನನಗೆ ಬರಸಿಡಿಲು ಬಡಿದಂತೆ Chairperson ಮಾಡಿದ ಘೋಷಣೆ ನನ್ನನು ತಬ್ಬಿಬ್ಬು ಮಾಡಿತು....ಪ್ರಭಂದ ಮಂಡನೆಯ ಅವರಾರು ನೀಡಿದ ಸಮಯ ಎಷ್ಟು ಗೊತ್ತೇ ಕೇವಲ 3 ನಿಮಿಷ.....ಅರೆ ಇದೇನಿದು ಕೇವಲ 3 ನಿಮಿಷಗಳಲ್ಲಿ ಹೇಗೆ ಮಂಡಿಸುವುದು ಹೇಗೆ?? ನಾವೇನು ಅಲ್ಲಿಂದ ಹಾಡು ಹೇಳಲು ಬಂದಿದ್ದೇವ??? ಅಲ್ಲ  3 ನಿಮಿಷದಲ್ಲಿ ಒಂದು ಕಥೆ ಹೇಳಲು ಸಾಧ್ಯವಾಗುವುದಿಲ್ಲ ಅಂಥದರಲ್ಲಿ ಒಂದು ಸಂಶೋದನ ಪ್ರಭಂದವನ್ನು ಹೇಗೆ ಮಂಡಿಸುವುದು....ಎಷ್ಟೋ ಕನಸು ಹೊತ್ತು, ಅನೇಕ ತಿಂಗಳುಗಳಿಂದ ಅದಕ್ಕಾಗಿ ಪಟ್ಟ ಶ್ರಮವೆಲ್ಲ ವ್ಯರ್ಥವಾಗಿ ಹೋಯಿತು...

ಇನ್ನು ಅಲ್ಲಿನ ಊಟದ ವ್ಯವಸ್ಥೆ ಹೇಳತೀರದು....ದೊಂಬಿಯಂತೆ ನುಗ್ಗುತ್ತಿದ್ದ ಜನರು.... ಎಲ್ಲೆಂದರಲ್ಲಿ ತಿಂದ ತಟ್ಟೆ, ಕುಡಿದ ನೀರಿನ ಗ್ಲಾಸ್ ಎಸೆದು ಹೋಗುವುದು ಇದನ್ನು ನೋಡಿ ಇವರೆಲ್ಲರೂ ನಮ್ಮ ಸಮಾಜವನ್ನು ಅಭಿವೃದ್ದಿಯತ್ತ ಸಾಗಿಸುತ್ತಿರುವ ವಿದ್ಯಾವಂತರ ಸಮೂಹವೇ ಎನಿಸುತ್ತಿತ್ತು.  ಇದರ ಜೊತೆಗೆ ಮನವಿಯತೆಯೇ ಮರೆತಂತೆ ಅಲ್ಲಿನ ಕೆಲಸಗಾರ ಮೇಲೆ ತನ್ನ ಶೌರ್ಯ, ಪ್ರತಾಪವನ್ನು ತೋರಿಸುತ್ತಿದ್ದ ಸಮ್ಮೇಳನದ ಕಾರ್ಯದರ್ಶಿ.

ಇನ್ನು ಸಂಜೆ ೬.೩೦ ರ ವೇಳೆಗೆ  ಕರ್ನಾಟಕ ಸಮಾಜಶಾಸ್ತ್ರ ಸಂಘದ ಸಾಮಾನ್ಯ ಸಭೆ ಇತ್ತು ನನ್ನು ಕೂಡ ಅದರ ಸದಸ್ಯೆ ಆಗಿದ್ದರಿಂದ ಆ ಸಭೆಯಲ್ಲಿ ಭಾಗವಿಹಿಸಬೇಕಾದ ಅಗತ್ಯ ಜೊತೆಗೆ ಅನಿವಾರ್ಯವೂ ಬಂತು.....ಅಲ್ಲಿ ನೆಡೆಯುತ್ತಿದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕಾದ ವಿಷಯ ಮುಂದಿನ ಸಮ್ಮೇಳನ ಎಲ್ಲಿ ನಡೆಸಬೇಕೆಂಬುದು....ಆ ಸಭೆಯನ್ನು ನೋಡಿ ನಂಗೆ ಅನಿಸಿದ್ದು ನಮ್ಮ ರಾಜಕೀಯ ವ್ಯಕ್ತಿಗಳಿಗಿಂತ ಇವರೇನು ಕಮ್ಮಿ......ಅಲ್ಲಿ ನೆರೆದಿದ್ದ ಸದಸ್ಯರುಗಳು ನಡೆದುಕೊಂಡ ರೀತಿ ಅವರೆಲ್ಲರೂ ನಾಗರಿಕತೆಯನ್ನು ಮರೆತಂತೆ ಇತ್ತು...

ಇನ್ನು ನಮಗೆ ಸಮ್ಮೇಳನದ Invitation ನಲ್ಲಿ ಒಬ್ಬ ವಿದ್ಯಾರ್ಥಿ ಕೇವಲ 2 ಪ್ರಭಂದಗಳನ್ನು ಮಾತ್ರ ಕಳುಹಿಸಲು ಅವಕಾಶ ಎಂದು ತಿಳಿಸಿದ್ದರು ಆದರೆ ಸಮ್ಮೇಳನದ ವತಿಯಿಂದ ನೀಡಿದ Abstract Book  ನಲ್ಲಿ ನಾನು ಕಂಡದ್ದು ಒಬ್ಬ 8  ಪ್ರಭಂದಗಳನ್ನು, ಇನ್ನೊಬ್ಬರು 6 ಹೀಗೆ....ಇಲ್ಲಿ ಇಸ್ಟೊಂದು ಪ್ರಬಂಧ ಗಳನ್ನೂ ಕಳುಹಿಸಿರುವರೆಲ್ಲರು ಸಮ್ಮೇಳನದ ಕಾರ್ಯದರ್ಶಿಯ ಆಪ್ತರು, ಸ್ನೇಹಿತರೆ ಆಗಿದ್ದರು.....ಜೊತೆಗೆ ಯಾರು ಯಾರು ಪ್ರಭಂದ ಗಳನ್ನೂ ಕಳುಹಿಸುವರೋ ಅವರೆಲ್ಲರಿಗೂ ತಮ್ಮ ಪ್ರಭಂದ ಮಂಡಿಸುವ ಅವಕಾಶ...ಪ್ರಭಂದಗಳ ಗುಣಮಟ್ಟವನ್ನು ಕೇಳುವವರೇ ಇಲ್ಲ.....   

ಅಂತು ಇಂತೂ ನಾವು  ಸಮ್ಮೇಳನಕ್ಕೆ ತೆರೆ ಎಳೆಯುವ  ಕೊನೆಯದಿನ  ಬಂದೆ ಬಿಟ್ಟಿತು.ಎಲ್ಲ ಕಾರ್ಯಕ್ರಮಗಳಲ್ಲೂ ನಡೆಯುವಂತೆ ಒಂದು ಔಪಚಾರಿಕ ಸಮಾರಂಭ, ಅಲ್ಲಿ ಮುಖ್ಯ ಅಥಿತಿಗಳಿಂದ ಒಂದು ಭಾಷಣ, ಸಮಾರಂಭ ಯಶಸ್ವಿಯಾಗದಿದ್ದರು ಮಾತು ಮಾತಿಗೂ "ಈ ಸಮಾರಂಭವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ನಿಮ್ಮೆಲ್ಲರಿಗೂ" ಎಂಬ ವಾಕ್ಯ ಅಲ್ಲಿ ನೆರೆದಿದ್ದ ನನ್ನಂತಹ ನೂರಾರು ಯುವ ಸಂಶೋದಕರಲ್ಲಿ ನಗು ಜೊತೆಗೆ ಅಲ್ಲಿನ ವ್ಯವಸ್ಥೆಯ ಬಗ್ಗೆ, ಸಮ್ಮೇಳನದ ಬಗ್ಗೆ ಒಂದು ರೀತಿಯ ಅಸಮದಾನ ಪಡುವಂತಿತ್ತು.  

ಎಲ್ಲಿ ನಾನು ನಿಮ್ಮ ಮುಂದೆ ಇಡುತ್ತಿರುವ ಪ್ರಶ್ನೆಗಳು:

ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡಿ ಸಮ್ಮೇಳನಗಳನ್ನೂ ನಡೆಸುವ ಉದ್ದೇಶಗಳಾದರೂ ಏನು ? ಕೇವಲ ಔಪಚಾರಿಕವಾಗಿ ಸಮ್ಮೇಳನಗಳನ್ನೂ ಮಾಡಿ ಆಗುವ ಅನುಕೂಲಗಳಾದರೂ ಏನು? ಯುವ ಸಂಶೋದನಾಕಾರರನ್ನು ಉತ್ತೆಜಿಸುವಲ್ಲಿ ಇಂತಹ ಸಮ್ಮೇಳನಗಳು ಎಷ್ಟರಮಟ್ಟಿಗೆ ಸಫಲವಗುತ್ತಿವೆ? ಸಮ್ಮೇಳನಕ್ಕೆ ಬಂದ ವಿದ್ಯಾರ್ಥಿಗಳು  ಇಂತಹ ಸಮ್ಮೇಳನಗಳಿಂದ ಪಡೆದುಕೊಂಡು ಹೋಗುತ್ತಿರುವುದೇನು? ಕೊನೆಯದಾಗಿ ಇಂತಹ ಸಮ್ಮೇಳನಗಳು ಸಮಾಜಶಾಸ್ತ್ರಕ್ಕೆ ಅದರ  ಬೆಳವಣಿಗೆಗಾಗಿ ಮಾಡುತ್ತಿರುವುದು ಏನು?

ಕೇವಲ ಸಮಾಜಶಾಸ್ತ್ರ ವಿಷಯ ಒಂದೇ ಅಲ್ಲ ಎಲ್ಲ ವಿಷಯಕ್ಕೆ ಸಂಬದಿಸಿದ ಇಂತಹ ಎಷ್ಟೋ ಸಮ್ಮೇಳನಗಳು ನಮ್ಮಲ್ಲಿ ನಡೆಯುತ್ತಿರುತ್ತವೆ, ಇಂತಹ ಸಮ್ಮೇಳನಗಳನ್ನು ಆಯೋಜಿಸುವ ಸಂಘಗಳು, ವಿಶ್ವವಿದ್ಯಾಲಯಗಳು ತಮ್ಮ ಜವಾಬ್ಧಾರಿಯನ್ನು ಅರಿತು ಅಲ್ಲಿಗೆ ಬರುವ ಅನೇಕ ವಿಧ್ಯಾರ್ಥಿಗಳ ಜ್ಞಾನವೃದ್ಧಿಗೆ ನೆರವಾಗುವನ್ತಿರಬೇಕು. ಇಲ್ಲವಾದರೆ ಇಂತಹ  ಸಮ್ಮೇಳನಗಳ ಅಗತ್ಯವಾದರೂ ಏನಿದೆ????

ಇನ್ನು ಸಮ್ಮೇಳನ ಮುಗಿಸಿ  return ticket ಬುಕ್ ಮಾಡದೇ ಇದ್ದ ನನ್ನ ಬೇಜವಾಬ್ದಾರಿ ತನಕ್ಕೆ ಒಂದು ದೊಡ್ಡ ಪಾಠ ಕಲಿಸಿಕೊಟ್ಟ ಉಪಾಧ್ಯಾಯರೆಂದು ಕರೆಸಿಕೊಳ್ಳುವ ಅನೇಖ ಮಹನೀಯರುಗಳು.... ನನ್ನ ಮೈಸೂರಿನಿಂದ ಬಂದ ಗೆಳೆತಿಯರುಗಳೊಂದಿಗೆ ವಾಪಾಸ್ ಹೋಗಬೇಕೆಂದು ಅಂದುಕೊಂಡು ಯಾರೋ ಒಬ್ಬರು ಮೈಸೂರಿಗೆ ಹೋಗುತ್ತಿಲ್ಲ ಅವರ ಬದಲಿಗೆ ಅವರ ಟಿಕೆಟ್ ನಲ್ಲಿ ನಾನು ಪ್ರಯಾಣ ಮಾಡಬಹುದೇ?? ಎಂದು ರೈಲ್ವೆ ಸ್ಟೇಷನ್ ನ TC  ಯನ್ನು ಕೇಳಿ ಬಂದೆ ಆತ ಸರಿ ಬನ್ನಿ ನೋಡೋಣ ಎಂದಾಗ ಅಬ್ಬ! ಹೋಗುವಗದರು ಸ್ನೇಹಿತರೊಡನೆ ಹೋಗಬಹುದು ಎಂದು ಅಂದುಕೊಂಡು ಹೋಟೆಲ್ ರೂಂ ಗೆ ಬಂದಾಗ ಅಲ್ಲಿ ಇದ್ದ ಮೈಸೂರಿನಲ್ಲಿ ವಿವಿಧ ಕಾಲೇಜ್ ಗಳಲ್ಲಿ ಉಪಾನ್ಯಾಸಕರುಗಳಾಗಿದ್ದ ಮಹನೀಯರು ನನ್ನೊಡನೆ ನೆದುದುಕೊಂಡ ರೀತಿ ತೀರ ಹೀನಾಯವಾಗಿತ್ತು....ಅವರುಗಳು ನನಗೆ ನೀವು ನಮ್ಮೊಡನೆ ಬರುವುದು ಬೇಡ,,, ಬೇರೆ ಯರೋದೋ ಟಿಕೆಟ್ನಲ್ಲಿ ನೀವು ಪ್ರಯಾಣ ಮಾಡುವುದು ಸರಿ ಇಲ್ಲ,,,,ಅಕಸ್ಮಾತ್ ಏನಾದರು ತೊಂದರೆ ಆದರೆ ಅದು ನಮ್ಮ ಮೇಲೆ ಬರುತ್ತದೆ ಇಂದು ಹೇಳಿ ನೀವು ಬಸ್ ನಲ್ಲಿ ಹೋಗಿ ಎಂದರು. ನನ್ನ ಗೆಳತಿಯರಿಗೂ ಅವರೇ ಟಿಕೆಟ್ ಗಳನ್ನೂ ಬುಕ್ ಮಡಿದ ಕಾರಣ ಅವ್ರು ಹೇಳಿದ್ದನ್ನು ನಾನು ಕೇಳಲೇ ಬೇಕಾಯಿತು...ನಾನು ಹೇಳಬೇಕೆಂದಿರುವುದು ಬೇರೆ ಯರೋದೋ ಟಿಕೆಟ್ನಲ್ಲಿ ಪ್ರಯಾಣ ಮಾಡುವುದು ಸರಿ ಇಲ್ಲ ಅದನ್ನು ನಾನು ಒಪ್ಪುತ್ತೇನೆ...ಆದರೆ ಒಬ್ಬ ಹುಡುಗಿ ಒಬ್ಬಳೇ ಬೆಂಗಳೂರಿಗೆ ಪ್ರಯಾಣಿಸುವುದು ಕಷ್ಟವಾಗುತ್ತದೆ ಎನ್ನುವ ಕನಿಷ್ಠ ಸೌಜನ್ಯವನ್ನು ತೋರದ ಇವರುಗಳು ತಮ್ಮ ವಿದ್ಯಾರ್ಥಿಗಳಿಗೆ ಹೇಳಿಕೊದುವುದದರು ಏನು???  ಅಕಸ್ಮಾತ್ ಏನಾದರು ತೊಂದರೆ ಆದರೆ ಎಂದು ಹೇಳಿದರು...... ರೈಲಿನಲ್ಲಿ ನಾನು ಮಾಡಬಹುದಾದ ಮಹಾಪರಾಧವಾದರೂ ಏನು ??? ನನ್ನ ಜಾಗದಲ್ಲಿ ಅವರ ಮಗಳೋ ಅಥವಾ ವಿದ್ಯಾರ್ಥಿಯೋ ಇದ್ದಾರೆ ಹೀಗೆ ನೆಡೆದು ಕೊಳ್ಳುತ್ತಿದ್ದರ???

ಸರಿ ಎಂದು ವೋಲ್ವೋ ಬಸ್ ನಲ್ಲಿ ಪ್ರಯಾಣ ಮಾಡೋಣ ಎಂದು ತೀರ್ಮಾನಿಸಿ ಟಿಕೆಟ್ ಬುಕ್ ಮಾಡಲು ಹೋದಾಗ ರಾತ್ರಿ 9 .35 ನನ್ನ ಬುಕ್ ಮಡಿದ ಬಸ್ ಇರುವುದು ರಾತ್ರಿ 11 .45 ಕ್ಕೆ ....ಅಷ್ಟು ಹೊತ್ತಿನಲ್ಲಿ ಹೋಟೆಲ್ ನಿಂದ ಬಸ್ ನಿಲ್ದಾಣಕ್ಕೆ ಹೋಗುವುದಾದರೂ ಹೇಗೆ ಎಂದು ಯೋಚಿಸುತ್ತ ಕುಳಿತೆ...ಇತ್ತ ಮೈಸೂರಿಗೆ ಹೊರಡಲು ನನ್ನ ಗೆಳೆತಿಯರು ತಯಾರಾಗಿದ್ದರು,,,ಎಲ್ಲರು ನನಗೆ ಹುಷಾರು ಎಂದು ಹೇಳಿ ಹೊರಟರು.......ಆದರೆ .........ಬಾಯಿ ಮಾತಿಗಾದರೂ.....ಒಬ್ಬಳೇ ಹೋಗುತ್ತಿದ್ದೀನಿ ಎಂದು ತಿಳಿದಿದ್ದರು ಒಂದು ಮಾತು ಹೇಳದೆ ಅವರ ಜೊತೆ ಬಂದಿದ್ದ ಲೇಡಿ Lecturer ಗಳ luggage  ತೆಗೆದುಕೊಂಡು ಹೋಗುತ್ತಿದ್ದ ಅವರನ್ನು ನೋಡಿ ನನಗೆ ಅನಿಸಿದ್ದು "ಎಂಥಹ ಉದಾತ್ತ ಮನೋಭಾವ ಉಳ್ಳವರು" ಎಂದು.....ಸರಿ ಅಲ್ಲಿಯೇ ಇದ್ದ ಒಂದು ಆಟೋ ಚಾಲಕ ಮತ್ತು ಹೋಟೆಲ್ ಸಿಬ್ಬಂದಿ ನನ್ನನ್ನು ಬಸ್ ನಿಲ್ದಾಣಕ್ಕೆ ತಲುಪಿಸಿದರು....ಗೊತ್ತಿಲ್ಲದ  ಊರಿನಲ್ಲಿ ನನಗೆ ಸಹಾಯ ಮಾಡಿ ಹೊಸಪೇಟೆ ಅಲ್ಲಿನ ಜನಕ್ಕೆ ನಾನು ಚಿರಋಣಿ....

ಬರುವಾಗ ಕತ್ತಲೆ, ಹೋಗುವಾಗ ಕತ್ತಲೆ
ಬಂದು ಹೋಗುವ ನಡುವೆ ಬರೀ ಬೆತ್ತಲೆ..........ಎನ್ನುವ ಈ ಹಾಡನ್ನು ನಾನು 

ಬರುವಾಗ ಒಬ್ಬಳೇ, ಹೋಗುವಾಗ ಒಬ್ಬಳೇ 
ಬಂದು ಹೋಗುವ ನಡುವೆ ಸಮ್ಮೇಳನದ ಗದ್ದಲೇ....ಬರೀ ಗದ್ದಲೇ....